ಜಮೀನು ಸ್ವಾಧೀನಕ್ಕೆ ಪೊಲೀಸರು, ಶಾಸಕರ ಬೆಂಬಲಿಗರ ಅಡ್ಡಿ: ಡಿಸಿ ಕಚೇರಿ ಮುಂದೆ ಕಣ್ಣೀರಿಟ್ಟ ಮಹಿಳೆ

By Girish GoudarFirst Published Jul 13, 2022, 3:11 PM IST
Highlights

*   ಪುಟ್ಟ ಮಕ್ಕಳೊಂದಿಗೆ ಡಿಸಿ ಕಚೇರಿ ಮುಂದೆ ಧರಣಿ ಕುಳಿತು ಕಣ್ಣೀರು ಹಾಕಿದ ಮಹಿಳೆ
*  ದಿನೇಶ್ ಎಂಬಾತನ ಸುಮಾರು 5 ಎಕರೆ ಜಮೀನನ್ನು ಖರೀದಿಸಿದ್ದ ಪ್ರಸನ್ನ
*  ಅಧಿಕಾರಿಗಳ ಭರವಸೆಯ ಮಾತು ಕೇಳಿ ಮೇಲೆ ಧರಣಿ ಸತ್ಯಾಗ್ರಹ ಕೈ ಬಿಟ್ಟ ಸಂತ್ರಸ್ತ ಕಂಟುಂಬ
 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜು.13):  ತಾವು ಖರೀದಿ ಮಾಡಿರೋ ಜಮೀನನ್ನು ತಮ್ಮ ಸ್ವಾಧೀನಕ್ಕೆ ಪಡಿಸಿಕೊಳ್ಳಲು ಪೊಲೀಸರು ಹಾಗೂ ಹಾಲಿ ಶಾಸಕರ ಬೆಂಬಲಿಗರು ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಕುಟುಂಬದವರು ಇಂದು(ಬುಧವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು. ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಪ್ರಸನ್ನ ಹಾಗೂ ಹೇಮಾವತಿ ಜೀವನ ಸಾಗಿಸುತ್ತಿದ್ದರು. ಕಳೆದ ಐದು ವರ್ಷಗಳ ಹಿಂದಷ್ಟೇ ಹೇಮಾವತಿ ಪತಿ ಪ್ರಸನ್ನ ಅದೇ ಗ್ರಾಮದ ದಿನೇಶ್ ಎಂಬಾತನ ಸುಮಾರು 5 ಎಕರೆ ಜಮೀನನ್ನು ಖರೀದಿಸಿದ್ದನು.  

ಆದ್ರೆ ಅಂದಿನಿಂದ ಇಂದಿನವರೆಗೂ ಅದೇ ಗ್ರಾಮದ ಕರಿಬಸಪ್ಪ, ಮಹಂತೇಶ್ ಇವರ ಜಮೀನು ಸ್ವಾಧೀನಕ್ಕೆ ಅಡ್ಡಿ ಪಡಿಸುತ್ತಲೇ ಬಂದಿದ್ದಾರೆ. ಈ ಮೊದಲು ಆ ಜಮೀನನ್ನು ಇವರು ಉಳುಮೆ ಮಾಡುತ್ತಿದ್ದರು ಎನ್ನಲಾಗ್ತಿದೆ‌. ಆದ್ರೆ ಖುಲ್ಲಂ ಖುಲ್ಲಾ ಪ್ರಸನ್ನ ಜಮೀನು ಖರೀದಿ ಮಾಡಿದ ಮೇಲೆ ಇವರು ಮಧ್ಯೆ ಬರುವ ಪ್ರಶ್ನೆಯೇ ಇಲ್ಲ. ಆದ್ರೂ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಗೆ ಬರುವ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ನಿತ್ಯ ಕ್ಷೇತ್ರದ ಹಾಲಿ ಶಾಸರಾಗಿರುವ ರಘುಮೂರ್ತಿ ಅವರ ಬೆಂಬಲಿಗರು ಬಂದು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪ‌ ಮಾಡಿದ್ದಾರೆ. 

