
ಕೋಲಾರ(ಅ.08): ಗೃಹಲಕ್ಷ್ಮಿ ಯೋಜನೆಯು ನೋಂದಣಿಯಾಗಬೇಕಾದರೆ ಪಡಿತರ ಚೀಟಿಯು ಮನೆಯ ಯಾಜಮಾನಿಯ ಹೆಸರು ಮೊದಲು ಇರಬೇಕೆಂದು ಕಡ್ಡಾಯ ಮಾಡಲಾಗಿದೆ. ಈ ಕಾರಣದಿಂದಾಗಿ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಶೇ.30ರಷ್ಟು ಮಹಿಳೆಯರು ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ.
ನಂತರದಲ್ಲಿ ಪಡಿತರ ಚೀಟಿದಾರರು ತಮ್ಮ ಪತಿಯ ಹೆಸರಿನಲ್ಲಿದ್ದ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ(ಪತ್ನಿ) ಹೆಸರನ್ನು ಮೊದಲನೇದಾಗಿ ಇರುವಂತೆ ಸೇವಾ ಕೇಂದ್ರದಲ್ಲಿ ಬದಲಾಯಿಸಿಕೊಂಡು ನೋಂದಣಿ ಮಾಡಿಸಲು ಕರ್ನಾಟಕ ಒನ್ಗೆ ಹೋದರೆ 8 ದಿನ ಬಿಟ್ಟು ಬನ್ನಿ ಎಂದು ಹೇಳಿದವರು ಕಳೆದ 2 ತಿಂಗಳಿಂದ ಅಲೆದಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಗೃಹಲಕ್ಷ್ಮಿ ಮೊದಲ ಕಂತು 4,600 ಕೋಟಿ ಬಿಡುಗಡೆ: ಮನೆಯೊಡತಿ ಖಾತೆಗೆ ಹಣ ಬರೋದು ಯಾವಾಗ?
ಯೋಜನೆಯ ಲಾಭ ಸಿಗುತ್ತಿಲ್ಲ
ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವುದಿಲ್ಲ, ನೋಂದಣಿ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಸ್ವಷ್ಟಪಡಿಸುತ್ತಾರೆ, ಆದರೆ ತಿಂಗಳುಗಟ್ಟಲೇ ಅಲೆದಾಡಿದರು ನೋಂದಣಿ ಆಗುತ್ತಿಲ್ಲ. ಇದರಿಂದಾಗಿ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.
ಕೆಲವರಿಗೆ ಮೇಸೆಜ್ ಬಂದಿದೆ. ಆದರೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಬ್ಯಾಂಕ್ ಖಾತೆಗೆ ಬಂದಿದ್ದರೂ ಹಣ ಡ್ರಾ ಮಾಡಿಕೊಳ್ಳಲು ಹಲವಾರು ಅಡೆತಡೆಗಳು ಹೀಗೆ ಸಾರ್ವಜನಿಕರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಬಹಳಷ್ಟು ಮಹಿಳೆಯರಿಗೆ ಇನ್ನೂ ಮೊದಲನೇ ಕಂತು ಹಣ ಬಂದಿಲ್ಲ, ಎರಡನೇ ಕಂತು ಮೇಸೆಜ್ ಬಂದಿದ್ದರೂ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿಲ್ಲ.
ಪ್ರಚಾರಕ್ಕೆ ಯೋಜನೆ ಸೀಮಿತ
ಈ ಬಗ್ಗೆ ಹಲವಾರು ಭಾರಿ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಯೋಜನೆ ಬಗ್ಗೆ ಭಾರಿ ಪ್ರಚಾರ ಮಾಡಲಾಗುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.