ಒಕ್ಕಲಿಗರಿಗೆ ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು, ನಂಜಾವಾಧೂತ ಶ್ರೀ ಎಚ್ಚರಿಕೆ

By Suvarna NewsFirst Published Oct 28, 2022, 5:04 PM IST
Highlights

ಎಸ್‌ಟಿ ಎಸ್‌ಸಿ ಮೀಸಲಾತಿ ಹೆಚ್ಚಳ ಬಳಿಕ ರಾಜ್ಯದಲ್ಲಿ ಇತರ ಸಮುದಾಯಗಳ ಮೀಸಲಾತಿ ಕೂಗು ತೀವ್ರಗೊಂಡಿದೆ. ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುವ ಬೃಹತ್ ಹೋರಾಟಕ್ಕೆ ಮಂಡ್ಯದಲ್ಲಿ ಚಾಲನೆ ದೊರೆಯಿತು.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಅ.28): ಎಸ್‌ಟಿ ಎಸ್‌ಸಿ ಮೀಸಲಾತಿ ಹೆಚ್ಚಳ ಬಳಿಕ ರಾಜ್ಯದಲ್ಲಿ ಇತರ ಸಮುದಾಯಗಳ ಮೀಸಲಾತಿ ಕೂಗು ತೀವ್ರಗೊಂಡಿದೆ. ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುವ ಬೃಹತ್ ಹೋರಾಟಕ್ಕೆ ಮಂಡ್ಯದಲ್ಲಿ ಚಾಲನೆ ದೊರೆಯಿತು. ಪ್ರತಿಭಟನಾ ಸಭೆಯ ನೇತೃತ್ವದ ವಹಿಸಿದ್ದ ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ನಂಜಾವಾಧೂತ ಶ್ರೀ ಬೇಡಿಕೆ ಈಡೇರಿಸದಿದ್ರೆ ಉಗ್ರ ಹೋರಾಟ ಸಂಘಟಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು. ಮಂಡ್ಯದ ಮದ್ದೂರಿನ‌ ಪ್ರವಾಸಿ ಮಂದಿರ ಬಳಿಯಿಂದ ಹೋರಾಟ ಆರಂಭವಾಯಿತು. ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಸಾವಿರಾರು ಒಕ್ಕಲಿಗರ ಸಮುದಾಯ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಪಕ್ಷಾತೀತವಾಗಿ ಸಮುದಾಯಕ್ಕೆ ಹೋರಾಟಕ್ಕೆ ಜನರು ಕೈ ಜೋಡಿಸಿದ್ರು. ಮದ್ದೂರು ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನರಸಿಂಹ ಸ್ವಾಮಿ ದೇವಾಲಯದವರೆಗೂ ಸಾಗಿತು. ಕಾಲ್ನಡಿಗೆ ಹಾಗೂ ಬೈಕ್  ರ್‍ಯಾಲಿ ಮೂಲಕ ದೇವಾಲಯ ತಲುಪಿದ ಪ್ರತಿಭಟನಾಕಾರರು ಬೃಹತ್ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಲವು ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.

ಒಕ್ಕಲಿಗರು ಶಾಂತಸಾಗರ ಯಾವಾಗ ಬೇಕಾದರೂ ಅಲೆಗಳು ಎದ್ದೇಳಬಹುದು: ನಂಜಾವಾಧೂತ ಶ್ರೀ.
ಪ್ರತಿಭಟನಾ ಸಭೆ ಬಳಿಕ ಮಾತನಾಡಿದ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಶ್ರೀಗಳು. ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ಆರಂಭವಾಗಿದೆ. ಮಂಡ್ಯದ ಮದ್ದೂರಿನಲ್ಲಿ ನಮ್ಮ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ನಮ್ಮದು 30 ವರ್ಷಗಳ ಹಿಂದಿನ ಬೇಡಿಕೆ. ಎಲ್ಲಾ ಸಮುದಾಯಗಳ ಹಿತ ಬಯಸುವವರು ಒಕ್ಕಲಿಗರು. ಆದರೆ ಒಕ್ಕಲಿಗರಿಗೆ ಮೀಸಲಾತಿ ತಾರತಮ್ಯ ಆಗಿದೆ. 