CHITRADURGA IRRIGATION PROJECT; ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಇನ್ನೂ ಈ ದೌರ್ಜನ್ಯ ಕುರಿತು ತುರುವನೂರು ಪೊಲೀಸ್ ಠಾಣೆಗೆ ಸಂತ್ರಸ್ತ ಕುಟುಂಬದವರು ದೂರು ನೀಡೋದಕ್ಕೆ ಹೋದ್ರು ಕೂಡ ಏನೂ ಪ್ರಯೋಜನ ಆಗಿಲ್ಲ. ಅಲ್ಲಿಯೂ ಕೂಡ ಪೊಲೀಸರು ಇವರ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾರೆ. ಇಷ್ಟೇ ಅಲ್ಲದೇ ಸುಖಾ ಸುಮ್ಮನೇ ಪತಿ ಪ್ರಸನ್ನರ ಮೇಲೆ ಇಲ್ಲಸಲ್ಲದ ಸುಳ್ಳು ಕೇಸ್ ಹಾಕಿ ಪೊಲೀಸರು ದರ್ಪ ಮೆರೆಯುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. 

ಇದನ್ನೆಲ್ಲಾ ಮನಸ್ಸಲ್ಲಿಯೇ ಇಟ್ಟುಕೊಂಡು ನೋವು ಅನುಭವಿಸ್ತಿದ್ದ ಸಂತ್ರಸ್ತ ಕುಟುಂಬದವರು, ಇಂದು ಚಿತ್ರದುರ್ಗ ಜಿಲ್ಲಾಧಿಕಾರಿ ಗಳ ಕಚೇರಿ ಮುಂಭಾಗ ರಸ್ತೆಯಲ್ಲಿಯೇ ನಮಗೆ ನ್ಯಾಯ ಕೊಡಿಸಿ ಎಂದು ಮುದ್ದಾದ‌ ನಾಲ್ಕು ಮಕ್ಕಳೊಂದಿಗೆ ಹೇಮಾವತಿ ಧರಣಿ ಕುಳಿತಿದ್ದರು. ಪೊಲೀಸರು ಹಾಗೂ ಶಾಸಕರ ಬೆಂಬಲಿಗರು ನಮಗೆ ತುಂಬಾ ದೌರ್ಜನ್ಯ ಕೊಡ್ತಿದ್ದಾರೆ ಪ್ಲೀಸ್ ನಮಗೆ ದಯಮಾಡಿ ನ್ಯಾಯ ಒದಗಿಸಿ ಕೊಡಿ ಎಂದು ಮಹಿಳೆ ಕಣ್ಣೀರು ಹಾಕಿದರು‌. 

ಇನ್ನೂ ತುರುವನೂರು ಪೊಲೀಸ್ ಠಾಣೆ CPI ವೆಂಕಟೇಶ್ ನಮ್ಮ ಪತಿಯ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ದಾಖಲಿಸಿದ್ದಾರೆ. ಜೊತೆಗೆ ನಮ್ಮ ಸಹಾಯಕ್ಕೆ ಬಾರದೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹೇಮಾವತಿ ಗಂಭೀರ ಆರೋಪ ಮಾಡಿದರು. ಇನ್ನೂ ವೇಳೆ ಪ್ರತಿಭಟನಾಕಾರ ಹಾಗೂ ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಅಷ್ಟೊತ್ತಿಗಾಗಲೇ ಚಿತ್ರದುರ್ಗ ತಹಶಿಲ್ದಾರ್ ಆದ ಸತ್ಯನಾರಾಯಣ ಅವ್ರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ಹೇಳುವ ಮೂಲಕ ನಿಮಗೆ ಯಾವುದೇ ಅನ್ಯಾಯ ಆಗದಂತೆ ನಾನು ಸೂಕ್ತ ಕ್ರಮ ಕೈಗೊಳ್ತೀನಿ ನಿಮಗೆ ನ್ಯಾಯ ಒದಗಿಸಿ ಕೊಡ್ತೀನಿ ಎಂದು ಭರವಸೆ ಕೊಟ್ಟರು. ಅಧಿಕಾರಿಗಳ ಭರವಸೆಯ ಮಾತುಗಳನ್ನು ಕೇಳಿದ ಮೇಲೆ ಧರಣಿ ನಿರತ ಸಂತ್ರಸ್ತ ಕಂಟುಂಬ ಧರಣಿ ಸತ್ಯಾಗ್ರಹ ಕೈ ಬಿಟ್ಟಿತು.
 

click me!