115 ಅಡಿ ತಲುಪಿದ KRS: 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ

By Kannadaprabha NewsFirst Published Aug 11, 2019, 8:05 AM IST
Highlights

ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ 115 ಅಡಿ ತಲುಪಿದ್ದು, ಸುರಕ್ಷತೆಯ ದೃಷ್ಟಿಯಿಂದ 60 ಸಾವಿರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಅಣೆಕಟ್ಟಿನಿಂದ ಲಕ್ಷಾಂತರ ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಡುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ಕೆಳಭಾಗದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮಂಡ್ಯ(ಆ.11): ಶ್ರೀರಂಗಪಟ್ಟಣದ ಕೆಆರ್‌ಎಸ್‌ ಅಣೆಕಟ್ಟೆಯ ಮೇಲ್ಭಾಗದ ಕಾವೇರಿ ಜಲ ನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ 1.25 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ಒಳಹರಿವು ಇದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದಿಂದ 60 ಸಾವಿರ ಕ್ಯುಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ.

ಅಣೆಕಟ್ಟೆಯ ಗರಿಷ್ಠ ಮಟ್ಟ124.80 ಅಡಿ. ಪ್ರಸ್ತುತ 115 ಅಡಿ ತಲುಪಿದ್ದು, ಜಲಾಶಯದ ಭದ್ರತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಶನಿವಾರ ಮಧ್ಯಾಹ್ನದಿಂದಲೇ ನದಿಗೆ ಬಿಡಲಾಗುತ್ತಿದೆ.

ಪ್ರವಾಹ ಭೀತಿ:

ಅಣೆಕಟ್ಟೆಯಿಂದ ಲಕ್ಷಾಂತರ ಕ್ಯುಸೆಕ್‌ ನೀರನ್ನು ನದಿಗೆ ಹರಿದು ಬಿಡುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ಕೆಳಭಾಗದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಸೂಚಿಸಿದೆ.

ಎಲ್ಲೆಲ್ಲಿ ಪ್ರವಾಹ ಭೀತಿ:

ಅಗತ್ಯ ಬಿದ್ದರೆ ತಗ್ಗು ಪ್ರದೇಶ ಜನರನ್ನು ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿ, ಮರಿಗೌಡನಹುಂಡಿ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಹಂಗರಹಳ್ಳಿ, ಕೆ.ಶೆಟ್ಟಹಳ್ಳಿ ಹೋಬಳಿಯ ದೊಡ್ಡೆಗೌಡನಕೊಪ್ಪಲು, ರಾಂಪುರ, ಕಂಗಾರಕೊಪ್ಪಲು, ಮರಗಾಲ, ಶ್ರೀನಿವಾಸ ಅಗ್ರಹಾರ, ಶ್ರೀರಂಗಪಟ್ಟಣ ಕಸಬಾ ಮಹದೇವಪುರ, ಮೇಳಾಪುರ, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ, ಗಂಜಾಂ, ಚನ್ನಹಳ್ಳಿ, ಬಿದರಹಳ್ಳಿ ಹುಂಡಿ, ಬೆಳಗೊಳ ಹೋಬಳಿ ಕಾರೇಕುರ, ರಂಗನತಿಟ್ಟು, ಬೊಮ್ಮೂರು ಅಗ್ರಹಾರ. ಗ್ರಾಮಗಳಲ್ಲಿ ಕಾವೇರಿ ನದಿಗೆ ಪ್ರವಾಹ ಭೀತಿ ಇದೆ.

100 ಅಡಿ ದಾಟಿದ ಕೆಆರ್‌ಎಸ್‌ ಜಲಾಶಯ : ಒಂದೇ ದಿನ 9 ಅಡಿ ನೀರು

ಒಳ ಹರಿವು ಹೆಚ್ಚು:

ಕೊಡಗಿನ ಹಾರಂಗಿ, ಹೇಮಾವತಿ ಜಲಾಶಯದಿಂದ ಹೆಚ್ಚುವರಿ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಅಧಿಕ ನೀರು ಬರುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ 103 ಅಡಿ ಮಟ್ಟದ 30 ಗೇಟ್‌ಗಳ ಮೂಲಕ 60 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಅಣೆಕಟ್ಟೆಗೆ ಶುಕ್ರವಾರ ಸಂಜೆ 76 ಸಾವಿರ ಕ್ಯುಸೆಕ್‌ ನಷ್ಟುಒಳಹರಿವು ಇತ್ತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ ಸ್ಥಗಿತ

ಶನಿವಾರ ಬೆಳಗ್ಗೆ 1.08.555 ಕ್ಯುಸೆಕ್‌ ಏರಿಕೆಯಾಯಿತು. ನೀರಿನ ಮಟ್ಟ108 ಅಡಿಗೇರಿತ್ತು. 9 ಗಂಟೆ ವೇಳೆಗೆ ಒಳ ಹರಿವು 1.13 ಲಕ್ಷಕ್ಕೆ ಏರಿಕೆಯಾಗಿ ನೀರಿನ ಮಟ್ಟ109.25 ಅಡಿಗೇರಿತು. ನಂತರ ಒಳ ಹರಿವಿನ ಮಟ್ಟ1.35 ಲಕ್ಷಕ್ಕೆ ಹೆಚ್ಚಿದ್ದರಿಂದ 12 ಗಂಟೆ ವೇಳೆಗೆ 112 ಅಡಿಗೆ ಏರಿಕೆಯಾಗಿದೆ. ಸಂಜೆ ವೇಳೆಗೆ 115 ಅಡಿಗೆ ತಲುಪಿದೆ. ಕೆಆರ್‌ಎಸ್‌ ಜಲಾಶಯದಿಂದ ನದಿ ಮೂಲಕ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ ಸ್ಥಗಿತಗೊಳಿಸಲಾಗಿದೆ.

click me!