ಸಿದ್ದರಾಮಯ್ಯ ಕೊಡಗಿಗೆ, ಅಯೋಧ್ಯೆ ಸಂಭ್ರಮಕ್ಕೆ ಹಾಕಿದ್ದ ಫ್ಲೆಕ್ಸ್ ತೆರವಿಗೆ ವಿರಾಜಪೇಟೆ ಪುರಸಭೆಯಿಂದ ನೊಟೀಸ್

By Suvarna NewsFirst Published Jan 23, 2024, 8:05 PM IST
Highlights

ವಿರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಹಾಕಿರುವ ಶ್ರೀರಾಮಚಂದ್ರನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜಗಳನ್ನು ತೆರವುಗೊಳಿಸುವಂತೆ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನೊಟೀಸ್ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.23): ಜನವರಿ 25 ರಂದು ಕೊಡಗು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಾರೆ. ಈ ವೇಳೆ ವಿರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಹಾಕಿರುವ ಶ್ರೀರಾಮಚಂದ್ರನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜಗಳನ್ನು ತೆರವುಗೊಳಿಸುವಂತೆ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನೊಟೀಸ್ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ವಿರಾಜಪೇಟೆ ಪುರಸಭೆ ಎದುರು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮುಖ್ಯಾಧಿಕಾರಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗಿದರು. ಸಿದ್ದರಾಮಯ್ಯ ಅವರು ಕೊಡಗಿಗೆ ಆಗಮಿಸುತ್ತಿರುವುದರಿಂದ ಸ್ಥಳೀಯ ಆಡಳಿತ ಹಾಗೂ ಕಾಂಗ್ರೆಸ್ ಅಗತ್ಯ ತಯಾರಿ ಮಾಡಿಕೊಂಡಿದೆ.

ವಿಜಯಪುರ ರಾಮೋತ್ಸವ, ಆರಿದ್ದ ದೀಪ ಮತ್ತೆ ಉರಿದು ಅಚ್ಚರಿ, ರಾಮನ ಪೂಜೆ ವೇಳೆ ಕೋತಿ ಪ್ರತ್ಯಕ್ಷ!

ಇದರ ನಡುವೆ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನೊಟೀಸ್ ಕೊಟ್ಟಿರುವುದಕ್ಕೆ ಸಾಕಷ್ಟೂ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಸಂಭ್ರಮದಿಂದ ಜ‌ರುಗಿದ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಹಿಂದೂಪರ ಸಂಘಟನೆಗಳು ಪುರಸಭೆಯಿಂದ 14 ದಿನಗಳ ಕಾಲ ಅಂದ್ರೆ ಜನವರಿ 16 ರಿಂದ ಜನವರಿ 30 ರವರೆಗೆ ಕೇಸರಿ ಧ್ವಜಗಳು, ಬಂಟಿಂಗ್ಸ್ ಹಾಗೂ ಫ್ಲೆಕ್ಸ್ ಹಾಕಲು ಅನುಮತಿ ಪಡೆದಿದ್ದವು. ಆದರೆ ಸಿಎಂ ಸಿದ್ದರಾಮಯ್ಯ ಅವರು 25 ರಂದು ವಿರಾಜಪೇಟೆಗೆ ಬರುತ್ತಿರುವುದರಿಂದ ಹಿಂದೂಪರ ಸಂಘಟನೆಗಳು ಕಟ್ಟಿದ್ದ ಕೇಸರಿ ಧ್ವಜ, ಶ್ರೀರಾಮನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜಗಳನ್ನು 23 ರ ಸಂಜೆ ತೆರವು ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ನೋಟಿಸ್ ನೀಡಿದ್ದರು.

