ಗ್ರಾಮ ವಾಸ್ತವ್ಯ ಮೋಜು ಮಸ್ತಿಗಾಗಿ ಮಾಡುತ್ತಿಲ್ಲ: ಶಾಸಕ ರೇಣುಕಾಚಾರ್ಯ

By Govindaraj SFirst Published Dec 18, 2022, 11:40 PM IST
Highlights

ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಶಾಸಕ, ಆದರೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿಗೆ ನಾನು ಎಂದೂ ಸೇವಕ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
 

ಹೊನ್ನಾಳಿ (ಡಿ.18): ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಶಾಸಕ, ಆದರೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿಗೆ ನಾನು ಎಂದೂ ಸೇವಕ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಹುಣಸಘಟ್ಟಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಪ್ರಮಾಣಪತ್ರ, ಸವಲತ್ತುಗಳ ವಿತರಿಸಿ ಮಾತನಾಡಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದ ಶಾಸಕರು, ಅಧಿಕಾರಿಗಳು ಎಸಿ ಕೊಠಡಿಯಲ್ಲಿ ಕೂರುವ ಬದಲು ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಕೇಳುವ ದೃಷ್ಟಿಯಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುದಾನ ಬರುವುದಿಲ್ಲ, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಸೇರಿ ಮಾಡುವ ಕಾರ್ಯಕ್ರಮ ಇದು ಎಂದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಾರೋ ಒಬ್ಬರಿಗಾಗಿ ಮಾಡುತ್ತಿರುವ ಕಾರ್ಯಕ್ರಮವಲ್ಲ ಅಥವಾ ಚುನಾವಣಾ ಕಾರ್ಯಕ್ರಮನೂ ಅಲ್ಲ, ಮೋಜು ಮಸ್ತಿಗಾಗಿ ಮಾಡುತ್ತಿರುವ ಕಾರ್ಯಕ್ರಮವಲ್ಲ ಎಂದ ಶಾಸಕರು, ಕಾರ್ಯಕ್ರಮ ನೋಡಿ ಮಾಜಿ ಶಾಸಕರಿಗೆ ಸಹಿಸಲಾಗುತ್ತಿಲ್ಲ ಹಾಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.

Davanagere: ಗ್ರಾಮ ವಾಸ್ತವ್ಯದಿಂದ ಜನರಿಗೆ ಸೌಲಭ್ಯ: ಶಾಸಕ ರೇಣುಕಾಚಾರ್ಯ

ಅವಳಿ ತಾಲೂಕಿನ 118 ಕೆರೆಗಳ ತುಂಬಿಸಲು ಮಾಜಿ ಸಿಎಂ ಯಡಿಯೂರಪ್ಪ 519 ಕೋಟಿ ರು. ಹಣ ಬಿಡುಗಡೆ ಮಾಡಿದ್ದರೆ, ಬಸವರಾಜ್‌ ಬೊಮ್ಮಾಯಿ ಅವಳಿ ತಾಲೂಕಿನ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದ್ದಾರೆಂದರು. ಹುಣಸಘಟ್ಟಸೇರಿ ಈ ಭಾಗದ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬುದು ನನ್ನ ಕನಸಾಗಿದ್ದು ಇದೀಗ ಮುಖ್ಯಮಂತ್ರಿಗಳು 49 ಕೋಟಿ ಹಣ ಬಿಡುಗಡೆ ಮಾಡಿದ್ದು ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಇಒ ರಾಮಬೋವಿ ಸೇರಿ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿ ಗ್ರಾಮದ ಮುಖಂಡರಿದ್ದರು.

ಇಚ್ಛಾಶಕ್ತಿ, ಗುರಿ, ಕನಸಿದ್ದರೆ ಅಭಿವೃದ್ಧಿ ಸಾಧ್ಯ: ಕೇವಲ ಭಾಷಣದಿಂದ ಅಭಿವೃದ್ಧಿ ಅಸಾಧ್ಯ, ಅಭಿವೃದ್ಧಿಗೆ ಇಚ್ಛಾಶಕ್ತಿ, ಗುರಿ ಇರುವ ಜೊತೆಗೆ ನಾಯಕರಾದವರಿಗೆ ಒಂದು ಕನಸಿರಬೇಕು ಅದನ್ನು ಸಾಕಾರಗೊಳಿಸುವ ಕರ್ತೃ ಶಕ್ತಿ ಕೂಡ ಬೇಕಾಗುತ್ತದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ಎಂಎ ಎಂಕಾಂ ಹಾಗೂ ಎಂಎಸ್ಸಿ ಸ್ನಾತಕೋತ್ತರ ಪದವಿಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಮೊದಲ ಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ ಹೊನ್ನಾಳಿಯಲ್ಲಿ ಸರ್ಕಾರಿ ಕಲಾ ಪಿಯು ಕಾಲೇಜು ಮಾತ್ರವಿತ್ತು. ಉನ್ನತ ಶಿಕ್ಷಣಕ್ಕಾಗಿ ಅವಳಿ ತಾಲೂಕುಗಳ ವಿದ್ಯಾರ್ಥಿಗಳು ಶಿವಮೊಗ್ಗ ಅಥವಾ ದಾವಣಗೆರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. 

ವಿದ್ಯಾರ್ಥಿಗಳ ಕಷ್ಟತಿಳಿದು ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ.ಎಚ್‌.ಶಂಕರಮೂರ್ತಿ ಹಾಗೂ ಉಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಯವರಲ್ಲಿ ಕ್ಷೇತ್ರದಲ್ಲಿ ಮಠದ ಪದವಿ ಕಾಲೇಜು ಇದ್ದರೂ ಪಟ್ಟು ಹಿಡಿದು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿಗೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿಸಲಾಯಿತು. ಇದೀಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ನಾತಕೋತ್ತರ ಕಾಲೇಜು ಕೂಡ ಮಂಜೂರಾಗಿದೆ ಎಂದು ಹೇಳಿದರು. ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಶಿವಬಸಪ್ಪ ಎಚ್‌.ಯತ್ತಿನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರ ಪ್ರಯತ್ನದಿಂದ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗವಾದ ಎಂಎ ಕನ್ನಡ, ಇತಿಹಾಸ, ಎಂ.ಕಾಂ. ಮತ್ತು ಎಂ.ಎಸ್ಸಿ (ಗಣಿತ )ವಿಭಾಗಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಜನರ ಕನಸು ಸಾಕಾರಗೊಳಿಸಲು ಬಿಜೆಪಿ ಸೇರಿದೆ, ವೈಯಕ್ತಿಕ ಲಾಭಕ್ಕಾಗಿ ಅಲ್ಲ: ಸಚಿವ ಬಿ.ಸಿ.ಪಾಟೀಲ್‌

ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಕೋಟಿ ಕೋಟಿ ಅನುದಾನ ನೀಡಿ ಪ್ರತಿಯೊಂದು ಹಳ್ಳಿಗಳ ಅಭಿವೃದ್ಧಿ ಮಾಡಿದ್ದು, ಇದು ಸುಳ್ಳು ಎಂದು ಸಾಬೀತು ಮಾಡಿದರೇ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ.
-ಎಂ.ಪಿ.ರೇಣುಕಾಚಾರ್ಯ, ಶಾಸಕ

click me!