ಬೈಲಹೊಂಗಲ: ಅಂತಿಮಯಾತ್ರೆಗೂ ಸಿಗದ ದಾರಿ..!

By Kannadaprabha NewsFirst Published Feb 5, 2023, 7:06 PM IST
Highlights

ಇಹಲೋಕ ತ್ಯಜಿಸಿದ ಮೇಲಾದರೂ ನೆಮ್ಮದಿಯಿಂದ ಮಣ್ಣಾಗಬೇಕು ಎಂದರೆ, ಇಲ್ಲಿ ಅದಕ್ಕೂ ಅಡೆತಡೆ. ಏಕೆಂದರೆ ಇಲ್ಲಿ ಸ್ಮಶಾನಕ್ಕೂ ಹೋಗಲು ಸರಿಯಾದ ದಾರಿ ಇಲ್ಲ. ಇದರಿಂದ ಯಾರಾದರೂ ಸತ್ತರೆ ಅವರನ್ನು ಮಣ್ಣು ಮಾಡಲು ಹೋಗಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಉದಯ ಕೊಳೇಕರ

ಬೈಲಹೊಂಗಲ(ಫೆ.05):  ತಾಲೂಕಿನ ಆನಿಗೋಳ ಗ್ರಾಮದ ಮಾದರ ಸಮಾಜಕ್ಕೆ ಸರ್ಕಾರ ಸ್ಮಶಾನ ಭೂಮಿಯನ್ನೇನೋ ನೀಡಿದೆ. ಆದರೆ, ಅಂತ್ಯಸಂಸ್ಕಾರಕ್ಕೆ ತೆರಳಲು ರಸ್ತೆ ಇಲ್ಲದ್ದರಿಂದ ಆನಿಗೋಳ ಮಾದರ ಸಮಾಜ ಬಾಂಧವರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೌದು, ಇಹಲೋಕ ತ್ಯಜಿಸಿದ ಮೇಲಾದರೂ ನೆಮ್ಮದಿಯಿಂದ ಮಣ್ಣಾಗಬೇಕು ಎಂದರೆ, ಇಲ್ಲಿ ಅದಕ್ಕೂ ಅಡೆತಡೆ. ಏಕೆಂದರೆ ಇಲ್ಲಿ ಸ್ಮಶಾನಕ್ಕೂ ಹೋಗಲು ಸರಿಯಾದ ದಾರಿ ಇಲ್ಲ. ಇದರಿಂದ ಯಾರಾದರೂ ಸತ್ತರೆ ಅವರನ್ನು ಮಣ್ಣು ಮಾಡಲು ಹೋಗಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಹಸೀಲ್ದಾರ, ಎಸಿ, ಶಾಸಕರಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗದೇ ಜನರ ಗೋಳು ತಪ್ಪುತ್ತಿಲ್ಲ ಎಂದು ಆನಿಗೋಳ ಗ್ರಾಮದ ಪರಿಶಿಷ್ಟಪಂಗಡದ ಮಾದರ ಸಮಾಜದವರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಮಾಜದ ಹೋರಾಟದ ಫಲವಾಗಿ ಸರ್ಕಾರ 16 ವರ್ಷದ ಹಿಂದೆ ಗ್ರಾಮದ ಸರ್ವೆ ನಂ.78ರಲ್ಲಿ 1 ಎಕರೆ 10 ಗುಂಟೆ ಜಾಗೆಯನ್ನು ಸ್ಮಶಾನಕ್ಕೆ ನೀಡಿದೆ. ಆದರೆ, ಅಂದಿನಿಂದ ಇಂದಿನವರೆಗೆ ರಸ್ತೆ ಇಲ್ಲದ್ದರಿಂದ ಅಂತ್ಯಸಂಸ್ಕಾರಕ್ಕೆ ಗ್ರಾಮದಿಂದ ಒಂದು ಕಿ.ಮೀ.ವರೆಗೆ ಹೊಲಗದ್ದೆಗಳ ಮುಖಾಂತರ ತೆರಳಿಯೇ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಎದುರಾಗಿದೆ. ಹಳ್ಳ, ಕೊಳ್ಳಗಳನ್ನು ದಾಟಿಕೊಂಡು ಹೊಲಗದ್ದೆಗಳ ಬೆಳೆಗಳಲ್ಲಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಲಗದ್ದೆಗಳ ರೈತರು ಬೆಳೆ ನಾಶವಾಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕೆಲವು ಬಾರಿ ಕಾಲುಜಾರಿ ಬಿದ್ದು ಶವಸಹಿತ ನೆಲಕ್ಕುರುಳಿ ಅನೇಕರು ಗಾಯಗೊಂಡ ಪ್ರಸಂಗಗಳು ನಡೆದಿವೆ.

ಬೆಳಗಾವಿ ಜನರ ನಿದ್ದೆಗೆಡಿಸಿದ ಏಕೈಕ ಬೀದಿ ನಾಯಿ, ಮಹಾನಗರ ಪಾಲಿಕೆ ವಿರುದ್ಧ ಜನರ ಅಸಮಾಧಾನ!

