ಮದ್ದೂರು (ಆ.10) : ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಇದೆ ಮೊದಲ ಬಾರಿಗೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿರುವ ಬಗ್ಗೆ ಮಾತನಾಡಿದ್ದಾರೆ. ಪಟ್ಟಣದಲ್ಲಿ ಪುರಾಣ ಪ್ರಸಿದ್ಧ ಶ್ರೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಹಾಗು ಕುಟುಂಬದವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ನಾನು ರಾಜಕಾರಣದಿಂದ ದೂರ ಉಳಿದು ಬಹಳ ವರ್ಷಗಳಾಗಿದೆ. 55 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೆಷ್ಟು ವರ್ಷ ರಾಜಕಾರಣ ಮಾಡಲು ಸಾಧ್ಯ. ವಯಸ್ಸಾದ ಮೇಲೆ ವಯೋಸಹಜವಾದ ಕೆಲವು ಹೆಜ್ಜೆಗಳ ಹಾಕಬೇಕಾಗುತ್ತದೆ. ಈಗ ನಾನು ಅ ಹೆಜ್ಜೆಯನ್ನು ಹಾಕಿ ಆಗಿದೆ. ಈಗ ರಾಜಕಾರಣದ ಆಗು ಹೋಗುಗಳನ್ನು ದೂರದಲ್ಲೇ ನಿಂತು ನೋಡುತ್ತಿದ್ದೇನೆ. ನನ್ನ ಮಾರ್ಗದರ್ಶನ ಬಯಸಿದರೆ ಅಗತ್ಯವಾಗಿ ನೀಡುವೆ ಎಂದರು.
ನೂತನ ಸಿಎಂ ಬೊಮ್ಮಾಯಿಯವರಿಗೊಂದು ಎಸ್.ಎಂ. ಕೃಷ್ಣ ಪತ್ರ
ಸಿಎಂ ಬಸವರಾಜ ಬೊಮ್ಮಾಯಿ ತಂದೆ ಎಸ್ ಆರ್ ಬೊಮ್ಮಾಯಿ ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ ಸದಸ್ಯರಾಗಿದ್ದರು ಎಂದರು.
ಪರಿಷತ್ತಿನ ಕೆಲಸ ಕಾರ್ಯಗಳಲ್ಲಿ ಆಸಕ್ತಿ ವಹಿಸುತ್ತಿದ್ದರು. ವಿಚಾರಗಳನ್ನು ಅಧ್ಯಯನ ಮಾಡುವ ಹಾಗು ಅರ್ಥ ಮಾಡಿಕೊಳ್ಳುವ ಚೈತನ್ಯಪೂರ್ಣ ವ್ಯಕ್ತಿಯಾಗಿದ್ದು ಅವರಿಗೆ ಶುಭ ಹಾರೈಸುತ್ತೇನೆ ಎಂದರು.
ಹಿಂದೆ ಒಳ್ಳೊಳ್ಳೆಯ ಕೆಲಸ ಕಾರ್ಯಗಳು ನಡೆದಿವೆಯೊ ಅವೇ ಅವರಿಗೆ ಪ್ರೇರಣಾ ಶಕ್ತಿಯಾಗಲಿ ಎಂದು ಆಶಿಸಿದ ಎಸ್ ಎಂ ಕೃಷ್ಣ ಮೈಷುಗರ್ ಅರಂಭದ ಕುರಿತು ಕೆಲವು ರೈತರ ಪ್ರತಿನಿಧಿಗಳು ನನ್ನನ್ನ ಭೇಟಿ ಮಾಡಿದ್ದರು. ಅವರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದೇನೆ ಎಂದರು.
ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲಿ ನಡೆಯ ಬೇಕೋ ಅಥವಾ ಖಾಸಗಿಯವರ ನೇತೃತ್ವದಲ್ಲಿ ನಡೆಯಬೇಕೋ ಎನ್ನುವುದನ್ನು ನಾನು ತೀರ್ಮಾನ ಮಾಡುವುದಲ್ಲ. ಸರ್ಕಾರ ಮತ್ತು ರೈತ ಪ್ರತಿನಿಧಿಗಳು ಕುಳಿತು ಚರ್ಚಿಸಿ ಯಾವುದು ಸೂಕ್ತ ಎನ್ನುವುದನ್ನು ತೀರ್ಮಾನಿಸಲಿ ಎಂದರು.