
ವಿಜಯಪುರ: ಬಬಲೇಶ್ವರ ತಾಲೂಕಿನಲ್ಲಿ ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಮಲಘಾಣ ಪಶ್ಚಿಮ ಕಾಲುವೆಯ 67 ಕಿ.ಮೀ. ಯಿಂದ 77 ಕಿ.ಮೀ. ವ್ಯಾಪ್ತಿಯಲ್ಲಿ ಕಾಲುವೆಯ ಕೆಳಭಾಗದಲ್ಲಿ ರಂಧ್ರ ಕೊರೆದು ನೀರು ಕಳ್ಳತನ ಮಾಡುತ್ತಿದ್ದ 70 ರಿಂದ 80 ಹೊಸ ಪ್ರಕರಣಗಳನ್ನು ಕಂಬಾಗಿ ಮತ್ತು ಸಂಗಾಪುರ ಎಸ್.ಎಚ್. ಗ್ರಾಮಗಳ ಮಧ್ಯೆ ಕೆಬಿಜೆಎನ್ಎಲ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಮುಂಚೆ ಕಾಲುವೆಯ ಕೊನೆಯ ಭಾಗದವರೆಗೂ ನೀರು ಬರುತ್ತಿಲ್ಲ ಎಂದು ರೈತರು ಅರ್ಜುಣಗಿಯಲ್ಲಿ ಧರಣಿ ನಡೆಸಿದ್ದರು. ಅಲ್ಲದೆ, ರೈತರು ಕಾಲುವೆಯ ಡೆಡ್ ಎಂಡ್ ವರೆಗೆ ನೀರು ತಲುಪಿಸಲು ಕ್ರಮ ಕೈಗೊಳ್ಳುವಂತೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಈ ಮುಂಚೆ ಇದೇ ತಾಲೂಕಿನ ತಾಲೂಕಿನ ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ, ಹೆಬ್ಬಳಟ್ಟಿ ವ್ಯಾಪ್ತಿಯಲ್ಲಿ ಸುಮಾರು 30 ಕಡೆಗಳಲ್ಲಿ ಕಾಲುವೆಯ ಬುಡದಲ್ಲಿ ಯಾರ ಕಣ್ಣಿಗೂ ಕಾಣದಂತೆ ರಂದ್ರ ಕೊರೆದು ಸುಮಾರು 4 ರಿಂದ 6 ಇಂಚುಗಳ ಪೈಪುಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.
ಇದನ್ನೂ ಓದಿ: 265 ಎಕರೆ ಭೂಮಿ ಕೊಟ್ಟಿದ್ದೇವೆ, ನಮಗೇಕೆ ನೀರಿಲ್ಲ? ಕಾಲುವೆಗೆ ಇಳಿದು ಗ್ರಾಮಸ್ಥರ ಆಕ್ರೋಶ
ಈ ಬಾರಿ ಕೂಡ ನೀರು ಕಳ್ಳರು ಕಾಲುವೆಯ ಕೆಳಭಾಗದಲ್ಲಿ ರಂಧ್ರ ಕೊರೆದು 4 ರಿಂದ 6 ಇಂಚಿನ ಪೈಪು ಬಳಸಿ ನೀರು ಕದಿಯುತ್ತಿರುವುದು ಪತ್ತೆಯಾಗಿದೆ. ಈಗ ಕಂಬಾಗಿ ಮತ್ತು ಸಂಗಾಪುರ ಎಸ್.ಎಚ್. ಭಾಗದಲ್ಲಿ ರಂಧ್ರಗಳನ್ನು ಮುಚ್ಚಲಾಗಿದ್ದು, ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಬಬಲೇಶ್ವರ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜೇಂದ್ರ ರೂಡಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ-ಯಶವಂತಪುರ ರೈಲಿನ ಇಂಜಿನ್ ವೈಫಲ್ಯ; ಬಸವ ಎಕ್ಸ್ಪ್ರೆಸ್ ತಡೆದು ಕಲ್ಲು ತೂರಾಟ