ವಿಶ್ವನಾಥ್‌ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಮೋಹನ್‌

By Kannadaprabha NewsFirst Published Feb 1, 2023, 6:47 AM IST
Highlights

ಎಚ್‌. ವಿಶ್ವನಾಥ್‌ ಅವರು ತಮ್ಮ ಹಾಗೂ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ನಾಯಕರನ್ನು ಟೀಕಿಸುತ್ತಿದ್ದಾರೆ. ಅವರಿಗೆ ಬಿಜೆಪಿ ಅಪಥ್ಯವಾಗಿದ್ದರೆ ಬಿಜೆಪಿಯಿಂದ ಪಡೆದುಕೊಂಡಿರುವ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್‌ ಆಗ್ರಹಿಸಿದರು.

 ಮೈಸೂರು :  ಎಚ್‌. ವಿಶ್ವನಾಥ್‌ ಅವರು ತಮ್ಮ ಹಾಗೂ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ನಾಯಕರನ್ನು ಟೀಕಿಸುತ್ತಿದ್ದಾರೆ. ಅವರಿಗೆ ಬಿಜೆಪಿ ಅಪಥ್ಯವಾಗಿದ್ದರೆ ಬಿಜೆಪಿಯಿಂದ ಪಡೆದುಕೊಂಡಿರುವ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್‌ ಆಗ್ರಹಿಸಿದರು.

ಮೈಸೂರಿನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅವರ ಸಾಹಿತ್ಯ ಸೇವೆ ಗುರುತಿಸಿ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಪ್ರಶಸ್ತಿ ನೀಡಿದ್ದಕ್ಕೆ ಡಾ. ಅವರು ಮೋದಿ ಅವರನ್ನು ಅಭಿನಂದಿಸಿದ್ದಾರೆ. ಆದರೆ, ವಿಶ್ವನಾಥ್‌ ಅವರು ಭೈರಪ್ಪ ಓಲೈಕೆಯಿಂದಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜ್ಞಾನಪೀಠ ಪ್ರಶಸ್ತಿಗಾಗಿ ಮೋದಿಯವರನ್ನು ಹೊಗಳುತ್ತಿದ್ದಾರೆ ಎಂದು ಸಣ್ಣತನದ ಮಾತುಗಳನ್ನಾಡಿದ್ದಾರೆ ಎಂದು ಕಿಡಿಕಾರಿದರು.

ಡಾ. ಭೈರಪ್ಪ ಅವರಿಗೆ ಪ್ರಶಸ್ತಿ ಬಂದಿರುವುದು ಇದೇ ಮೊದಲಲ್ಲ. ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಅವರಿಗೆ ಪದ್ಮ ಪ್ರಶಸ್ತಿ ಈ ಹಿಂದೆಯೇ ಸಿಗಬೇಕಿತ್ತು. ಆದರೆ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ ಅವರ ಸೇವೆ ಗುರುತಿಸಲಿಲ್ಲ. ಬಿಜೆಪಿ ಈಗ ಆ ಕೆಲಸ ಮಾಡಿದೆ. ಅಂತಹ ಮೇರು ಸಾಹಿತಿಯವನ್ನು ವಿಶ್ವನಾಥ್‌ ಅವರು ಅವಮಾನಿಸಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಡಾ. ಭೈರಪ್ಪ ಅವರಿಗೆ ಈಗಾಗಲೇ ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಬಂದಿದೆ. ಜ್ಞಾನಪೀಠ ಪ್ರಶಸ್ತಿಗಾಗಿ ಅವರು ಮೋದಿಯವರ ಓಲೈಕೆ ಮಾಡಬೇಕಾದ ಅಗತ್ಯ ಇಲ್ಲ. ಎಚ್‌. ವಿಶ್ವನಾಥ್‌ ಅವರು ಇದನ್ನು ಅರಿತು ಮಾತನಾಡಿದರೆ ಒಳಿತು ಎಂದು ಅವರು ವಾಗ್ದಾಳಿ ನಡೆಸಿದರು.

ಎಚ್‌. ವಿಶ್ವನಾಥ್‌ ಅವರಿಗೆ ಎಲ್ಲಾ ಮರದ ಮೇಲೆ ಕೂರುವ ಹಕ್ಕಿಯಂತೆ. ಅವರು ಕಾಂಗ್ರೆಸ್‌ನಲ್ಲಿ ಎಲ್ಲವನ್ನೂ ಅನುಭವಿಸಿದರು. ಅಲ್ಲಿ ಮನ್ನಣೆ ಸಿಗದಿದ್ದಾಗ ಜೆಡಿಎಸ್‌ಗೆ ಬಂದರು. ರಾಜ್ಯಾಧ್ಯಕ್ಷರಾಗಿ, ಶಾಸಕರಾದರೂ ಅವರಿಗೆ ತೃಪ್ತಿಯಾಗಲಿಲ್ಲ. ಜೆಡಿಎಸ್‌ ತೊರೆದು ಬಿಜೆಪಿಗೆ ಬಂದು ಚುನಾವಣೆಗೆ ನಿಂತು ಸೋಲನುಭವಿಸಿದರು. ಕೊಟ್ಟಮಾತಿನಂತೆ ಎಂಎಲ್‌ಸಿ ಮಾಡಿದರೂ ಸಚಿವ ಸ್ಥಾನ ಸಿಗಲಿಲ್ಲವೆಂದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದರು.

