ಲಾಕ್‌ಡೌನ್: ಶೌಚಾಲಯ, ಸ್ಮಶಾನದಲ್ಲಿ ದಿನ ಕಳೆದ ಯುವಕ

By Kannadaprabha NewsFirst Published Apr 17, 2020, 10:41 AM IST
Highlights

ಲಾಕ್‌ಡೌನ್‌ ಆದೇಶ ಜಾರಿಯಾಗುವ ಮೊದಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆಂದು ಬಂದು ವಸತಿಗೃಹದಲ್ಲಿ ನೆಲೆಸಿ ಬಳಿಕ ಊರಿಗೆ ಮರಳಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಕೇರಳ ಮೂಲದ ಕಣ್ಣೂರಿನ ಯುವಕನೋರ್ವನನ್ನು ಕೊನೆಗೂ ಜಿಲ್ಲಾಡಳಿತದ ಸಹಾಯದಿಂದ ಹುಟ್ಟೂರು ಕೇರ​ಳಕ್ಕೆ ಕಳುಹಿಸಲಾಗಿದೆ.

ಕುಂದಾಪುರ(ಏ.17): ಲಾಕ್‌ಡೌನ್‌ ಆದೇಶ ಜಾರಿಯಾಗುವ ಮೊದಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆಂದು ಬಂದು ವಸತಿಗೃಹದಲ್ಲಿ ನೆಲೆಸಿ ಬಳಿಕ ಊರಿಗೆ ಮರಳಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಕೇರಳ ಮೂಲದ ಕಣ್ಣೂರಿನ ಯುವಕನೋರ್ವನನ್ನು ಕೊನೆಗೂ ಜಿಲ್ಲಾಡಳಿತದ ಸಹಾಯದಿಂದ ಹುಟ್ಟೂರು ಕೇರ​ಳಕ್ಕೆ ಕಳುಹಿಸಲಾಗಿದೆ.

ಕೇರಳದ ಕಣ್ಣೂರಿನ ಸಜಿತ್‌ (21) ಪ್ರಧಾನಿ ಲಾಕ್‌ಡೌನ್‌ ಘೋಷಿಸುವ ಮೊದಲೇ ದೇವಿ ದರ್ಶನಕ್ಕಾಗಿ ಕೊಲ್ಲೂರಿಗೆ ಆಗಮಿಸಿದ್ದನು. ಪ್ರತಿ ದಿನ ಪೂಜೆಗೆ ಆಗಮಿಸುತ್ತಿದ್ದ ಸಜಿತ್‌ ಮಧ್ಯಾಹ್ನದವರೆಗೂ ದೇವಸ್ಥಾನದ ಜಗುಲಿಯಲ್ಲಿ ಜಪ, ಪ್ರದಕ್ಷಿಣಿ ಮಾಡಿ ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದನು. ಲಾಕ್‌ಡೌನ್‌ ಘೋಷಣೆಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆಂದು ಬಂದಿದ್ದವರು ತರಾತುರಿಯಲ್ಲಿ ಹಿಂತಿರುಗಿದ್ದರೂ, ಸಜಿತ್‌ ಮಾತ್ರ ಕೇರಳಕ್ಕೆ ವಾಪಾಸ್ಸಾಗಿರಲಿಲ್ಲ.

ಲಾಡ್ಜ್‌ ಬಂದ್‌, ಸ್ಮಶಾನದಲ್ಲಿ ವಾಸ್ತವ್ಯ!

ಮಲಯಾಳಂ ಹಾಗೂ ಇಂಗ್ಲಿಷ್‌ ಮಾತನಾಡುತ್ತಿದ್ದ ಸಜಿತ್‌ ಸುಶಿಕ್ಷಿತನಾಗಿದ್ದ. ಕೊಲ್ಲೂರಿನಲ್ಲಿ ಊಟ ಹಾಗೂ ವಸತಿ ಬಂದ್‌ ಆದರೂ ಆತ ಯಾರೊಂದಿಗೂ ತನ್ನ ಸಂಕಷ್ಟವನ್ನು ಹೇಳಿಕೊಂಡಿರಲಿಲ್ಲ. ದೇವಸ್ಥಾನದಲ್ಲಿ ಕೊಡುವ ಪ್ರಸಾದೂಟವನ್ನು ತಿಂದು ದಿನದೂಡುತ್ತಿದ್ದ ಸಜಿತ್‌ಗೆ ಆರಂಭದಲ್ಲಿ ಕೊಲ್ಲೂರಿನ ಕೆಲ ಸ್ಥಳೀಯ ಯುವಕರು ನೆರವಾಗಿದ್ದರು. ದೇವಸ್ಥಾನದ ವಸತಿಗೃಹಗಳು ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದೆ ಸೌಪರ್ಣಿಕ ನದಿ ತಟದಲ್ಲಿನ ಶೌಚಾಲಯ ಹಾಗೂ ಸ್ಮಶಾನಗಳಲ್ಲಿ ವಾಸ್ತವ್ಯ ಹೂಡಿ ದಿನಗಳೆದಿದ್ದ.

