ಕಲಬುರಗಿ: ದಲಿತರ ಮನೆ ಬಾಗಿಲ ಮುಂದೆ ತಂತಿ ಬೇಲಿ

By Kannadaprabha NewsFirst Published Jun 5, 2022, 9:54 AM IST
Highlights

*  ದಾರಿಗಾಗಿ ಕಾದು ಕುಳಿತ ದಲಿತ ಕುಟುಂಬಗಳು
*  ಉದ್ದೇಶಪೂರ್ವಕವಾಗಿಯೇ ಮಾಡಿರುವ ಹುನ್ನಾರ
*  ಇದು ಸರಿಯಲ್ಲ ಎಂದು ಕೇಳಲು ಹೋದವರ ಮೇಲೆ ಪ್ರಾಣ ಬೆದರಿಕೆ 
 

ಚವಡಾಪುರ(ಜೂ.05):  ಅಫಜಲ್ಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ದಲಿತರ ಕಾಲೋನಿಯ ಮನೆಗಳ ಬಾಗಿಲ ಮುಂದೆಯೇ ತಂತಿ ಬೇಲಿ ಹಾಕಿರುವ ಘಟನೆ ಸಂಭವಿಸಿದೆ.

ಗ್ರಾಮದ ವಿಠ್ಠಲ್‌ ಸಗರ ಎನ್ನುವವರು ದಲಿತ ಕಾಲೋನಿಯ ಪಕ್ಕದಲ್ಲಿರುವ ಜಮೀನೊಂದನ್ನು ಖರೀದಿ ಮಾಡಿದ್ದರು. ಜಮೀನಿನ ಹದ್ದುಬಸ್ತು ಅಳತೆ ಮಾಡಿಸಿ ನ್ಯಾಯಾಲಯದಿಂದ ಆದೇಶ ಮಾಡಿಸಿಕೊಂಡು ತಮ್ಮ ಜಮೀನಿನ ಹದ್ದುಬಸ್ತಿನಲ್ಲಿ ಬರುವ ಜಾಗದಲ್ಲಿ ತಂತಿ ಬೇಲಿ ಹಾಕಿದ್ದಾರೆ. ಆದರೆ ತಂತಿ ಬೇಲಿ ದಲಿತರ ಕಾಲೋನಿಯ ಮನೆಗಳ ಬಾಗಿಲಿನ ಮುಂದೆಯೇ ಬಿದ್ದಿದ್ದು, ಈಗ ದಲಿತ ಕಾಲೋನಿ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳಿಗೆ ಮನೆಯಿಂದ ಹೊರಗಡೆ ಹೋಗುವುದಕ್ಕೆ ಜಾಗವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲಬುರಗಿ ಬಳಿ ಭೀಕರ ಅಪಘಾತ: ಹೊತ್ತಿ ಉರಿದ ಬಸ್, ಮಗು ಸೇರಿ ಏಳು ಮಂದಿ ಸಜೀವ ದಹನ

ಘಟನೆ ಸಂಬಂಧ ಸಮಸ್ಯೆ ನಿವಾರಿಸಲು ಸ್ಥಳಕ್ಕೆ ತಹಸೀಲ್ದಾರ ಸಂಜೀವಕುಮಾರ ದಾಸರ್‌, ಸಿಪಿಐ ಜಗದೇವಪ್ಪ ಪಾಳಾ, ರೇವೂರ(ಬಿ)ಠಾಣೆ ಪಿಎಸ್‌ಐ ಗಂಗಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಮೀನುದಾರರು ಹಾಗೂ ದಲಿತ ಕಾಲೋನಿಯ ಜನರ ಮಧ್ಯ ಸಾಮರಸ್ಯ ಮೂಡಿಸಿ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಇದು ಉದ್ದೇಶಪೂರ್ವಕವಾಗಿಯೇ ಮಾಡಿರುವ ಹುನ್ನಾರವಾಗಿದೆ. ದಲಿತರು ಕಳೆದ 40 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಒಂದು ದಿನವು ಇಲ್ಲದ ಸಮಸ್ಯೆ ಏಕಾಏಕಿ ಎದುರಾಗಿದೆ. ಇದು ಸರಿಯಲ್ಲ ಎಂದು ಕೇಳಲು ಹೋದವರ ಮೇಲೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಈ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ದಲಿತ ಸಂಘಟನೆಗಳು ಗ್ರಾಮದ ಮುಖ್ಯ ರಸ್ತೆಯ ಮೇಲೆ ಅಹೋರಾತ್ರಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿವೆ.
 

click me!