ಸಿದ್ದಾಪುರ- ನಂದಿಹಳ್ಳಿ ರಸ್ತೆ ದುರಸ್ತಿಗಾಗಿ ಪ್ರತಿಭಟನೆ

By Kannadaprabha NewsFirst Published Aug 18, 2022, 9:23 AM IST
Highlights

ತುಂಗಭದ್ರಾ ನದಿ ಪಾತ್ರದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸಿದ್ದಾಪುರ-ನಂದಿಹಳ್ಳಿ ಜಿಲ್ಲಾ ಮುಖ್ಯ ರಸ್ತೆಯ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕಾರಟಗಿ (ಆ.18) :ತುಂಗಭದ್ರಾ ನದಿ ಪಾತ್ರದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸಿದ್ದಾಪುರ-ನಂದಿಹಳ್ಳಿ ಜಿಲ್ಲಾ ಮುಖ್ಯ ರಸ್ತೆಯ ದುರಸ್ತಿ ಮಾಡುವಂತೆ ಆಗ್ರಹಿಸಿ ತಾಲೂಕಿನ ಉಳೇನೂರು ಗ್ರಾಮಸ್ಥರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಸಿದ್ದಾಪುರದಿಂದ ನಂದಿಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ನಡುವೆ 10ಕ್ಕೂ ಹೆಚ್ಚು ಹಳ್ಳಿಗಳು ಇದ್ದು, ಹಲವು ವರ್ಷಗಳಿಂದ ಈ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮದ ಟೆಕ್ಕಿ ಸುರೇಶ ಮಡಿವಾಳರ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾ¿åರ್‍ದರ್ಶಿಗೆ ಇ-ಮೇಲ್‌ ಮೂಲಕ ಮನವಿ ಸಲ್ಲಿಸಿ ಗಮನ ಸೆಳೆದಿದ್ದರು. ಆನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಿಸಿ ಗಮನಕ್ಕೂ ರಸ್ತೆಯ ಪರಿಸ್ಥಿತಿಯನ್ನು ವಿವರಿಸಿ ಬಂದಿದ್ದರು.

ಹುಲಿಹೈದರ ಇನ್ನೂ ಬೂದಿ ಮುಚ್ಚಿದ ಕೆಂಡ: ಗ್ರಾಮದಲ್ಲಿ ಸ್ಮಶಾನ ಮೌನ

ಸತತ ಅವಘಡ: ಕಳೆದ ಕೆಲವು ತಿಂಗಳು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬತ್ತದ ಗದ್ದೆಗೆ ನುಗ್ಗಿತ್ತು. ಅದೃಷ್ಟವಶಾತ್‌ ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಆನಂತರ ವಾರದಿಂದಲೂ ಆಗಾಗ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಜು. 10ರಂದು ಸರ್ಕಾರಿ ಬಸ್‌ನ ಇಂಜಿನ್‌ಗೆ ರಸ್ತೆಯ ಜಲ್ಲಿಕಲ್ಲುಗಳು ಸಿಕ್ಕಿಹಾಕಿಕೊಂಡ ಕಾರಣ ಬಸ್‌ ಕೆಟ್ಟು ನಿಂತು ಮಧ್ಯರಾತ್ರಿ ವರೆಗೂ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಕಳೆದ ವಾರ ದ್ವಿಚಕ್ರ ವಾಹನ ಸವಾರನೊಬ್ಬ ಇದೇ ರಸ್ತೆಯಲ್ಲಿ ಅಪಘಾತಕ್ಕೆ ಈಡಾಗಿದ್ದಾನೆ.

ಇಷ್ಟೆಲ್ಲ ಅವಘಡಗಳು ನಡೆದರೂ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಮತ್ತು ಅಧಿಕಾರಿಗಳು ಈ ಜಿಲ್ಲಾ ಮುಖ್ಯರಸ್ತೆಯನ್ನು ರಿಪೇರಿ ಮಾಡಲು ಮುಂದಾಗದ್ದನ್ನು ವಿರೋಧಿಸಿ ಉಳೇನೂರು ಗ್ರಾಮಸ್ಥರು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ತಿರುಗಾಡುವ ಕೇವಲ 2 ಸರ್ಕಾರಿ ಬಸ್‌ಗಳನ್ನು ತಡೆಹಿಡಿದು ಬುಧವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದರು.

 

ರಸ್ತೆ ಇಲ್ಲದೆ ಶವ ಹೊತ್ತು ಸಾಗಿದ ಸ್ಥಳೀಯರು..!

