ಭಾರಿ ಮಳೆ : 7 ಜಿಲ್ಲೆಗಳಲ್ಲಿ 2 ದಿನ ರೆಡ್‌ ಅಲರ್ಟ್‌

By Kannadaprabha NewsFirst Published Sep 11, 2020, 10:33 AM IST
Highlights

ಈಗಾಗಲೇ ರಾಜ್ಯದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ರೆಡ್, ಆರೆಂಜ್ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. 

ಬೆಂಗಳೂರು (ಸೆ.11): ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಎರಡು ದಿನಗಳ ಕಾಲ ‘ರೆಡ್‌ ಅಲರ್ಟ್‌’ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೆ.11 ಮತ್ತು 12ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು ಎರಡೂ ದಿನ ‘ರೆಡ್‌ ಅಲರ್ಟ್‌’ ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ನೈಋುತ್ಯ ಮುಂಗಾರು ಬಿರುಸುಗೊಂಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಯಲ್ಲಿ ವೇಗವಾದ ಗಾಳಿ ಹಾಗೂ ಗರಿಷ್ಠ 3.3 ಮೀಟರ್‌ಗಳಷ್ಟುಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಮಹಾಮಳೆಗೆ ಸಿಲಿಕಾನ್ ಸಿಟಿ ತತ್ತರ; ಎಲ್ಲೆಡೆ ಅವಾಂತರ, ಜನರಿಗೂ ಭಯ..ಭಯ..! .

ಯಾವ ಜಿಲ್ಲೆಗಳಲ್ಲಿ ಅಲರ್ಟ್‌:  ಬೆಳಗಾವಿ, ಬೀದರ್‌, ಕಲಬುರ್ಗಿ ಜಿಲ್ಲೆಗಳಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಹಾಗೂ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ 130 ತಾಲೂಕು ನೆರೆಪೀಡಿತ ಎಂದು ಘೋಷಣೆ .

ಕಳೆದ 24 ಗಂಟೆಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗರಿಷ್ಠ 17 ಸೆಂ.ಮೀ ಮಳೆಯಾಗಿದೆ. ಗುಬ್ಬಿಯಲ್ಲಿ, 10, ಆನೇಕಲ್‌, ಕಂಪ್ಲಿ, ತುಮಕೂರು, ಬೆಂಗಳೂರಿನಲ್ಲಿ 7, ಶಿರಾ, ಹೊಸಕೋಟೆ 6, ಹೊಸಪೇಟೆ 5, ವಿಜಯಪುರ, ಲಿಂಗಸುಗೂರು, ರಾಯಚೂರು, ಮದ್ದೂರು, ಬಂಗಾರಪೇಟೆ, ವಿರಾಜಪೇಟೆಯಲ್ಲಿ 4, ಬೈಲಹೊಂಗಲ, ಚಿಂಚೋಳಿ, ಕಲಬುರ್ಗಿ, ನೆಲಮಂಗಲ, ಕನಕಪುರ, ಹುಣಸೂರು, ಮಾಲೂರು 3, ಪುತ್ತೂರು, ಬೀದರ್‌, ಸಿಂಧನೂರು, ಗಂಗಾವತಿ, ರಾಮನಗರ, ಪಾಂಡವಪುರದಲ್ಲಿ 2, ತಿಪಟೂರು, ಕೊರಟಗೆರೆ, ಭದ್ರಾವತಿ, ಶಿಡ್ಲಘಟ್ಟ, ಕೋಲಾರ, ಗುಂಡ್ಲುಪೇಟೆ, ಕುಣಿಗಲ್‌, ಬೆಳ್ತಂಗಡಿಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

click me!