ರಾಜ್ಯದಲ್ಲಿ ವಿಶ್ವಕರ್ಮ ಜನಾಂಗ ಸಂಘಟಿತ ಆಗಬೇಕು: ಕೆ.ಪಿ.ನಂಜುಂಡಿ ಕರೆ

By Kannadaprabha NewsFirst Published Nov 27, 2023, 10:03 PM IST
Highlights

ರಾಜ್ಯದಾದ್ಯಂತ ವಿಶ್ವಕರ್ಮ ಜನಾಂಗದವರು ಮೊದಲು ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು. 

ಚಾಮರಾಜನಗರ (ನ.27): ರಾಜ್ಯದಾದ್ಯಂತ ವಿಶ್ವಕರ್ಮ ಜನಾಂಗದವರು ಮೊದಲು ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು. ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದ 151ನೇ ವಿಶ್ವಕರ್ಮ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಜನರು ಪಂಚ ಕಸುಬುಗಳ ಮೂಲಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಯಾವುದೇ ಸರ್ಕಾರಗಳು ಈ ಸಮಾಜದ ಅಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ತಂತ್ರಜ್ಞಾನಗಳು ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಪಂಚ ಕಸುಬುಗಳು ಬಂಡವಾಳಶಾಹಿಗಳ ಪಾಲಾಗುತ್ತಿದ್ದು, ಉದ್ಯೋಗ ಕಳೆದುಕೊಂಡು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನನ್ನನ್ನು ಸರ್ಕಾರ ಎಂಎಲ್‌ಸಿಯನ್ನಾಗಿ ಮಾಡಿದೆ. ಆದರೆ ಇದರಲ್ಲಿ ಅಧಿಕಾರವಿಲ್ಲದೇ ನಮ್ಮ ಜನರಿಗೆ ಯಾವುದೇ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ೨೫ ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ಇಂದು ವಿಶ್ವಕರ್ಮ ಜಯಂತಿ, ವಿಶ್ವಕರ್ಮ ಅಭಿವೃದ್ಧಿ ನಿಗಮ ಹಾಗೂ ಅಮರಶಿಲ್ಪಿ ಜಕಣಚಾರಿ ಸಂಸ್ಮರಣ ದಿನಾಚರಣೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. 

ಸಿದ್ದರಾಮಯ್ಯ ಜನತಾದರ್ಶನ ಜಾಹೀರಾತಿಗೆ ಸೀಮಿತ: ಎಚ್‌.ಡಿ.ಕುಮಾರಸ್ವಾಮಿ

ಇದನ್ನು ಹೊರತುಪಡಿಸಿ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ತಿಳಿಸಿದರು. ಜನಗಣತಿಯನ್ನು ಬಹಿರಂಗಪಡಿಸುವ ಸರ್ಕಾರದ ನಿಲುವನ್ನು ಬೆಂಬಲಿಸಿ ಡಿ.೧ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಚಂದಕವಾಡಿ ಗ್ರಾಮದ ವಿಶ್ವಕರ್ಮರಿಗೆ ರುದ್ರಭೂಮಿ ಹಾಗೂ ಸಮುದಾಯ ಭವನಕ್ಕೆ ಜಾಗ ಒದಗಿಸಿ ಕೊಡುವಂತೆ ಕೆ.ಪಿ.ನಂಜುಂಡಿ ಅವರು ಗ್ರಾ.ಪಂ. ಅಧ್ಯಕ್ಷ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು. 

ಇದಕ್ಕೂ ಮೊದಲು ಗ್ರಾಮದ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಶ್ವಕರ್ಮ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಕಳಸ ಹೊತ್ತು ಮೆರವಣಿಗೆಗೆ ಮೆರಗು ನೀಡಿದರು. ಯುವಕರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಭಾಗ್ಯ, ಮುಖಂಡರಾದ ಮಂಜುನಾಥ್ ವಿಶ್ವಕರ್ಮ, ಡಿ.ಎಲ್. ಕುಮಾರ್, ನಾಗೇಂದ್ರ, ಕಾಂತರಾಜು, ಮುಳ್ಳೂರು ಸಿದ್ದಪ್ಪಾಜಿ, ಸುದರ್ಶನ್, ಹೇಮಂತ್ ತಾಳವಾಡಿ, ಪುಟ್ಟಸ್ವಾಮಿ ಆಚಾರ್, ಹನೂರಿನ ಸಿದ್ದಪ್ಪಾಜಿ, ಲೋಕೇಶ್, ರೋಹಿತ್ ಇದ್ದರು.

4 ವರ್ಷಗಳಾದರೂ ಸಿದ್ದಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯ ಶೇ.10ರಷ್ಟು ಕಾಮಗಾರಿ ಮುಗಿದಿಲ್ಲ!

ಜಾತಿ ಗಣತಿಗೆ ಬೆಂಬಲ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ, ಇದಕ್ಕೆ ನಮ್ಮ ಸಮುದಾಯದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ರಾಜ್ಯದಾದ್ಯಂತ ವಿಶ್ವಕರ್ಮ ಸಮಾಜ ೪೦ ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಸರ್ಕಾರ ತನ್ನ ದಾಖಲೆಗಳಲ್ಲಿ ೭ ರಿಂದ ೧೦ ಲಕ್ಷ ಮಾತ್ರ ಇದೆ ಎಂದು ಸುಳ್ಳು ಹೇಳುತ್ತಿದೆ. ಹೀಗಾಗಿ ಎಲ್ಲಾ ಕಾಯಕ ಸಮಾಜಗಳ ಜನಗಣತಿ ಅಂಕಿ ಅಂಶ ಬಹಿರಂಗವಾದರೆ ಮೀಸಲಾತಿಯಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬಹುದು’ ಎಂದು ಅಭಿಪ್ರಾಯಪಟ್ಟರು.

click me!