Vatal Nagaraj: ಹಿಂದಿ ಭಾಷೆ ಹೇರಿಕೆ ವಿರುದ್ಧ ವಾಟಾಳ್‌ ಪ್ರತಿಭಟನೆ

Published : May 01, 2022, 09:17 PM IST
Vatal Nagaraj: ಹಿಂದಿ ಭಾಷೆ ಹೇರಿಕೆ ವಿರುದ್ಧ ವಾಟಾಳ್‌ ಪ್ರತಿಭಟನೆ

ಸಾರಾಂಶ

ಹಿಂದಿ ಭಾಷೆ ಹೇರಿಕೆ ವಿರುದ್ಧ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ನಗರ ಹಾರ್ಡಿಂಜ್‌ ವೃತ್ತದಲ್ಲಿ ಶನಿವಾರ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದರು.

ಮೈಸೂರು (ಮೇ.01): ಹಿಂದಿ (Hindi) ಭಾಷೆ ಹೇರಿಕೆ ವಿರುದ್ಧ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ (Vatal Nagaraj) ಅವರು ನಗರ ಹಾರ್ಡಿಂಜ್‌ ವೃತ್ತದಲ್ಲಿ ಶನಿವಾರ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದರು. ಈ ವೇಳೆ ವಾಟಾಳ್‌ ನಾಗರಾಜ್‌ ಮಾತನಾಡಿ, ಕೇಂದ್ರ ಸರ್ಕಾರವು (Central Govt) ಹಿಂದಿ ಹೇರಿಕೆ ಸರಿಯಲ್ಲ. ಹಿಂದಿ ಹೇರಿಕೆ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ಮೇ 14 ರಂದು ರಾಜ್ಯಾದ್ಯಂತ ಮಾಡುತ್ತೇವೆ. ಬ್ಯಾಂಕ್‌, ರೈಲ್ವೆ ನಿಲ್ದಾಣ ಮುಂದೆ ಬೃಹತ್‌ ಪ್ರತಿಭಟನೆ (Protest) ನಡೆಯಲಿದೆ. ನಮಗೆ ಹಿಂದಿ ಬೇಡವೇ ಬೇಡ ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆ ಅಪಾಯಕಾರಿ, ಹಿಂದಿಯನ್ನ ಉತ್ತರ ಪ್ರದೇಶದಲ್ಲೇ ಇಟ್ಟುಕೊಳ್ಳಿ. ಬ್ಯಾಂಕ್‌, ರಾಜಭವನದ ಎದುರಿನ ಹಿಂದಿ ಫಲಕ ತೆಗೆಯಿರಿ. ವಿಧಾನಸಭೆಯಲ್ಲಿ ಹಿಂದಿ ಭಾಷಣ ಬೇಡ. ಶಾಸಕರು ಹಿಂದಿ ಭಾಷಣ ಬಹಿಷ್ಕರಿಸಿ ಸಭಾತ್ಯಾಗ ಮಾಡಬೇಕು. ಸರ್ಕಾರ ಹಿಂದಿ ಭಾಷೆಯನ್ನ ಸಂಪೂರ್ಣ ಬಹಿಷ್ಕರಿಸಬೇಕು. ಹಿಂದಿ ಚಿತ್ರಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

Mekedatu Project ಜಾರಿಗಾಗಿ ಜ.19ಕ್ಕೆ ತಮಿಳುನಾಡು ಗಡಿ ಬಂದ್‌: ವಾಟಾಳ್‌ ನಾಗರಾಜ್‌!