ಮೀಸಲು ಸುಗ್ರೀವಾಜ್ಞೆ ‘ಚಾಕೋಲೇಟ್‌’: ಡಿಕೆಶಿ ಕಿಡಿ

ನಾವು 16% ಪಾಪ್ಯುಲೇಶನ್ ಇದ್ದರೂ ತಾರತಮ್ಯ ನಡೀತಿದೆ. 3A ಅಡಿ 4% ನೀಡಿದ್ದಾರೆ, ಆದರೆ 3A ಅಡಿ ಬೇರೆ ಸಮುದಾಯಗಳನ್ನು ಸೇರಿಸಲಾಗಿದೆ. ಆ 4% ಕೂಡ ಒಕ್ಕಲಿಗರು ಬಳಸಿಕೊಳ್ಳಲು ಆಗ್ತಿಲ್ಲ. ಶೈಕ್ಷಣಿಕ, ಔದ್ಯೋಗಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗ್ತಿದೆ. 3A ಮೀಸಲಾತಿ 4% ರಿಂದ 12% ಹೆಚ್ಚಿಸಬೇಕು. ನಗರಪ್ರದೇಶದಲ್ಲಿರುವ ಒಕ್ಕಲಿಗರಿಗೆ OBC ಮೀಸಲಾತಿ ನೀಡಬೇಕು. ಬೇರೆಬೇರೆ ಸಮುದಾಯಕ್ಕೆ ನೀಡಿರುವ ಮೀಸಲಾತಿ ಸ್ವಾಗತಾರ್ಹ. ಆದರೆ ನಮಗೂ ನಮ್ಮ‌ ಪಾಲು ನೀಡಬೇಕು. ಒಕ್ಕಲಿಗರಲ್ಲಿ ಎಲ್ಲಾ ದೇವರ ಅಂಶವಿದೆ. ನಮಗೆ ರಾಮ-ಕೃಷ್ಣ ರಂತೆ ಬದುಕುವುದು ಗೊತ್ತು. ಉಗ್ರ ನರಸಿಂಹ ಅವತಾರ ತಾಳುವುದು ಗೊತ್ತು. ಸರ್ಕಾರ ನಮ್ಮನ್ನ ಯಾವ ರೀತಿ ನಡೆಸಿಕೊಳ್ಳುತ್ತೋ ಆ ರೀತಿ ನಡೆಯುತ್ತೇವೆ.

ಮೀಸಲಾತಿ ಹೋರಾಟಕ್ಕೆ ಬೆಂಬಲ: ವಾಲ್ಮೀಕಿ ಶ್ರೀಗಳಿಂದ ಸಿದ್ದುಗೆ ಧನ್ಯವಾದ

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದಿನ ದಿನಗಳ ಹೋರಾಟ ಯಾವ ರೂಪ ಬೇಕಾದರೂ ತಾಳಬಹುದು. ಚುನಾವಣೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ. ಎಲ್ಲಾ ಪಕ್ಷಗಳಿಗೂ ಸಮುದಾಯ ಒತ್ತು ನೀಡಿದೆ. ಎಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು. ಒಕ್ಕಲಿಗರು ಶಾಂತಸಾಗರ ಯಾವಾಗ ಬೇಕಾದರೂ ಅಲೆಗಳು ಎದ್ದೇಳಬಹುದು. ಇದು ಸಣ್ಣ ಕಿಡಿ ಈ ಕಿಡಿ ಅನ್ನವನ್ನು ಬೇಯಿಸುತ್ತದೆ ಅಥವಾ ಬೇರೆ ರೀತಿಯಲ್ಲೂ ಕಿಡಿ  ಹೊತ್ತಿಉರಿಯಬಹುದು.

click me!