ಇದು ಸಂಘಟನೆಗಳನ್ನು ಕೆರಳಿಸಿದ್ದು, ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ನೇತೃತ್ವದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ತೆರವು ಮಾಡಲ್ಲ, ಬೇಕಾದ್ರೆ ಕೋರ್ಟಿಗೆ ಹೋಗ್ತೀವಿ ಅಂತ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ರಾಮನ ಬಗ್ಗೆ ಇವರಿಗೆ ಗೌರವವಿದ್ದರೆ ಈ ರೀತಿ ಮಾಡುವುದಿಲ್ಲ. ಮಾತಿನಲ್ಲಿ ನಾವು ರಾಮಭಕ್ತರು ಎನ್ನುತ್ತಾ ರಾಮನಿಗೆ ಅಪಮಾನ ಆಗುವ ರೀತಿ ನಡೆದುಕೊಳ್ಳುವುದೇ ಕಾಂಗ್ರೆಸ್ ನ ಕೆಲಸ. ಮುಖ್ಯಾಧಿಕಾರಿ ಅವರು ನೊಟೀಸ್ ಕೊಟ್ಟು ತೆರವು ಮಾಡುವಂತೆ ಹೇಳಿದ್ದಾರೆ.

914 ಕೋಟಿ ಮೌಲ್ಯದ ಕಂಪನಿ ನಡೆಸುತ್ತಿರುವ ಮಗಳು, ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಅಪ್ಪನ ಆಸ್ತಿಗೆ ಲೆಕ್ಕವಿಲ್ಲ!

ಇಲ್ಲಿ ನಾವು ಹಾಕಿರುವ ಫ್ಲೆಕ್ಸ್ ಅಥವಾ ಧ್ವಜಗಳಿಂದ ಯಾವ ರೀತಿ ಸಾರ್ವಜನಿಕರಿಗೆ ತೊಂದರೆ ಆಗಿದೆ ಅಂತ ಹೇಳಲಿ. ಸಿದ್ದರಾಮಯ್ಯನವರು ಮುಖ್ಯಮಂತ್ರಿ. ಅವರು ಜಿಲ್ಲೆಗೆ ಬರುವುದಕ್ಕೆ ಸ್ವಾಗತವಿದೆ. ಆದರೆ ಅವರು ಬರುತ್ತಿರುವುದಕ್ಕೆ ಶ್ರೀರಾಮನ ಫ್ಲೆಕ್ಸ್ ನಿಂದ ಏನಾದರೂ ಸಮಸ್ಯೆ ಇದೆಯಾ. ಪ್ರೋಟೋಕಾಲ್ ಪ್ರಕಾರ ತೆಗೆಯಲು ಸೂಚಿಸಿದ್ದೇವೆ ಎನ್ನುತ್ತಾರೆ. 

ಹಾಗಾದರೆ ಸಿದ್ದರಾಮಯ್ಯ ಅವರು ಬರುವಾಗ ಕಾಂಗ್ರೆಸ್ನವರು ಫ್ಲೆಕ್ಸ್ ಹಾಕುವುದಿಲ್ಲವೆ ಎಂದು ಪ್ರಶ್ನಿಸಿದರು. ಕಡೆಗೂ ಬಿಜೆಪಿಯ ಪ್ರತಿಭಟನೆಗೆ ಮಣಿದಿರುವ ಪುರಸಭೆ ಮುಖ್ಯಾಧಿಕಾರಿ ನಿಮಗೆ ಈಗಾಗಲೇ ಅನುಮತಿ ನೀಡಿರುವ ಅವಧಿಯವರೆಗೆ ಫ್ಲೆಕ್ಸ್ ತೆರವು ಮಾಡಲ್ಲ ಅಂತ ಭರವಸೆ ನೀಡಿದರು. ಹೀಗಾಗಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು. ಆದರೂ ಸದ್ಯ ಈ ಕೇಸರಿ ಬಂಟಿಂಗ್ಸ್ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಒಂದೊಮ್ಮೆ ತೆರವು ಮಾಡಿದ್ದೇ ಆದಲ್ಲಿ ಇದು‌ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿದಂತೆ ಆಗುತ್ತಾ ಅನ್ನೋ ಆತಂಕವಂತೂ ಇದ್ದೇ ಇದೆ.

click me!