ಹೆಲ್ಮೆಟ್ ಧರಿಸದಿದ್ದರೆ ವಾಹನ ವಶ: ರವಿಕುಮಾರ್

By Kannadaprabha NewsFirst Published Oct 4, 2023, 8:51 AM IST
Highlights

ಇನ್ನು ಮುಂದೆ ನಗರ ವ್ಯಾಪ್ತಿಯೊಳಗೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದಿಲ್ಲ, ಬದಲಿಗೆ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ಯಾವುದೇ ಶಿಫಾರಸುಗಳಿಗೂ ಮಣಿಯುವುದಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು.

  ಮಂಡ್ಯ :  ಇನ್ನು ಮುಂದೆ ನಗರ ವ್ಯಾಪ್ತಿಯೊಳಗೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದಿಲ್ಲ, ಬದಲಿಗೆ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ಯಾವುದೇ ಶಿಫಾರಸುಗಳಿಗೂ ಮಣಿಯುವುದಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಮಂಗಳವಾರ ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು, ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹೆಲ್ಮೆಟ್ ಬಗ್ಗೆ ಹಲವಾರು ವರ್ಷಗಳಿಂದ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಯಾವುದೇ ಶಿಫಾರಸ್ಸುಗಳಿಗೂ ಮಣಿಯುವುದಿಲ್ಲ ಎಂದು ನೇರವಾಗಿ ಹೇಳಿದರು.

Latest Videos

ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ನಗರದ ಆರು ಕಡೆಗಳಲ್ಲಿ ಹೈಟೆಕ್ ಮಾದರಿಯ ವ್ಯವಸ್ಥೆ ಮಾಡಲಾಗುವುದು. ಗುತ್ತಲು ರಸ್ತೆಯ ಕುವೆಂಪು ಶತಮಾನೋತ್ಸವ ಶಾಲೆ ಬಳಿ ಫುಟ್‌ಪಾತ್ ವ್ಯಾಪಾರಿಗಳಿಗೆ ಮೇಲ್ಚಾವಣಿ, ಬೆಳಕಿನ ವ್ಯವಸ್ಥೆ ಮಾಡಿಕೊಟ್ಟು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಅದು ಯಶಸ್ವಿಯಾದಲ್ಲಿ ಉಳಿದೆಡೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.

ಸ್ಟೇಡಿಯಂ ಪಕ್ಕದ ರಸ್ತೆಯನ್ನು ಫುಡ್‌ಸ್ಟ್ರೀಟ್ ಆಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಸಂಜೆಯ ಸಮಯದಲ್ಲಿ ಮಕ್ಕಳು, ಮಹಿಳೆಯರ ಮನರಂಜನೆಗೆ ಒತ್ತು ನೀಡಲಾಗುವುದು. ಉದ್ಯಾನಗಳಲ್ಲಿ ಕುಡುಕರು ಮತ್ತು ರೌಡಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಮಟ್ಟ ಹಾಕಲು ಕ್ರಮ ವಹಿಸಲಾಗುವುದು ಎಂದರು.

ಸಿಸಿ ಟಿವಿ ಕಣ್ಗಾವಲಿನಲ್ಲಿ ನಗರ:

ನಗರದೊಳಗೆ ಪ್ರಸ್ತುತ ೧೬ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳಿದ್ದು, ಉಳಿದಂತೆ ನಗರದೊಳಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರ ಮೂಲಕ ಅಪರಾಧಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಅವುಗಳ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮತ್ತು ನಗರಸಭೆ ಮಾಡಲಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

೨.೨೦ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ:

