ಮಂಗಳೂರು ಪ್ರವೇಶಕ್ಕೆ ವಾಹನಗಳಿಗೆ ನಿರ್ಬಂಧ

By Kannadaprabha NewsFirst Published Jul 5, 2020, 8:17 AM IST
Highlights

ಸಂಡೇ ಲಾಕ್‌ಡೌನ್‌ಗೆ ಪೂರಕವಾಗಿ ಶನಿವಾರ ರಾತ್ರಿ 8ರಿಂದಲೇ ಮಂಗಳೂರು ನಗರಕ್ಕೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳೂರು ನಗರದ ವಿವಿಧ ಕಡೆ ನಾಕಾ ಬಂಧಿ ಹಾಕಿರುವ ಪೊಲೀಸರು ಎಲ್ಲ ವಾಹನಗಳನ್ನು ವಾಪಾಸ್‌ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿದೆ.

ಮಂಗಳೂರು(ಜು.05): ಸಂಡೇ ಲಾಕ್‌ಡೌನ್‌ಗೆ ಪೂರಕವಾಗಿ ಶನಿವಾರ ರಾತ್ರಿ 8ರಿಂದಲೇ ಮಂಗಳೂರು ನಗರಕ್ಕೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳೂರು ನಗರದ ವಿವಿಧ ಕಡೆ ನಾಕಾ ಬಂಧಿ ಹಾಕಿರುವ ಪೊಲೀಸರು ಎಲ್ಲ ವಾಹನಗಳನ್ನು ವಾಪಾಸ್‌ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿದೆ.

ತುರ್ತು ವಾಹನಗಳಿಗೆ ಮಾತ್ರ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಮಂಗಳೂರಿನಿಂದ ಹೊರ ಹೋಗಲು ಅಷ್ಟುಕಟ್ಟುನಿಟ್ಟು ವಿಧಿಸಲಾಗಿಲ್ಲ. ರಸ್ತೆಗಳಿಗೆ ಬ್ಯಾರಿಕೇಡ್‌ ಅಳವಡಿಕೆ ಮಾಡಿ ಪೊಲೀಸ್‌ ಪಹರೆ ಮುಂದುವರಿದಿದೆ. ಅನೇಕ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿನಿಂತಿದ್ದವು.

ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರು ಬಲಿ, ಬಿಜೆಪಿ ಮುಖಂಡ ಸೇರಿ 75 ಪಾಸಿಟಿವ್‌

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಸಂಡೇ ಲಾಕ್‌ಡೌನ್‌ ದ.ಕ. ಜಿಲ್ಲಾದ್ಯಂತ ಜಾರಿಗೆ ಬರಲಿದ್ದು, ಎಲ್ಲ ಬಗೆಯ ಸಾರ್ವಜನಿಕ ಸಾರಿಗೆ ಸಂಚಾರ ನಿರ್ಬಂಧಿಸಲಾಗಿದೆ. ಅನಗತ್ಯವಾಗಿ ತಿರುಗುವ ಖಾಸಗಿ ವಾಹನಗಳ ಮೇಲೂ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ.

ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಒಟ್ಟು 33 ಗಂಟೆಗಳ ಕಾಲ ಜಿಲ್ಲೆ ಸ್ತಬ್ಧವಾಗಿರು​ತ್ತದೆ. ಜನರು ಅವಶ್ಯಕ ಸಾಮಗ್ರಿಗಳನ್ನು ಮಾತ್ರ ಖರೀದಿಸಲು ರಸ್ತೆಗಿಳಿಯಲು ಅವಕಾಶವಿದೆ.

ತರಕಾರಿ, ಮಾಂಸ ಇಲ್ಲ:

ರಾಜ್ಯ ಮಾರ್ಗಸೂಚಿ ಪ್ರಕಾರ ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ತರಕಾರಿ, ಮಾಂಸ ಅಂಗಡಿ ತೆರೆಯಲು ಅವಕಾಶ ಇದೆಯಾದರೂ, ದ.ಕ. ಜಿಲ್ಲೆಯಲ್ಲಿ ಈ ಸೇವೆ ಇರಲ್ಲ. ಕೇವಲ ಹಾಲು, ದಿನಪತ್ರಿಕೆ, ಔಷಧಾಲಯ ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಬೇರಾವುದೇ ಸೇವೆಗಳು ಸಿಗಲ್ಲ.

ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಆದರೆ ಗರಿಷ್ಠ 50 ಮಂದಿಯನ್ನು ಮೀರುವಂತಿಲ್ಲ. ಸಾಮಾಜಿಕ ಅಂತರ ಮತ್ತಿತರ ಕೊರೋನಾ ನಿಯಂತ್ರಣದ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಪೊಲೀಸ್‌, ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳು ಇದರ ಮೇಲೆ ನಿಗಾ ವಹಿಸಲಿದ್ದಾರೆ.

ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ

ಜಿಲ್ಲಾದ್ಯಂತ ಈ ಅವಧಿಯಲ್ಲಿ ಬಸ್‌, ರಿಕ್ಷಾ, ಟ್ಯಾಕ್ಸಿ ಯಾವುದೂ ರಸ್ತೆಗಿಳಿಯುವುದಿಲ್ಲ. ಈ ಎಚ್ಚರಿಕೆ ಮೀರಿ ರಸ್ತೆಗಿಳಿಯುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಗತ್ಯವಾಗಿ ವಾಹನಗಳಲ್ಲಿ ಓಡಾಟ ನಡೆಸುವವರ ಮೇಲೆ ಪೊಲೀಸ್‌ ಇಲಾಖೆ ನಿಗಾ ವಹಿಸಲಿದೆ.

