Chikkamagaluru: 16 ದಿನಗಳಿಂದ ಆರ್ಭಟಿಸಿದ್ದ ಮಳೆಗೆ ಓರ್ವ ಮಹಿಳೆ ಬಲಿ, ಇಬ್ಬರು ನಾಪತ್ತೆ!

By Govindaraj SFirst Published Jul 18, 2022, 10:59 PM IST
Highlights

ಜಿಲ್ಲಾದ್ಯಂತ ಕಳೆದ 16 ದಿನಗಳಿಂದ ಆರ್ಭಟಿಸಿದ್ದ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿದೆ. ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿವೆ. ಜಿಲ್ಲೆಯಲ್ಲಿಓರ್ವ ಮಹಿಳೆ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.18): ಜಿಲ್ಲಾದ್ಯಂತ ಕಳೆದ 16 ದಿನಗಳಿಂದ ಆರ್ಭಟಿಸಿದ್ದ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿದೆ. ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿವೆ. ಜಿಲ್ಲೆಯಲ್ಲಿಓರ್ವ ಮಹಿಳೆ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

ಮಳೆ ಅಬ್ಬರಕ್ಕೆ ಒಂದೇ ದಿನ 79.61 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗೆ ಹಾನಿ: ಚಿಕ್ಕಮಗಳೂರು ನಗರದ ಸೇರಿದಂತೆ ಜಿಲ್ಲೆಯ ಹಲವೆಡೆ ಹಗಲು ಮಳೆ ಬಿಡುವು ನೀಡಿದರೆ, ರಾತ್ರಿ ಬಿರುಸುಗೊಂಡಿದೆ. ಮಳೆಯ ಅಬ್ಬರಕ್ಕೆ ಜಿಲ್ಲಾದ್ಯಂತ ಕಳೆದ 24 ಗಂಟೆಗಳಲ್ಲಿ 31ಮನೆಗಳಿಗೆ ಹಾನಿಯಾಗಿದ್ದು, ಮಳೆ ಅಬ್ಬರಕ್ಕೆ ಒಂದೇ ದಿನ 79.61 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮರಗಳು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಧರೆಕುಸಿತ ಭೂಕುಸಿತ ಉಂಟಾಗಿದೆ. ಜು.18 ಮತ್ತು 19 ರಂದು ಜಿಲ್ಲಾದ್ಯಂತ ಇರುವ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ಹಿಂದೂ ಸಮಾಜಕ್ಕೆ ಸಿದ್ದು ಕೊಡಲಿ ಕಾವು ಆಗದಿರಲಿ: ಸಿ.ಟಿ.ರವಿ

ಮಲೆನಾಡು ಭಾಗದಲ್ಲಿ ಭಾನುವಾರ ಹಗಲಿನ ವೇಳೆ ಮಳೆಯ ಅಬ್ಬರ ತಗ್ಗಿದ್ದು ರಾತ್ರಿ ವೇಳೆ ಭಾರೀ ಮಳೆಯಾಗಿದ್ದು ಸೋಮವಾರ ಮಧ್ಯಾಹ್ನದವರೆಗೂ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ನಂತರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದೆ. ಚಿಕ್ಕಮಗಳೂರು ತಾಲೂಕು ಅರೇನೂರು ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿತ್ತು. ಬೆಳಗಿನ ಜಾವ ಅಧಿಕ ಗಾಳಿ, ಮಳೆಗೆ ಮರ ಬಿದ್ದು  1ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. 

ಸ್ಥಳೀಯರು ಮರ ತೆರವು ಕಾರ್ಯಾಚರಣೆ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತರೀಕೆರೆ ತಾಲ್ಲೂಕು ತ್ಯಾಗದಬಾಗಿ ತಾಂಡ್ಯ, ಸಿದ್ಧಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮೇಲೆ ಹಳ್ಳದ ನೀರು ಉಕ್ಕಿ ಹರಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಪರದಾಡಬೇಕಾಯಿತು. ಮಲ್ಲಂದೂರು ಗ್ರಾಮದಲ್ಲಿ ಸಹದೇವ್ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಲೆನಾಡಿನಲ್ಲಿ ಕೊಂಚ ವಿರಾಮ ನೀಡಿದ ಮಳೆ, ಆದರೂ ನಿಂತಿಲ್ಲ ಸರಣಿ ಅನಾಹುತಗಳು

ಮಹಾಮಳೆಯಿಂದ ಕೊಚ್ಚಿಹೋದವರು ನಾಪತ್ತೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ 16 ದಿನಗಳ ಕಾಲ ಸುರಿದ ಮಹಾಮಳೆಗೆ ಓರ್ವ ಮಹಿಳೆ ಮೃತಪಟ್ಟರೆ ಇಬ್ಬರು ನಾಪತ್ತೆಯಾಗಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳನ್ನು ಆಯಲು ಹೋಗಿ ನಗರದ ಉಂಡೇದಾಸರಹಳ್ಳಿ ಬಳಿ ಯಗಚಿ ಕಾಲುವೆಯಲ್ಲಿ ಕೊಚ್ಚಿ ಹೋದ ಸೂರ್ಯ ಎನ್ನುವ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ, ಇನ್ನು ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕಳೆದ 13 ದಿನಗಳ ಹಿಂದೆ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಶಾಲಾ ಬಾಲಕಿ ಸುಪ್ರಿತಾ ಈವರೆಗೆ ಪತ್ತೆಯಾಗಿಲ್ಲ. ಪ್ರತಿ ದಿನ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗದ ಕಾರಣ ಕುಟುಂಬ ಇನ್ನೂ ಕಣ್ಣೀರಿಡುತ್ತಿದೆ.

click me!