ಆಕ್ರೋಶ: ಗ್ರಾಮಸ್ಥ ಟೆಕ್ಕಿ ಸುರೇಶ್‌ ಮಡಿವಾಳ ಮಾತನಾಡಿ, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸುಂದರೇಶ್‌ ಬಾಬು, ಶಾಸಕ ಬಸವರಾಜ ದಢೇಸೂಗೂರು ಆಗಮಿಸಿ, ಸಮಸ್ಯೆ ಪರಿಹರಿಸಬೇಕು. ಇಂತಿಷ್ಟುದಿನಗಳಲ್ಲಿ ರಸ್ತೆ ನಿರ್ಮಿಸುತ್ತೇವೆ ಎಂದು ಖಚಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಕೈಬಿಡಲಾಗುವುದು. ಇಲ್ಲದಿದ್ದರೆ ಉಳೇನೂರು ಸುತ್ತಮುತ್ತಲಿನ ಗ್ರಾಮಗಳ ಜನರು ಮತದಾನ ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಹನುಮೇಶ್‌, ಯಮನೂರು, ಮಲ್ಲಿಕಾರ್ಜುನ, ರಾಮಣ್ಣ, ಹುಲಿಗೆಪ್ಪ, ನಾಗೇಶಪ್ಪ, ಈರಪ್ಪ, ದೇವರಾಜ, ಮಂಜುನಾಥ, ಮುತ್ತು, ಹೊನ್ನೂರಪ್ಪ, ಕನಕರಾಯ, ನಾಗರಾಜ, ಧರ್ಮರಾಜ, ಶರಣಬಸವ, ಸುನೀಲ್‌, ಚನ್ನಬಸವ, ಸಿದ್ಧಲಿಂಗ, ಲಿಂಗರಾಜ ಇತರರಿದ್ದರು.

ತಲೆಕೆಟ್ಟೇ ಮಾಡಿದ್ದು: ರಸ್ತೆ ದುರಸ್ತಿಗೆ ಆಗ್ರಹಿಸಿ ಉಳೇನೂರು ಗ್ರಾಮಸ್ಥ ಸುರೇಶ್‌ ಮಡಿವಾಳ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಆಗ ಯುವಕನ ಮನೆಗೆ ಕಾರಟಗಿ ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಗೆ ಶಾಸಕ ಬಸವರಾಜ ದಢೇಸ್ಗೂರು ‘ಆ ಯುವಕನಿಗೆ ತಲೆ ಕೆಟ್ಟಿದೆ ಎಂದಿದ್ದರು’. ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಗ್ರಾಮಸ್ಥರು ‘ನಮಗೆ ತಲೆ ಕೆಟ್ಟೇ ಪ್ರತಿಭಟನೆ ನಡೆಸುತ್ತಿದ್ದೇವೆ’, ನಮ್ಮ ಪ್ರತಿಭಟನೆಗೆ ಸುತ್ತ 10 ಗ್ರಾಮಗಳ ಬೆಂಬಲವಿದೆ. ಬಸ್‌ ತಡೆಹಿಡಿದಿದ್ದರೂ ಶಾಲೆ-ಕಾಲೇಜು ಮಕ್ಕಳನ್ನು ಬಿಟ್ಟು ಆಸ್ಪತ್ರೆ, ಸರ್ಕಾರಿ ಕೆಲಸಕ್ಕೆ, ಕಚೇರಿಗಳಿಗೆ, ಬೀಜ ಗೊಬ್ಬರ ತರಲು ಹೋಗುವವರಿಗೆ ಖಾಸಗಿ ವಾಹನಗಳ ಮೂಲಕ ಸಿದ್ದಾಪುರ ವರೆಗೂ ವಾಹನ ವ್ಯವಸ್ಥೆ ಮಾಡಲಾಗಿದೆ. ಮೊದಲು ಶಾಸಕರು ನಮ್ಮೂರಿಗೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಮನವೊಲಿಕೆ ವಿಫಲ:

\ತಾಲೂಕಿನ ಉಳೆನೂರು ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಸರ್ಕಾರಿ ಎರಡು ಬಸ್‌ಗಳನ್ನು 12 ಗಂಟೆಗೂ ಹೆಚ್ಚಿನ ಕಾಲ ಹಿಡಿದಿಟ್ಟುಕೊಂಡಿದ್ದು, ಸ್ಥಳಕ್ಕೆ ಶಾಸಕ ಮತ್ತು ಡಿಸಿ ಬರುವ ತನಕ ಧರಣಿ ಹಿಂಪಡೆಯುವುದಿಲ್ಲವೆಂದು ಬಿಗಿಪಟ್ಟು ಹಿಡಿದಿದ್ದಾರೆ. ಧರಣಿ ಸ್ಥಳಕ್ಕೆ ತಹಸೀಲ್ದಾರ್‌ ಬಸವರಾಜ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದ್ದು ವಿಫಲವಾಯಿತು. ಸ್ಥಳದಲ್ಲಿ ಪಿಐ ವೀರಭದ್ರಯ್ಯ ಸ್ವಾಮಿ ಹಿರೇಮಠ, ಪಿಎಸ್‌ಐ ನಾಗಪ್ಪ, ಇಬ್ಬರು ಎಎಸ್‌ಐ, ನಾಲ್ವರು ಪೊಲೀಸ್‌ ಕಾನ್ಸೆ$್ಟಬಲ್‌ಗಳು ಸೇರಿ ಒಂದು ಡಿಆರ್‌ ವ್ಯಾನ್‌ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ.

click me!