ಮೀನುಗಾರರ ಯಾವ ಭರವಸೆ ರಾಹುಲ್‌ ಗಾಂಧಿ ಈಡೇರಿಸಿದ್ದಾರೆ? ವೇದವ್ಯಾಸ್ ಕಾಮತ್‌

By Kannadaprabha NewsFirst Published Oct 8, 2023, 3:00 AM IST
Highlights

ರಾಹುಲ್‌ ಗಾಂಧಿ ಅವರು ಸಂವಾದ ವೇಳೆ ಮೀನುಗಾರರಿಗೆ ಆರು ಪ್ರಮುಖ ಭರವಸೆ ನೀಡಿದ್ದರು. ಪ್ರತಿ ಮೀನುಗಾರರಿಗೆ 10 ಲಕ್ಷ ರು.ಗಳ ಇನ್ಸೂರೆನ್ಸ್‌ ನೀಡುತ್ತೇವೆ. ಪ್ರತಿ ಲೀಟರ್‌ ಡೀಸೆಲ್‌ಗೆ 25 ರು. ಸಬ್ಸಿಡಿಯಂತೆ ಪ್ರತಿದಿನ 500 ಲೀಟರ್‌ ಡೀಸೆಲ್‌ ನೀಡುತ್ತೇವೆ. ಡ್ರೆಜ್ಜಿಂಗ್‌ ಸಮಸ್ಯೆ ನಿವಾರಣೆಗೆ ಸಿಎಂ ಜತೆ ವೈಯಕ್ತಿಕವಾಗಿ ಚರ್ಚಿಸುವುದಾಗಿ ಹೇಳಿದ್ದು ಬಿಟ್ಟರೆ ಬೇರೇನೂ ಆಗಿಲ್ಲ: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ 

ಮಂಗಳೂರು(ಅ.08):  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕೂವರೆ ತಿಂಗಳು ಕಳೆದಿದೆ. ಚುನಾವಣಾ ಪ್ರಚಾರ ಸಂದರ್ಭ ಉಚ್ಚಿಲದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೀನುಗಾರರಿಗೆ ನೀಡಿದ ಯಾವುದೇ ಭರವಸೆಯನ್ನು ಇದುವರೆಗೆ ಈಡೇರಿಸಿಲ್ಲ, ಮಾತ್ರವಲ್ಲ ಕರಾವಳಿ ಕರ್ನಾಟಕಕ್ಕೂ ಪ್ರತ್ಯೇಕ ಸ್ಕೀಂ ಜಾರಿಗೊಳಿಸುವ ಭರವಸೆ ಈಡೇರಿಸಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಜನತೆಗೆ ಸೂಕ್ತ ಉತ್ತರ ನೀಡಲಿ. ಇಲ್ಲದಿದ್ದರೆ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

ಇಲ್ಲಿನ ಅಟಲ್‌ಸೇವಾ ಕೇಂದ್ರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನುಡಿದಂತೆ ನಡೆದಿದ್ದೇವೆ’ ಎನ್ನುವ ಕಾಂಗ್ರೆಸಿಗರ ಮಾತು ಕೇವಲ ಪ್ರಕಟಣೆಗೆ ಸೀಮಿತವಾಗಿದೆ. ರಾಹುಲ್‌ಗಾಂಧಿ ಅವರು ಸಂವಾದದಲ್ಲಿ ಆಡಿದ ಮಾತುಗಳ ವಿಡಿಯೋ ದಾಖಲೆ ನಮ್ಮಲ್ಲಿದೆ. ಆಗ ಮೀನುಗಾರರಿಗೆ ಸುಳ್ಳು ಹೇಳಿ ಮರುಳು ಮಾಡಿದರು. ಆದರೆ ಮೀನುಗಾರರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಮಾತ್ರ ಕಾಂಗ್ರೆಸಿಗರಿಗೆ ಸಮಯ ಸಿಕ್ಕಿಲ್ಲ. ಕರಾವ‍ಳಿಗೆ ಪ್ರತ್ಯೇಕವಾಗಿ ಒಂದೇ ಒಂದು ಸ್ಕೀಮ್‌ನ್ನೂ ಬಿಡುಗಡೆ ಮಾಡಿಲ್ಲ. ಇದು ಮೀನುಗಾರರು ಹಾಗೂ ಮೀನುಗಾರಿಕೆಗೆ ಮಾಡಿದ ಅನ್ಯಾಯವಾಗಿದ್ದು, ಹೊಸ ಸ್ಕೀಂ ಜಾರಿಗೊಳಿಸಿದ್ದರೆ, ಅದರ ದಾಖಲೆಗಳನ್ನು ಬಿಡುಗಡೆ ಮಾಡಲಿ, ಇಲ್ಲವೇ ಯಾಕೆ ಭರವಸೆ ಈಡೇರಿಸಿಲ್ಲ ಎಂದು ಮೀನುಗಾರರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.