ಮಳೆ ಬಂದರೆ ಕಷ್ಟ:

ಕೆಲವು ಗ್ರಾಮಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಸ್ಮಶಾನಗಳೇ ಇಲ್ಲ. ಅವರು ತಮ್ಮ ಹೊಲ, ನದಿ ದಂಡೆ, ಇತರæ ಕಡೆಗಳಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಇಂತಹ ಗ್ರಾಮಗಳನ್ನು ಗುರುತಿಸಿ ಜಿಲ್ಲಾಡಳಿತ ಸಹಿತ ಸ್ಮಶಾನ ಭೂಮಿ ಮಂಜೂರು ಮಾಡುತ್ತಿದೆ. ಆದರೆ, ಆನಿಗೋಳ ಗ್ರಾಮದ ಪರಿಶಿಷ್ಟಪಂಗಡದ ಮಾದರ ಸಮಾಜದ ಸ್ಥಿತಿ ಮಾತ್ರ ಭಿನ್ನವಾಗಿದೆ. ಇವರಿಗೆ ಸ್ಮಶಾನವಿದೆ. ಆದರೆ, ಸ್ಮಶಾನಕ್ಕೆ ಹೋಗಲು ಜಾಗ ಇಲ್ಲ. ಇಕ್ಕಟ್ಟಾದ ಹೊಲದ ದಾರಿಯ ಮಧ್ಯೆಯೇ ಸಾಗಿ ಅಂತ್ಯಸಂಸ್ಕಾರ ಮಾಡಬೇಕು. ಆದರೆ, ಮಳೆಗಾಲದಲ್ಲಿ ಮಾತ್ರ ಅಂತ್ಯಸಂಸ್ಕಾರ ಕಷ್ಟಕರವಾಗಿ ಪರಿಣಮಿಸುತ್ತಿದೆ. ಯಾಕಂದರೆ ಹೊಲದ ದಾರಿಯಲ್ಲಿ ನೀರು ನಿಂತು ಸ್ಮಶಾನಕ್ಕೆ ಹೋಗಲು ಆಗದೇ ಇರುವ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಮಳೆಗಾಲದಲ್ಲಿ ಯಾರಾದರೂ ನಿಧನ ಹೊಂದಿದ್ದರೆ ಇವರಿಗೆ ಆತಂಕದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸ್ಮಶಾನಕ್ಕೆ ಹೋಗಲು ದಾರಿ ವ್ಯವಸ್ಥೆ ಮಾಡಬೇಕಾಗಿದೆ.

ಸರ್ಕಾರ ಬರುವ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಮಾದರ ಸಮಾಜದ ಮುಖಂಡರು ಮೃತದೇಹವನ್ನು ತಹಸೀಲ್ದಾರ ಕಾರ್ಯಾಲಯದ ಮುಂದೆ ಪ್ರತಿಭಟಿಸಲು ಸಮಾಜ ಬಾಂಧವರು ತೀರ್ಮಾನಿಸಿದ್ದಾರೆ. ಈಚೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಮಶಾನಭೂಮಿ ದಾರಿಯನ್ನು ನೋಡಿಕೊಂಡು ಹೋಗಿದ್ದಾರೆ. ಕೇವಲ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೋಗುವುದು ಆಗಿದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಗಳು ಕೇಳಿಬರುತ್ತಿವೆ.

ಬೆಳಗಾವಿ: ನಿರ್ಬಂಧದ ನಡುವೆಯೂ ಉಳವಿ, ಯಲ್ಲಮ್ಮನಗುಡ್ಡಕ್ಕೆ ಚಕ್ಕಡಿ ಯಾತ್ರೆ..!

ಆನಿಗೋಳದಲ್ಲಿ ಮಾದರ ಸಮಾಜದ ವ್ಯಕ್ತಿಗಳು ಮೃತರಾದರೆ ಅಂತ್ಯಸಂಸ್ಕಾರ ಮಾಡುವುದು ಹರಸಾಹಸದ ಕಾರ್ಯವಾಗಿದೆ. ಸರ್ಕಾರ ಸ್ಮಶಾನಕ್ಕೆ ಜಾಗ ನೀಡಿದೆ. ಆದರೆ, ಅಲ್ಲಿ ತೆರಳಲು ರಸ್ತೆ ವ್ಯವಸ್ಥೆ ಮಾಡದ್ದರಿಂದ ಅಂತ್ಯಸಂಸ್ಕಾರಕ್ಕೆ ಈಡೇರಿಸಲು ಪಡಬೇಕಾದ ಕಷ್ಟಅಷ್ಟಿಷ್ಟಲ್ಲ. ಈ ಕುರಿತು ತಹಸೀಲ್ದಾರ, ಎಸಿ, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ತಹಸೀಲ್ದಾರರು ಶಾಸಕರ ಮಾತಿಗೂ ಕ್ಯಾರೇ ಎನ್ನುತ್ತಿಲ್ಲ. ಕೂಡಲೇ ಜಮೀನುಗಳು ಮಾಲೀಕರ ಮನವೊಲಿಸಿ ಸ್ಮಶಾನಕ್ಕೆ ತೆರಳಲು ರಸ್ತೆ ನಿರ್ಮಿಸಿ ಕೊಡಬೇಕು ಅಂತ ಆನಿಗೋಳ ನಿವಾಸಿಗಳು ಬಸಪ್ಪ ಮಾದರ, ರಮೇಶ ಹಂಚಿನಮನಿ ಆಗ್ರಹಿಸಿದ್ದಾರೆ. 

ಮಾದರ ಸಮಾಜದ ಸ್ಮಶಾನ ಭೂಮಿ ಸುತ್ತ ವಿವಿಧ ರೈತರ ಜಮೀನಗಳಿದ್ದು, ಸ್ಮಶಾನ ಹೊಗಲು ರಸ್ತೆ ಮಾಡಲು ರೈತರ ಒಪ್ಪಿಗೆ ಬೇಕು. ಅವರು ಒಪ್ಪಿಗೆ ನೀಡಿದರೆ ರಸ್ತೆ ಮಾಡಿ ಅನೂಕೂಲ ಮಾಡಿಕೊಡಬಹುದು ಅಂತ ಆನಿಗೋಳ ಪಿಡಿಒ ಕಾವೇರಿ ಬಡಿಗೇರ ತಿಳಿಸಿದ್ದಾರೆ. 

click me!