ಕೆಎಸ್ಸಾರ್ಟಿಸಿಯ ಎಲ್ಲ ಬಸ್ಸುಗಳನ್ನು ಈ ಅವಧಿಯಲ್ಲಿ ಓಡಿಸಲಾಗುವುದಿಲ್ಲ. ಹೊರ ಜಿಲ್ಲೆಗಳಿಂದ ಬಸ್ಸುಗಳು ಆಗಮಿಸುವುದಿದ್ದರೂ ಭಾನುವಾರ ಬೆಳಗ್ಗೆ 5 ಗಂಟೆಯೊಳಗೆ ಬರಬಹುದು. ನಂತರ ಬಸ್ಸು ಸಂಚಾರಕ್ಕೆ ಅವಕಾಶವಿಲ್ಲ. ಮಂಗಳೂರಿನಿಂದ ಈ ಅವಧಿಯಲ್ಲಿ ಯಾವುದೇ ಬಸ್ಸುಗಳು ಸಂಚಾರ ಮಾಡುವುದಿಲ್ಲ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಮಣ್ಯ ದೇವಾಲಯದ ಸಿಬ್ಬಂದಿಗೆ ಕ್ವಾರೆಂಟೈನ್..!

ಜನಸಂದಣಿ ವಿರಳ: ಸಂಡೇ ಲಾಕ್‌ಡೌನ್‌ ಇದ್ದರೂ ಶನಿವಾರ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿಲ್ಲ. ಜತೆಗೆ ದಿನವಿಡಿ ಮಳೆ ಸುರಿಯುತ್ತಲೇ ಇದ್ದುದರಿಂದಲೂ ಜನರು ಮಾರುಕಟ್ಟೆಯತ್ತ ತೆರಳಲು ನಿರಾಸಕ್ತಿ ವಹಿಸಿದ್ದು ಕಂಡುಬಂತು. ಆದರೆ ವೈನ್‌ಶಾಪ್‌ಗಳು ಬಂದ್‌ ಆಗಲಿರುವುದರಿಂದ ಈ ಮಳಿಗೆಗಳಲ್ಲಿ ಮಾತ್ರ ಸಂಜೆಯಾದಂತೆ ಜನರ ಓಡಾಟ ಹೆಚ್ಚಿತ್ತು. ರಾತ್ರಿ 7ರ ಬಳಿಕವಂತೂ ಕೆಲವು ವೈನ್‌ಶಾಪ್‌ಗಳಲ್ಲಿ ಕ್ಯೂ ನಿಂತಿರುವುದು ಕಂಡುಬಂದಿದೆ.

ಉಡುಪಿ ಸಂಪೂರ್ಣ ಬಂದ್‌:

ಈ ಭಾನು​ವಾರ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಇರಲಿದೆ. ಆದರೆ ಅಗತ್ಯ ವಸ್ತುಗಳ ಪೂರೈಕೆ, ಮಾರಾಟ, ಖರೀದಿಗೆ ಅವಕಾಶ ಇರುತ್ತದೆ. ಹಾಲು, ಔಷಧಿ, ದಿನಸಿ ಇತ್ಯಾದಿ ಅಂಗಡಿಗಳು ತೆರೆದಿರುತ್ತವೆ. ಆಸ್ಪತ್ರೆಗಳು, ಕ್ಲಿನಿಕ್‌ಗಳು ಎಂದಿನಂತೆ ಕಾರ್ಯಾಚರಿಸಲಿವೆ.

ಭಾನುವಾರವಾದ್ದರಿಂದ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಕೊರೋನಾ ಸಾಂಕ್ರಮಿಕ ರೋಗದ ಜತೆಗೆ ಭಾರಿ ಮಳೆಯಾಗುತ್ತಿರುವುದರಿಂದ ಎಲ್ಲ ಸರ್ಕಾರಿ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಹೋಗದಂತೆ ತಿಳಿಸಲಾಗಿದೆ ಮತ್ತು ಎರಡೂ ವಿಕೋಪ ಸ್ಥಿತಿಯನ್ನು ನಿಭಾಯಿಸಲು ಸಿದ್ಧರಿರುವಂತೆ ಜಿಲ್ಲಾಡಳಿತ ಆದೇಶಿಸಿದೆ.

ಖಾಸಗಿ, ಸರ್ಕಾರಿ ಬಸ್‌ ಅಥವಾ ಆಟೋರಿಕ್ಷಾ, ಟ್ಯಾಕ್ಸಿ, ಇತರ ಸಾರಿಗೆ ವಾಹನಗಳೂ ಇರುವುದಿಲ್ಲ. ಜನರು ಔಷಧ, ಹಾಲಿನಂತಹ ತೀರಾ ಅಗತ್ಯ ವಸ್ತುಗಳ ಖರೀದಿಗೆ ಹೊರತುಡಿಸಿ ಹೊರಗೆ ಬರಬಾರದು. ಖಾಸಗಿ ವಾಹನಗಳಲ್ಲಿ ರಸ್ತಗಿಳಿಯಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ.

click me!