ಸಾಮಾಜಿಕ ಜಾಲತಾಣದ ಹಿಂದಿನ ಶಕ್ತಿಯೇ ಸ್ತ್ರೀ: ಸಂಸದ ತೇಜಸ್ವಿ ಸೂರ್ಯ

By Kannadaprabha NewsFirst Published Mar 30, 2023, 11:30 PM IST
Highlights

ನಾವು ಇನ್ನೂ ಹೆಚ್ಚೆಚ್ಚು ಯುವಕರನ್ನು ತಲುಪಬೇಕಿದೆ. ಅದಕ್ಕೆ ಉತ್ತಮ ವೇದಿಕೆ ಎಂದರೆ ಅದು ಡಿಜಿಟಲ್‌ ಮಾಧ್ಯಮ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 

ಗದಗ (ಮಾ.30): ನಾವು ಇನ್ನೂ ಹೆಚ್ಚೆಚ್ಚು ಯುವಕರನ್ನು ತಲುಪಬೇಕಿದೆ. ಅದಕ್ಕೆ ಉತ್ತಮ ವೇದಿಕೆ ಎಂದರೆ ಅದು ಡಿಜಿಟಲ್‌ ಮಾಧ್ಯಮ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ವೈರಲ್‌ ಸುದ್ದಿಗಳ ಹಿಂದಿನ ಶಕ್ತಿಯೇ ಮಹಿಳೆಯರು ಎಂದರೆ ತಪ್ಪಾಗಲಾರದು. ನನ್ನ ತಾಯಿಯೂ ಡಿಜಿಟಲ್‌ ವಾರಿಯರ್‌ ಎಂದು ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಧಾರವಾಡ ವಿಭಾಗದ ನಾಲ್ಕು ಸಂಘಟನಾತ್ಮಕ ಜಿಲ್ಲೆಯ ಡಿಜಿಟಲ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗ ಪ್ರತಿಯೊಬ್ಬರೂ ಡಿಜಿಟಲ್‌ ಮಾಧ್ಯಮಕ್ಕೆ ಹೊಂದಿಕೊಂಡಿದ್ದಾರೆ. ಕೆಲವು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಧಾನಿ ಮೋದಿ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಕೇವಲ ಕೆಟ್ಟದ್ದಾಗಿ, ಸುಳ್ಳು ಸುದ್ದಿ ಬಿತ್ತರಿಸುತ್ತಿವೆ. ಮೋದಿ ಮೇಲೆ ವಾಗ್ದಾಳಿ ನಡೆಸುತ್ತಿವೆ. 2014ರಿಂದ ಮೋದಿ ಅವರನ್ನು ಗುರಿಯಾಗಿಸಿ ಇಂತಹ ದಾಳಿ ನಡೆಸಲಾಗುತ್ತಿದೆ. ಇತ್ತೀಚೆಗೆ ಬಿಬಿಸಿ ಕೂಡ ಮೋದಿ ಅವರನ್ನು ಟಾರ್ಗೆಟ್‌ ಮಾಡಿತ್ತು.

ಯಾರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡ್ತೀರಿ: ಸಂಸದ ತೇಜಸ್ವಿ ಸೂರ್ಯ

ಡಿಜಿಟಲ್‌ ಮಾಧ್ಯಮದ ಮೂಲಕ ಸಮರ್ಥವಾಗಿ ಸತ್ಯವನ್ನು ಹೊರತರಲಾಯಿತು. ಹಾಗಾಗಿ ಸತ್ಯವನ್ನು ಗಟ್ಟಿಯಾಗಿ ಹೇಳಲು ಡಿಜಿಟಲ್‌ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. 2014ರಿಂದ ಇಲ್ಲಿಯವರೆಗೂ ದೇಶದಲ್ಲಿ ನಡೆದಿರುವ ಪ್ರತಿಯೊಂದು ಚುನಾವಣೆಯಲ್ಲಿಯೂ ಡಿಜಿಟಲ್‌ ವಾರಿಯರ್ಸ್‌ಗಳ ಕಾರ್ಯ ಅತ್ಯಂತ ಪ್ರಮುಖವಾಗಿದೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಕಾರ್ಯಕರ್ತರಷ್ಟೇ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಮ್ಮ ಡಿಜಿಟಲ್‌ ಟೀಂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ ಎಂದು ಹೇಳಿದರು.

