ನೈಜ ಆಧ್ಯಾತ್ಮದ ವಿಷಯ ತಿಳಿಸಿದ ವಿನಯ್ ಗುರೂಜಿ

By Kannadaprabha NewsFirst Published Oct 6, 2022, 4:30 AM IST
Highlights

ನಿಮ್ಮ ತಪ್ಪುಗಳನ್ನು ತಿಳಿದುಕೊಳ್ಳುವುದೇ ನಿಜವಾದ ಅಧ್ಯಾತ್ಮ ಎಂದು ಅವಧೂತ ವಿನಯ ಗುರೂಜಿ ವ್ಯಾಖ್ಯಾನಿಸಿದರು.

 ತುಮಕೂರು (ಅ.06): ನಿಮ್ಮ ತಪ್ಪುಗಳನ್ನು ತಿಳಿದುಕೊಳ್ಳುವುದೇ ನಿಜವಾದ ಅಧ್ಯಾತ್ಮ ಎಂದು ಅವಧೂತ ವಿನಯ ಗುರೂಜಿ ವ್ಯಾಖ್ಯಾನಿಸಿದರು.

ತುಮಕೂರು ಜಿಲ್ಲಾ ದಸರಾ (Dasara) ಸಮಿತಿಯಿಂದ ಆಯೋಜಿಸಿದ್ದ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಸ್ತ್ರೀಯಲ್ಲೂ ದೇವಿಯನ್ನು ನೋಡುವ ಸಂಸ್ಕೃತಿ ನಮ್ಮದು. ಹಾಗಾಗಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಿ. ದಸರಾ ಶಕ್ತಿ ಸ್ವರೂಪಿಣಿಯ ಆರಾಧನೆ. ಪಾಶ್ಚಾತ್ಯ ಸಂಸ್ಕೃತಿ ಮುಳುಗಿಸುವುದೇ ಆಗಿದೆ. ಬದುಕು ಪ್ರಚಾರವಾಗಬಾರದು, ಪ್ರಸಾರವಾಗಬೇಕು. ಇಂದು ಹಣ, ಹೆಸರು, ಕೀರ್ತಿ ನಮ್ಮನ್ನು ಆಳುತ್ತಿದೆ, ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕಾಗಿದೆ, ನಮ್ಮೊಳಗಿನ ಶಕ್ತಿಯನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕಿದೆ ಎಂದರು.

ವಾಸ್ತುವಿಗಿಂತ, ವಾಸ್ತವ ನಂಬಿ ಬದುಕೋಣ. ನಡೆದಾಡುವ ದೇವರನ್ನು (God) ನೋಡಿ ಬದುಕಿದವರು ನೀವು ಎಂದ ಗುರೂಜಿ ಮೊದಲು ಮನೆಗೆ ಮಗನಾಗಿ, ಆ ಮೇಲೆ ದೇಶಕ್ಕೆ ಪ್ರಜೆಯಾಗಿ, ಬಡವರ ಅಭ್ಯುದಯಕ್ಕೆ ದುಡಿಯಿರಿ ಎಂದು ಯುವಜನರಿಗೆ ಕಿವಿಮಾತು ಹೇಳಿದರು.

ದಸರಾ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯ ಪರಿಸರ ಸಂಯೋಜಕ ಜೈರಾಮ್‌ ಬೋಳ್ಳಾಜೆ, ಭಾರತೀಯ ಚಿಂತನೆ ಯಾರನ್ನು ದ್ವೇಷಿಸುವುದಿಲ್ಲ, ಬದಲಾಗಿ ಪ್ರಿತಿಸುತ್ತದೆ. ವಸುದೈವ ಕುಟುಂಬಕಂ ಎಂಬುದು ನಮ್ಮ ಆಶಯ. ತ್ಯಾಗ ಮತ್ತು ಸೇವೆ ಭಾರತದ ಆಶಯ ಇದನ್ನು ಪುನರ್‌ ಸ್ಥಾಪಿಸುವ ಆಶಯವಿದೆ ಎಂದರು.