ಆಹಾರ ಕಿಟ್‌ನಲ್ಲಿ ಸಿಕ್ಕ ಚಿನ್ನದ ಉಂಗುರ: ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕ..!

ಲಾಕ್‌ಡೌನ್‌ ಅವಧಿ ವಿಸ್ತರಣೆಯಾಗುತ್ತಿದ್ದಂತೆ ಊರಿಗೆ ಹೋಗುವ ಹಂಬಲಕ್ಕೆ ಬಿದ್ದ ಸಜಿತ್‌ ಕೇರಳದ ಹೆಲ್ಪ್‌ಲೈನ್‌ ಸಂಪರ್ಕಿಸಿ ಸಹಾಯ ಕೋರಿದ್ದ ಎನ್ನಲಾಗಿದೆ. ಈ ವೇಳೆ ನೆರವಿಗೆ ಬಂದಿದ್ದ ಕಣ್ಣೂರು ಕ್ಷೇತ್ರದ ಸಂಸದ ಕೆ. ಸುಧಾಕರನ್‌, ಮಂಗಳೂರಿನ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಅವರನ್ನು ಸಂಪರ್ಕಿಸಿ ಆತನಿಗೆ ನೆರವಾಗುವಂತೆ ಕೋರಿದ್ದರು. ಅವರು ನೀಡಿದ್ದ ಮಾಹಿತಿಯ ಆಧಾರದಲ್ಲಿ ಉಡುಪಿ ಜಿಲ್ಲಾಡಳಿತವನ್ನು ಸಂಪರ್ಕಿಸಿ ಯುವಕನಿಗೆ ಇರುವ ಮಾನಸಿಕ ಖಿನ್ನತೆಯನ್ನು ವಿವರಿಸಿ ಫ್ಯಾಕ್ಸ್‌ ಮಾಡಿ ಸಹಕಾರಕ್ಕೆ ಮನವಿ ಮಾಡಿದ್ದರು.

ಲಾಕ್‌ಡೌನ್‌: ತಾಯಿ ಸತ್ತಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿ ಬಿದ್ದ ವ್ಯಕ್ತಿ..!

ಫ್ಯಾಕ್ಸ್‌ ಸಂದೇಶಕ್ಕೆ ಸ್ಪಂದಿಸಿದ್ದ ಜಿಲ್ಲಾಡಳಿತ, ಕೊಲ್ಲೂರು ಪೊಲೀಸರ ನೆರವಿನಿಂದ ಯುವಕನನ್ನು ಪತ್ತೆ ಹಚ್ಚಿ ಎಎಸ್‌ಐ ಜನಾರ್ದನ್‌ ಅವರ ನೆರವಿನಿಂದ ಆತನನ್ನು ಹೆಜಮಾಡಿಯ ಉಡುಪಿ ಜಿಲ್ಲಾ ಗಡಿಗೆ ಕರೆ ತರಲಾಗಿತ್ತು. ಅಲ್ಲಿಂದ ಮಿಥುನ್‌ ರೈ ಕಳುಹಿಸಿದ ಆ್ಯಂಬುಲೆನ್ಸ್‌ನಲ್ಲಿ ರಾಜ್ಯದ ಗಡಿ ಭಾಗವಾದ ತಲಪಾಡಿಯವರೆಗೂ ಯುವಕನನ್ನು ಕಳುಹಿಸಿದ್ದರು. ಅಲ್ಲಿಂದ ಸಂಸದ ಸುಧಾಕರನ್‌ ಅವರು ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ಸಜಿತ್‌ ತನ್ನೂರಿಗೆ ತಲುಪಿದ್ದಾನೆ.

click me!