ಮೇ 13ರಂದು ಕಾಂಗ್ರೆಸ್‌ ಗುಡ್‌ ಬೈ: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಮೇ 13ಕ್ಕೆ ಫಲಿತಾಂಶ ಹೊರಬರಲಿದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳಲಿದೆ. ಈ ಚುನಾವಣೆಯಲ್ಲಿ ಯುವಕರು ನಿರ್ಣಾಯಕರಾಗಿದ್ದಾರೆ. ಡಿಜಿಟಲ್‌ ಮಾಧ್ಯಮದ ಮೂಲಕ ಯುವಕರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಬೇಕಿದೆ. ಬಸವರಾಜ ಬೊಮ್ಮಾಯಿ ಒಂದು ವರ್ಷದಲ್ಲಿ 10 ವರ್ಷದಲ್ಲಿ ಆಗದೇ ಇರುವಷ್ಟುಅಭಿವೃದ್ಧಿ ಕೆಲಸ ಮಾಡಿದ್ದಾರೆ. 4 ವರ್ಷದಲ್ಲಿ ಅತಿಹೆಚ್ಚು ಹೂಡಿಕೆ ಹರಿದು ಬಂದಿದ್ದು ಕರ್ನಾಟಕಕ್ಕೆ. ಪ್ರತಿ 150 ಕಿ.ಮೀ.ಗೆ ಒಂದರಂತೆ ಏರ್‌ಪೋರ್ಚ್‌ಗಳ ನಿರ್ಮಾಣವಾಗಿದೆ. ಮಹಾರಾಷ್ಟ್ರನಲ್ಲಿನ ರೈತರಿಗೆ .6 ಸಾವಿರ ರೈತ ಸಮ್ಮಾನ್‌ ನಿಧಿ ಬರುತ್ತಿದೆ, ನಮ್ಮಲ್ಲಿ .10 ಸಾವಿರ ಬರುತ್ತದೆ. ಇದು ಡಬಲ್‌ ಎಂಜಿನ್‌ ಸರ್ಕಾರದ ತಾಕತ್ತು ಎಂದು ತೇಜಸ್ವಿ ಸೂರ್ಯ ಹೇಳಿದರು.

ಅನ್ನ-ಸಾರು, ಗೋದಿ ಹುಗ್ಗಿ ಮಠಕ್ಕೆ...: ಗದಗ ನಗರದಲ್ಲಿ ಡಿಜಿಟಲ್‌ ಸಮಾವೇಶ ಪ್ರಾರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಯಿತು. ಡಿಜಿಟಲ್‌ ಸಮಾವೇಶಕ್ಕಾಗಿ ಅಕ್ಕ-ಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದ ಯುವ ಕಾರ್ಯಕರ್ತರಿಗಾಗಿ ತಯಾರಾಗಿದ್ದ ಗೋದಿ ಹುಗ್ಗಿ, ಅನ್ನ-ಸಾರನ್ನು ಬಿಜೆಪಿ ನಾಯಕರೇ ಮಠಕ್ಕೆ ರವಾನೆ ಮಾಡುವ ಮೂಲಕ ನೀತಿ ಸಂಹಿತೆ ಪಾಲನೆ ಮಾಡಿದರು.

ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡಿಲ್ಲ: ಸಚಿವ ಸಿ.ಸಿ.ಪಾಟೀಲ್

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರಿಗೆ ಸಂವಿಧಾನ ವಿರುದ್ಧವಾಗಿ ಶೇ.4ರಷ್ಟುಮೀಸಲಾತಿ ನೀಡಲಾಗಿತ್ತು. ಅದನ್ನು ಕಡಿಮೆ ಮಾಡಿ ಲಿಂಗಾಯತ, ಒಕ್ಕಲಿಗರಿಗೆ ನೀಡಲಾಗಿದೆ. ಇದನ್ನು ರದ್ದು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ, ಕನಸಿನಲ್ಲಾದರೂ ನಿಮ್ಮ ಸರ್ಕಾರ ಬಂದರೆ ಯಾರ ಮೀಸಲಾತಿ ಕಿತ್ತುಕೊಂಡು ನೀವು ಮುಸ್ಲಿಮರಿಗೆ ಕೊಡುತ್ತೀರಿ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ.
-ತೇಜಸ್ವಿ ಸೂರ್ಯ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ

click me!