Udupi: ನರ್ಮ್ ಬಸ್ ಸಂಚಾರ ಯಾಕಿಲ್ಲ? ಸಾರ್ವಜನಿಕರು ಗರಂ

By Govindaraj SFirst Published Jul 18, 2022, 9:56 PM IST
Highlights

ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗಿವೆ. ನಗರ ಸಂಚಾರದಲ್ಲಿ ತೊಡಗಿಸಿಕೊಂಡಿದ್ದ ನರ್ಮ್ ಬಸ್ಸುಗಳು, ಬೀದಿಗಿಳಿಯಲು ಹಿಂದು ಮುಂದು ನೋಡುತ್ತಿವೆ.

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜು.18): ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗಿವೆ. ನಗರ ಸಂಚಾರದಲ್ಲಿ ತೊಡಗಿಸಿಕೊಂಡಿದ್ದ ನರ್ಮ್ ಬಸ್ಸುಗಳು, ಬೀದಿಗಿಳಿಯಲು ಹಿಂದು ಮುಂದು ನೋಡುತ್ತಿವೆ. ಈಗಾಗಲೇ ಕೆಲವು ಬಸ್ಸುಗಳನ್ನು ಅನ್ಯ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದ್ದು, ಸಾಮಾನ್ಯ ಪ್ರಯಾಣಿಕನಿಗೆ ಸರಕಾರದ ಈ ನಡೆಯಿಂದ ಬೇಸರವಾಗಿದೆ. ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ಜಿಲ್ಲೆಯ ಶೇಕಡಾ 90ರಷ್ಟು ಜನ ಖಾಸಗಿ ಬಸ್ಸುಗಳನ್ನು ಸಂಚಾರಕ್ಕಾಗಿ ಅವಲಂಬಿಸಿದ್ದಾರೆ. 

ಖಾಸಗಿ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳನ್ನು ಕೇಳುವವರಿಲ್ಲದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಗರದೊಳಗೆ ಸುಮಾರು 50 ರೂಟ್‌ಗಳಲ್ಲಿ ನರ್ಮ್ ಬಸ್ ಸಂಚಾರ ಆರಂಭಿಸಿತ್ತು. ಖಾಸಗಿ ಬಸ್ಸುಗಳ ವಿರೋಧದ ನಡುವೆಯೂ ಜನರಿಗೆ ಉತ್ತಮ ಸೇವೆ ನೀಡುತ್ತಿತ್ತು. ಕೊರೋನಾ ಬಂದಾಗ, ವ್ಯತ್ಯಯಗೊಂಡ ನರ್ಮ್ ಸಂಚಾರ, ಮತ್ತೆ ಖಾಸಗಿ ಲಾಬಿಗೆ ಮಣಿದಿದೆ. ಅರ್ಧಕ್ಕರ್ಧ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿವೆ. ಈಗಾಗಲೇ ನಾಲ್ಕಾರು ಬಸ್ಸುಗಳನ್ನು ಹಾಸನಕ್ಕೆ ಸ್ಥಳಾಂತರಿಸಲಾಗಿದೆ. ಇನ್ನಷ್ಟು ಬಸ್ಸುಗಳು ಹೊರ ಜಿಲ್ಲೆಗಳಿಗೆ ವರ್ಗಾವಣೆಯಾಗುವ ಸೂಚನೆ ದೊರೆತಿದೆ. ಸರಕಾರಿ ಬಸ್ ಸಂಚಾರವನ್ನು ವ್ಯವಸ್ಥಿತವಾಗಿ ಮೊಟಕುಗೊಳಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ. 

Udupi Jawa Bike Exhibition; ಜಾವ ನಮ್ಮ ಜೀವ, ಅಪೂರ್ವ ಜಾವ ಬೈಕ್ ಪ್ರದರ್ಶನ

ಖಾಸಗಿ ಬಸ್ಸುಗಳ  ಪ್ರಭಾವ ದಟ್ಟವಾಗಿ ಗೋಚರಿಸುತ್ತಿದೆ. ಹೊಸತಾಗಿ ನಿರ್ಮಾಣವಾದ ನರ್ಮ್ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ಪಾವತಿಸಿ ಮಳಿಗೆಗಳನ್ನು ಪಡೆದವರು ಕಂಗಾಲಾಗಿದ್ದಾರೆ. ವ್ಯಾಪಾರವಿಲ್ಲದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ನಷ್ಟ ಅನುಭವಿಸಿದ ಕೆಲ ಅಂಗಡಿಗಳು ಈಗಾಗಲೇ ಮುಚ್ಚಿವೆ. ಮತ್ತಷ್ಟು ಅಂಗಡಿಗಳು ಮುಚ್ಚುಗಡೆಯ ಹಾದಿಯಲ್ಲಿವೆ. ಬಸ್ ನಿಲ್ದಾಣಕ್ಕೆ ಬಸ್ಸೇ ಬರೆದಿದ್ದರೆ ಅಂಗಡಿ ಕಟ್ಟಿಕೊಂಡು ಮಾಡುವುದಾದರೂ ಏನು? ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಸಿನಲ್ಲಿ ಅತ್ಯುತ್ತಮ ಸೇವೆ ದೊರಕುತ್ತಿತ್ತು. 

Ananda Devadiga murder case: ಕೊಲೆಗೂ ಮುನ್ನ ನಡೆದಿತ್ತು ಮೈಜುಮ್ಮೆನಿಸುವ ಮತ್ತೊಂದು ಘಟನೆ!

ಕೋವಿಡ್ ನಂತರ ನಷ್ಟದಲ್ಲಿರುವ ಖಾಸಗಿ ಬಸ್ಸು ಉದ್ಯಮಕ್ಕೆ, ಚೇತರಿಕೆ ನೀಡಲು ಸರ್ಕಾರಿ ಬಸ್ ಸಂಚಾರವನ್ನೇ ಸ್ಥಗಿತಗೊಳಿಸುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ನಿಲ್ದಾಣದ ತುಂಬ ಬಸ್ಸುಗಳು ನಿಂತಿದ್ದರು, ಇವು ಓಡಾಟ ನಡೆಸುವ ಬಸ್ಸುಗಳಲ್ಲ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಸ್ಥಳವಿಲ್ಲದ ಕಾರಣ, ನರ್ಮ್ ಬಸ್ ನಿಲ್ದಾಣ ಸದ್ಯ ಇಂತಹ ಬಸ್ಸುಗಳ ತಂಗುದಾಣವಾಗಿದೆ. ಖಾಸಗಿ ಬಸ್ ಉದ್ಯಮ ನೆಲಕಚ್ಚಿದೆ ನಿಜ, ಇದೀಗ ಸರಕಾರಿ ಬಸ್ ಸಂಚಾರವನ್ನು ಮೊಟಕುಗೊಳಿಸಿ, ಕೋಟ್ಯಾಂತರ ವ್ಯಯಿಸಿ ಕಟ್ಟಿದ ಬಸ್ ನಿಲ್ದಾಣಗಳನ್ನು ನಿಷ್ಪ್ರಯೋಜಕ ಗೊಳಿಸಲಾಗಿದೆ. ಬಡ ಜನರ ಅನುಕೂಲಕ್ಕಾದರೂ ಮತ್ತೊಮ್ಮೆ ನರ್ಮ್ ಬಸ್ಸುಗಳು ನಗರದಲ್ಲಿ ಸಂಚಾರ ನಡೆಸಬೇಕಾಗಿದೆ.

click me!