ಪಾಸ್ ಪಡೆದು ಮುಂಬೈನಿಂದ ಊರಿಗೆ ಬರ್ತಿದ್ದ ಕುಟುಂಬ: ದಾರಿ ಮಧ್ಯೆ ಹೊತ್ತಿ ಉರಿದ ವಾಹನ

By Kannadaprabha NewsFirst Published May 13, 2020, 8:56 AM IST
Highlights

ಸೇವಾಸಿಂಧು ಆಪ್‌ ಮೂಲಕ ಕುಂದಾಪುರದ ಆಲೂರು ಸಮೀಪದ ತಾರಿಬೇರು ಕುಟುಂಬದ ಮಕ್ಕಳು ಸೇರಿದಂತೆ ಹದಿನೈದು ಮಂದಿ ಸೋಮವಾರ ಟೆಂಪೋ ಟ್ರಾವೆಲ್ಲರ್ ಬೆಂಕಿಗಾಹುತಿಯಾಗಿದೆ.

ಉಡುಪಿ(ಮೇ 13): ಕುಂದಾಪುರ ಮೂಲದ ಕುಟುಂಬವೊಂದು ಟೆಂಪೋ ಟ್ರಾವೆಲ್ಲರ್‌ ಮೂಲಕ ಮುಂಬೈನಿಂದ ಊರಿಗೆ ಮರಳುತ್ತಿರುವ ವೇಳೆಯಲ್ಲಿ ವಾಹನ ಆಕಸ್ಮಿಕ ಬೆಂಕಿಗಾಹುತಿಯಾದ ಘಟನೆ ಸೋಮವಾರ ಸಂಜೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರೆಲ್ಲರೂ ಪಾರಾಗಿ ಸುರಕ್ಷಿತವಾಗಿ ಮಂಗಳವಾರ ರಾತ್ರಿ ಊರಿಗೆ ತಲುಪಿದ್ದಾರೆ.

ಸೇವಾಸಿಂಧು ಆಪ್‌ ಮೂಲಕ ಕುಂದಾಪುರದ ಆಲೂರು ಸಮೀಪದ ತಾರಿಬೇರು ಕುಟುಂಬದ ಮಕ್ಕಳು ಸೇರಿದಂತೆ ಹದಿನೈದು ಮಂದಿ ಸೋಮವಾರ ಟೆಂಪೋ ಟ್ರಾವೆಲ್ಲರ್‌ನಲ್ಲಿ ಮುಂಬೈನ ಭಾಂಡುಪ್‌ನಿಂದ ಊರಿಗೆ ಪ್ರಯಾಣ ಬೆಳೆಸಿದ್ದರು. ಮೂರುವರೆ ಗಂಟೆ ಪ್ರಯಾಣ ಮುಗಿಸಿ ಲೋನಾವಾಲಾ ಸಮೀಪಿಸುತ್ತಿದ್ದಂತೆಯೇ ಟಿಟಿ ಸ್ಟೇರಿಂಗ್‌ ಸಮೀಪದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಾರ್ಧದಲ್ಲೇ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದ್ದು, ಬಸ್‌ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ ನೊಳಗಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರ ಜೈಲಿಂದ ಶೇ.50 ಕೈದಿಗಳಿಗೆ ಬಿಡುಗಡೆ ಭಾಗ್ಯ!

ಸಚಿವ ಕೋಟ ನೆರವು: ದಾರಿ ಮಧ್ಯೆ ವಾಹನ ಸುಟ್ಟು ಅತಂತ್ರರಾದ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವಾಗಿದ್ದಾರೆ. ಕೇಶವ್‌ ಪೂಜಾರಿ ಅವರ ಕುಟುಂಬ ನೇರವಾಗಿ ಸಚಿವ ಕೋಟ ಆಪ್ತ ಸಹಾಯಕ ಪ್ರಕಾಶ್‌ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಅವರು ಸಚಿವರ ಮೂಲಕ ಸ್ಥಳೀಯ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ನೆರವಾಗುವಂತೆ ಕೋರಿಕೊಂಡರು.

ಎರಡನೇ ದಿನಕ್ಕೆ ದಿಢೀರ್ ಕುಸಿದ ಅಡಕೆ ಧಾರಣೆ..! ಈಗೆಷ್ಟು ಬೆಲೆ?

ಸ್ಥಳೀಯ ಪೊಲೀಸರ ಸಹಕಾರದಿಂದ ಅವರನ್ನು ನಿಪ್ಪಾಣಿಯವರೆಗೆ ಬಿಡಲಾಯಿತು. ಅಲ್ಲಿಂದ ಊರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯವಸ್ಥೆ ಮಾಡಿದ ವಾಹನದಲ್ಲಿ ಊರಿಗೆ ಪ್ರಯಾಣ ಬೆಳೆಸಿದರು. ಮಂಗಳವಾರ ಸಂಜೆ ಶಿರೂರು ಟೋಲ್‌ ತಲುಪಿದ್ದು, ಅಲ್ಲಿ ತಪಾಸಣೆ ಮುಗಿಸಿ ರಾತ್ರಿ 8.30ರ ಬಳಿಕ ಅಲ್ಲಿಂದ ಕೋಟೇಶ್ವರ ವರದರಾಜ್‌ ಶೆಟ್ಟಿಕಾಲೇಜಿನ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಗಿದೆ.

click me!