ಶಮಿಪೂಜೆ ನೆರವೇರಿಸಿದ ತಹಸೀಲ್ದಾರ್‌ ಜಿ.ವಿ.ಮೋಹನ್‌ ಕುಮಾರ್‌, ಬನ್ನಿ ವಿಜಯದ ಸಂಕೇತವಾಗಿದೆ. ತುಮಕೂರು ಸರ್ವ ಜನಾಂಗದ ಶಾಂತಿಯ ತೋಟ. ಇಂತಹ ನಾಡಿನಲ್ಲಿ ನಾವೆಲ್ಲರೂ ಸುಖಃ ಶಾಂತಿಯಿಂದ ಬಾಳುತ್ತಿದ್ದೇವೆ. ಕೆಟ್ಟದರ ದಮನದ ಸಂಕೇತವಾದ ವಿಜಯ ದಶಮಿ ಇಡೀ ನಾಡಿಗೆ ವಿಶೇಷ ಹಬ್ಬ. ಮೈಸೂರು ಅರಸರು ಆರಂಭಿಸಿದ ಈ ಹಬ್ಬ ಇಂದು ನಾಡಿನ ಎಲ್ಲಾ ಭಾಗಗಳಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ ಎಂದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಎಸ್‌.ಪಿ.ಚಿದಾನಂದ್‌ ಮಾತನಾಡಿ, ತುಮಕೂರು ದಸರಾ ಕಳೆದ ಮೂರು ದಶಕಗಳಿಂದ ಭಕ್ತಿ ಮತ್ತು ಶ್ರದ್ದೆಯಿಂದ ಆಚರಿಸುತ್ತಿದ್ದೇವೆ. ದೇವಾಲಯಗಳ ನಾಡಾದ ತುಮಕೂರಿನಲ್ಲಿ ಪ್ರತಿವರ್ಷ ನೂರಾರು ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಜನಪದ ಕಲಾವಿದರು, ವಿಚಾರವಂತರು ಹಲವರು ವಿಷಯಗಳ ಕುರಿತು ಮಾತನಾಡಿ, ನಮಗೆ ಸ್ಫೂರ್ತಿ ತುಂಬಿದ್ದಾರೆ. ಈ ಬಾರಿ ದಸರಾ ಉತ್ಸವದ ಜೊತೆಗೆ, ಗಣೇಶ ವಿಸರ್ಜನಾ ಮಹೋತ್ಸವ ಸೇರಿರುವುದು ವಿಶೇಷ ಮೆರಗು ನೀಡಿದೆ ಎಂದರು.

ದಸರಾ ಸಮಿತಿಗೆ ಯುವಜನತೆ ಕೈಜೋಡಿಸಿ, ಮೈಸೂರಿನ ದಸರಕ್ಕೆ ಸರಿಸಮನಾಗಿ ಈ ಉತ್ಸವವನ್ನು ಮುಂದಿನ ದಿನಗಳಲ್ಲಿ ಮಾಡೋಣ ಎಂಬ ಆಶಯ ವ್ಯಕ್ತಪಡಿಸಿದರು.

ಸಂಜೆ 6 ಗಂಟೆಗೆ ಆರಂಭವಾದ ಸಾಮೂಹಿಕ ಶಮಿ ಪೂಜೆಗೆ ತುಮಕೂರು ತಾಲೂಕು ತಹಸೀಲ್ದಾರ್‌ ಜಿ.ವಿ.ಮೋಹನ್‌ ಕುಮಾರ್‌, ಶಮಿ ಪೂಜೆ ನೆರವೇರಿಸಿದರು. ಶಾಸಕ ಜ್ಯೋತಿ ಗಣೇಶ್‌, ಮೇಯರ್‌ ಪ್ರಭಾವತಿ ಎಂ.ಸುಧೀಶ್ವರ್‌, ಉಪಮೇಯರ್‌ ಟಿ.ಕೆ.ನರಸಿಂಹಮೂರ್ತಿ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಎಸ್‌.ಪಿ.ಚಿದಾನಂದ್‌, ಅಧ್ಯಕ್ಷ ಬಿ.ಎಸ್‌.ಮಂಜುನಾಥ್‌, ಟೂಡಾ ಅಧ್ಯಕ್ಷ ಎಚ್‌.ಜಿ.ಚಂದ್ರಶೇಖರ್‌, ಜಿ.ಕೆ.ಶ್ರೀನಿವಾಸ್‌,ಜಿ.ಎಸ್‌.ಬಸವರಾಜು, ಮಹಿಳಾ ಸಮನ್ವಯ ಸಮಿತಿಯ ವಾಸವಿ ಗುಪ್‌್ತ, ರೇಖಾ ಮಹೇಶ್‌ ಸೇರದಂತೆ ಸದಸ್ಯರು ಪಾಲ್ಗೊಂಡಿದ್ದರು.

  • ತಪ್ಪನ್ನು ತಿದ್ದುಕೊಳ್ಳುವುದೇ ನಿಜವಾದ ಆಧ್ಯಾತ್ಮ
  • ದಸರಾ ಉತ್ಸವದಲ್ಲಿ ಅವಧೂತ ವಿನಯ ಗುರೂಜೀ ಅಭಿಮತ
  • ತುಮಕೂರು ಜಿಲ್ಲಾ ದಸರಾ ಸಮಿತಿಯಿಂದ ಆಯೋಜಿಸಿದ್ದ ದಸರಾ ಉತ್ಸವ
  • ಪ್ರತಿ ಸ್ತ್ರೀಯಲ್ಲೂ ದೇವಿಯನ್ನು ನೋಡುವ ಸಂಸ್ಕೃತಿ ನಮ್ಮದು
  • ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಿ. ದಸರಾ ಶಕ್ತಿ ಸ್ವರೂಪಿಣಿಯ ಆರಾಧನೆ
  • ಪಾಶ್ಚಾತ್ಯ ಸಂಸ್ಕೃತಿ ಮುಳುಗಿಸುವುದೇ ಆಗಿದೆ. ಬದುಕು ಪ್ರಚಾರವಾಗಬಾರದು
click me!