ನಗರದ ಗೌರಿಶಂಕರ ಕಲ್ಯಾಣ ಮಂಟಪದಿಂದ ನಗರದ ಬೆಸಗರಹಳ್ಳಿ ರಾಮಣ್ಣ ವೃತ್ತದವರೆಗೆ ೨.೨೦ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಇದರ ಮಧ್ಯೆ ಶ್ರೀಕನ್ನಿಕಾಪರಮೇಶ್ವರ ದೇವಾಲಯದ ವೃತ್ತ, ಹೊಸಹಳ್ಳಿ ವೃತ್ತ, ಬೆಸಗರಹಳ್ಳಿ ರಾಮಣ್ಣ ವೃತ್ತವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ರಸ್ತೆಯಲ್ಲಿ ಪುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಬಸ್-ಬೇಗಳನ್ನು ನಿರ್ಮಿಸಲಾಗುವುದು. ಡೆಲ್ಟಾ ವತಿಯಿಂದ ೧.೫೦ ಕೋಟಿ ರು. ಅನುದಾನ ಬರುವ ನಿರೀಕ್ಷೆ ಇದೆ. ಈ ಹಣದಲ್ಲಿ ಅತ್ಯಾಧುನಿಕ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಚಾಲಕರ ವಿರುದ್ಧ ಪ್ರಕರಣ ದಾಖಲು:

ಸಾರಿಗೆ ಬಸ್‌ಗಳನ್ನು ಬಸ್-ಬೇಗಳಲ್ಲಿ ನಿಲ್ಲಿಸದೆ ಹೆದ್ದಾರಿ ರಸ್ತೆಯಲ್ಲೇ ನಿಲ್ಲಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಎಲ್ಲೆಂದರಲ್ಲಿ ನಿಯಮಬಾಹೀರವಾಗಿ ನಿಲುಗಡೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದ್ದು, ಚಾಲಕರ ವರ್ತನೆ ಮುಂದುವರೆದಲ್ಲಿ ಮುಲಾಜಿಲ್ಲದೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

೩೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ:

ನಗರದ ಹೊರವಲಯದ ಅಮರಾವತಿ ಹೊಟೇಲ್‌ನಿಂದ ಕಲ್ಲಹಳ್ಳಿಯ ಜ್ಯೋತಿ ಇಂಟರ್‌ನ್ಯಾಷನಲ್ ಹೊಟೇಲ್‌ವರೆಗಿನ ಮುಖ್ಯರಸ್ತೆಯನ್ನು ೩೦ ಕೋಟಿ ರು. ವೆಚ್ಚದಲ್ಲಿ ಹೆದ್ದಾರಿ ಪ್ರಾಧಿಕಾರದವರು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದಾರೆ. ಶೀಘ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ. ಇದರಲ್ಲಿ ಹೈಟೆಕ್ ಮಾದರಿಯಲ್ಲಿ ಪುಟ್‌ಪಾತ್ ನಿರ್ಮಾಣ, ಬಸ್‌ಬೇಗಳ ನಿರ್ಮಾಣ ಮಾಡಲಾಗುವುದು ಎಂದರು.

ಮಹಾವೀರ ವೃತ್ತದ ಬಳಿ ಅಂಡರ್‌ಪಾಸ್ ನಿರ್ಮಿಸಲಾಗುವುದು. ಜೆ.ಸಿ. ವೃತ್ತದಿಂದ ಹೊಳಲು ವೃತ್ತದವರೆಗೆ ಸಿಮೆಂಟ್ ರಸ್ತೆ ಮಾಡಿ ನಂತರ ಎರಡೂ ಕಡೆ ಚರಂಡಿ ನಿರ್ಮಿಸುವ ಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಅಧೀಕ್ಷಕ ಇ.ತಿಮ್ಮಯ್ಯ, ಉಪ ಅಧೀಕ್ಷಕ ಶಿವಮೂರ್ತಿ ಇತರರಿದ್ದರು.

ಗುತ್ತಲು ಕೆರೆ ಅಭಿವೃದ್ಧಿ:  ಗುತ್ತಲು ಕೆರೆಯನ್ನು ೭.೫೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ವಹಿಸಲಾಗುವುದು. ಕೆರೆ ಏರಿ ಮೇಲೆ ವಾಕಿಂಗ್ ಟ್ರಾಕ್ ನಿರ್ಮಿಸಿ ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.

- ಪಿ.ರವಿಕುಮಾರ್, ಶಾಸಕ

click me!