ಕೆವಿಜಿ ಪ್ರಿನ್ಸಿಪಾಲ್ ಹತ್ಯೆ ಪ್ರಕರಣ: ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್‌ ಸೇರಿ 6 ಮಂದಿ ಜೈಲಿಗೆ

6 ಭರವಸೆಯೂ ಈಡೇರಿಲ್ಲ:

ರಾಹುಲ್‌ ಗಾಂಧಿ ಅವರು ಸಂವಾದ ವೇಳೆ ಮೀನುಗಾರರಿಗೆ ಆರು ಪ್ರಮುಖ ಭರವಸೆ ನೀಡಿದ್ದರು. ಪ್ರತಿ ಮೀನುಗಾರರಿಗೆ 10 ಲಕ್ಷ ರು.ಗಳ ಇನ್ಸೂರೆನ್ಸ್‌ ನೀಡುತ್ತೇವೆ. ಪ್ರತಿ ಲೀಟರ್‌ ಡೀಸೆಲ್‌ಗೆ 25 ರು. ಸಬ್ಸಿಡಿಯಂತೆ ಪ್ರತಿದಿನ 500 ಲೀಟರ್‌ ಡೀಸೆಲ್‌ ನೀಡುತ್ತೇವೆ. ಡ್ರೆಜ್ಜಿಂಗ್‌ ಸಮಸ್ಯೆ ನಿವಾರಣೆಗೆ ಸಿಎಂ ಜತೆ ವೈಯಕ್ತಿಕವಾಗಿ ಚರ್ಚಿಸುವುದಾಗಿ ಹೇಳಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಮೀನುಗಾರಿಕೆ ನಡೆಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ, ಯಾವ ಕಂಪನಿ ತಡೆದಿದ್ದಾರೆ ಎಂದು ಮಾಹಿತಿ ನೀಡಲಿ. ಸಮುದ್ರದಲ್ಲಿ ಉಚಿತ ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸುತ್ತೇವೆ ಎಂದಿದ್ದರು. ಅದು ಕೂಡ ಈಡೇರಿಲ್ಲ ಎಂದರು.

ಮೀನುಗಾರಿಕಾ ಯೋಜನೆಗಳೇ ಕಡಿತ:

ಪ್ರಸಕ್ತ ಮೀನುಗಾರರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಯ ಪ್ರಯೋಜನ ಮಾತ್ರ ಸಿಗುತ್ತಿದೆ. ಪ್ರಧಾನಿ ಮತ್ಸ್ಯಸಂಪದ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ ಇಲ್ಲಿವರೆಗೆ ಮೀನುಗಾರರಿಗೆ 16.77 ಕೋಟಿ ರು. ಸಬ್ಸಿಡಿ ದೊರೆತಿದೆ. ಬಿಜೆಪಿ ಸರ್ಕಾರ ನಾಡದೋಣಿ ಮೀನುಗಾರರಿಗೆ ಪೆಟ್ರೋಲ್‌ ಅಥವಾ ಡೀಸೆಲ್ ಚಾಲಿತ ಎಂಜಿನ್‌ ಖರೀದಿಗೆ 50 ಸಾವಿರ ಸಬ್ಸಿಡಿಗೆ 40 ಕೋಟಿ ರು. ಅನುದಾನ ನಿಗದಿಪಡಿಸಿತ್ತು, ಕಾಂಗ್ರೆಸ್‌ ಸರ್ಕಾರ ಈ ಮೊತ್ತವನ್ನು ಬಜೆಟ್‌ನಲ್ಲಿ 20 ಕೋಟಿ ರು. ಕಡಿತಗೊಳಿಸಿದೆ ಎಂದು ವೇದವ್ಯಾಸ್‌ ಕಾಮತ್‌ ಆರೋಪಿಸಿದರು.

ಶಿವಮೊಗ್ಗದಲ್ಲಿ ಉತ್ತರ ಪ್ರದೇಶ ಮಾದರಿ ಹಿಂದೂ ಮಹಾಪಂಚಾಯ್ತಿ ಸಭೆ: ವಿಹಿಂಪ

ಸಿಗಡಿ ರಫ್ಚು ಸುಂಕ ಕಡಿತ, ಸಿಗಡಿ ಕೃಷಿ ಕ್ಲಸ್ಟರ್‌ ರಚನೆಯನ್ನು ಈ ಸರ್ಕಾರ ಕೈಬಿಟ್ಟಿದೆ. ಪ್ರಮುಖ ಸ್ಥಳಗಳಲ್ಲಿ ಡ್ರೆಜ್ಜಿಂಗ್‌ಗೆ ಬಿಜೆಪಿ ಸರ್ಕಾರ 20 ಕೋಟಿ ರು. ಮಂಜೂರು ಮಾಡಿತ್ತು, ಅದನ್ನು ನಾವೇ ಬಿಡುಗಡೆ ಮಾಡಿದ್ದು ಎಂದು ಕಾಂಗ್ರೆಸ್‌ ಸರ್ಕಾರ ಹೇಳುತ್ತಿದೆ ಎಂದರು.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್‌, ಮೀನುಗಾರಿಕಾ ಮುಖಂಡರಾದ ನಿತಿನ್‌ ಕುಮಾರ್‌, ಗೌತಮ್‌, ಮೀರಾ ಕರ್ಕೇರಾ, ಪದ್ಮನಾಭ, ವಿನೋದ್‌ ಮೆಂಡನ್‌ ಇದ್ದರು.

click me!