ಸಾಹಿತ್ಯ ಕ್ಷೇತ್ರದಿಂದ ಎಂಎಲ್‌ಸಿ ಆಗಿದ್ದೇನೆ ಎನ್ನುವ ವಿಶ್ವನಾಥ್‌ ಎಷ್ಟುಪುಸ್ತಕ ಬರೆದಿದ್ದಾರೆ? ನಾನು ಬಿಜೆಪಿ ಶಾಸಕನಲ್ಲ ಎನ್ನುವವರು ಮುಖ್ಯಮಂತ್ರಿಗಳ ಬಳಿ ಫೈಲ್‌ ಹಿಡಿದು ಹೋಗುವುದಾದರೂ ಯಾಕೆ? ಬಿಜೆಪಿ ಬೇಡವಾದರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಬಿಜೆಪಿ ನಾಯಕರನ್ನು ಟೀಕಿಸಿದರೆ ಕಾಂಗ್ರೆಸ್‌ ಸೇರ್ಪಡೆಯಾಗಬಹುದು ಎಂಬ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಟೀಕಿಸುವ ಮೊದಲು ಅವರು ಆತ್ಮಸಾಕ್ಷಿಯಂತೆ ನಡೆದುಕೊಳ್ಳಲಿ ಎಂದು ಅವರು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಮಹೇಶ್‌ ರಾಜೇ ಅರಸ್‌, ಸೋಮಸುಂದರ್‌, ಪಾಪಣ್ಣ, ಅಣ್ಣಯ್ಯನಾಯಕ್‌ ಇದ್ದರು.

ಪ್ರಶಸ್ತಿ ದೊರಕಿದ್ದು ಮೋದಿಯಿಂದಲ್ಲ - ಸಾಹಿತ್ಯದಿಂದ

ಮೈಸೂರು (ಜ.29): ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅವರಿಗೆ ಪದ್ಮಭೂಷಣ ಬರಲು ಪ್ರಧಾನಿ ನರೇಂದ್ರ ಮೋದಿ ಕಾರಣರಲ್ಲ. ಅವರ ಸಾಹಿತ್ಯ ಕೃಷಿ ಮತ್ತು ಬರವಣಿಗೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಎಂದು ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ಇರುವುದರಿಂದ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ ಎಂಬ ಭೈರಪ್ಪ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. ಭೈರಪ್ಪನವರಿಗೆ ಈ ವಯಸ್ಸಿನಲ್ಲಿ ಓಲೈಕೆ ಏಕೆ ಬೇಕು? ನಿಮಗೆ ಅಕ್ಟೋಬರ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಗುತ್ತದೆ. 

ಅದಕ್ಕಾಗಿ ಓಲೈಕೆ ಸರಿಯಲ್ಲ. ಮೋದಿಯಿಂದ ಪ್ರಶಸ್ತಿ ಬಂದಿಲ್ಲ. ನಿಮ್ಮ ಬರವಣಿಗೆಗೆ, ಸಾಹಿತ್ಯ ಕೃಷಿಗೆ ಗೌರವ ಸಂದಿದೆ. ನಿಮ್ಮ ಈ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ. ನೀವು ಬರೆವಣಿಗೆ ಆರಂಭಿಸಿದಾಗ ಮೋದಿ ಎಲ್ಲಿದ್ದರು? ಅನ್ನುವುದೇ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು. ಕರ್ನಾಟಕದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಎಸ್‌.ಎಂ. ಕೃಷ್ಣ ಅವರು ಪ್ರಧಾನಿ, ರಾಷ್ಟ್ರಪತಿ ಸ್ಥಾನ ಹೊರತುಪಡಿಸಿ ರಾಜಕೀಯದಲ್ಲಿರುವ ಇನ್ನುಳಿದ ಎಲ್ಲಾ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ಷರ, ಆರೋಗ್ಯ, ಅನ್ನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. 

ಖರ್ಗೆ, ಧರಂರಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಡಿ.ಕೆ.ಶಿವಕುಮಾರ್‌

ವೈಬ್ರೆಂಟ್‌ ಗುಜರಾತ್‌ ಮಾದರಿಯಲ್ಲಿ ವೈಬ್ರೆಂಟ್‌ ಕರ್ನಾಟಕ ಎಂಬ ಮಾದರಿಗೆ ಎಸ್‌.ಎಂ. ಕೃಷ್ಣ ಕಾರಣರಾದರು. ಹಲವು ಪ್ರಥಮಗಳಿಗೆ ಎಸ್‌.ಎಂ. ಕೃಷ್ಣ ಕಾರಣೀಭೂತರಾಗಿದ್ದಾರೆ. ಅವರ ಬಳಿಕ ಮತ್ತೆ ಯಾರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಕೃಷ್ಣರಂತೆ ನ್ಯಾಯ ಒದಗಿಸಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌.ಎಂ. ಕೃಷ್ಣ ಅವರ ಅಪಾರ ಅನುಭವವನ್ನು ಬಿಜೆಪಿ ಬಳಸಿಕೊಳ್ಳಲಿಲ್ಲ ಎಂಬ ನೋವು ನನಗಿದೆ. ಬಿಜೆಪಿ, ಬಿಬಿಸಿ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು. ಮೈಸೂರು- ಬೆಂಗಳೂರು ದಶಪಥಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡುವಂತೆ ಎಸ್‌.ಎಂ. ಕೃಷ್ಣ ಪತ್ರ ಬರೆದಿದ್ದಾರೆ. 

click me!