ಹಿಂದಿ ಸಂಪರ್ಕ ಭಾಷೆ ಎಂಬುದು ದಬ್ಬಾಳಿಕೆ, ಇದಕ್ಕೆ ಯಾರೂ ಹೆದರುವುದು ಬೇಡ. ಕನ್ನಡವೇ ನಮಗೆ ಶಕ್ತಿ, ಕನ್ನಡವೇ ನಮ್ಮ ಭಾಷೆ. ಹಿಂದಿ ವಿರುದ್ಧ ನಾನೇ ಮೈಸೂರಿನಿಂದ ಹೋರಾಟ ಆರಂಭಿಸಿದ್ದೆ. ಹಿಂದಿ ರಾಷ್ಟ್ರೀಯ ಭಾಷೆ ಎಂದಿರುವ ನಟ ಅಜಯ್‌ ದೇವಗನ್‌ ಅವಿವೇಕಿ, ಮೂರ್ಖ. ಅವನ ಮಾತನ್ನು ನಾವು ತಿರಸ್ಕರಿಸುತ್ತೇವೆ ಎಂದು ಅವರು ಕಿಡಿಕಾರಿದರು.

ಮರು ಪರೀಕ್ಷೆ ಬೇಡ: ಪಿಎಸ್‌ಐ ಪರೀಕ್ಷೆ ಸಂಪೂರ್ಣ ರದ್ದು ಮಾಡಿ, ಮರು ಪರೀಕ್ಷೆ ಮಾಡಲು ಹೊರಟಿದ್ದೀರಿ. ಯಾರು ಮೋಸ, ಕಳ್ಳತನದಲ್ಲಿ ಪರೀಕ್ಷೆ ಬರೆದಿದ್ದಾರೆ ಅದನ್ನ ತನಿಖೆ ಮಾಡಿ, ಜೈಲಿಗೆ ಕಳುಹಿಸಿ. ನಿರಪರಾಧಿಗಳಿಗೆ ಮರು ಪರೀಕ್ಷೆ ಬೇಡ ಎಂದು ಅವರು ಒತ್ತಾಯಿಸಿದರು. ತಾಯೂರು ವಿಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.

ಬಿಜೆಪಿಯವರಿಗೆ ಮಾತ್ರ ಹಿಂದಿ ಬೇಕು: ರಾಜ್ಯದಲ್ಲಿ ಹಿಂದಿ ಭಾಷೆ ಹೇರಲು ಬಿಡುವುದಿಲ್ಲ. ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಮಾತ್ರ ಹಿಂದಿ ಬೇಕಾಗಿದೆ ಎಂದು ಕನ್ನಡ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ವಾಗ್ದಾಳಿ ನಡೆಸಿದರು. ಶುಕ್ರವಾರ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಕರ್ನಾಟಕದಲ್ಲೂ ಬಿಜೆಪಿಗೆ ಹಿಂದಿ ಬೇಕಾಗಿದೆ. ಅವರು ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಕರೆಯುತ್ತಿದ್ದು ಹಿಂದಿ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಸಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಿದ್ದು ಕನ್ನಡವೂ ರಾಷ್ಟ್ರಭಾಷೆಯೇ ಎಂದು ಹೇಳಿದರು.

RRR Pre Release Event ಕನ್ನಡಕ್ಕೆ ಮಾಡಿದ ಅಪಮಾನ- ವಾಟಾಳ್ ನಾಗರಾಜ್

ರಾಜ್ಯದ ಶಾಸಕರುಗಳಿಗೆ ಕನ್ನಡದ ಬಗ್ಗೆ ಪ್ರಾಮಾಣಿಕತೆ ಇದ್ದರೆ ರಾಜ್ಯಪಾಲರ ಹಿಂದಿ ಭಾಷಣವನ್ನು ತಿರಸ್ಕಾರ ಮಾಡಬೇಕು. ರಾಜ್ಯಪಾಲರು ಕರ್ನಾಟಕದಲ್ಲಿ ಹಿಂದಿಯಲ್ಲಿ ಭಾಷಣ ಮಾಡದೇ ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಪ್ರತಿಯೊಬ್ಬ ಕನ್ನಡಿಗರ ಉಸಿರು ಎಂದ ಅವರು, ಕೇಂದ್ರ ಸರ್ಕಾರದ ಬ್ಯಾಂಕ್‌, ಅಂಚೆ, ರೈಲ್ವೆ ಇಲಾಖೆಗಳು ಹಿಂದಿ ಮಯವಾಗಿವೆ. ಹಿಂದಿ ಹೇರಲು ಮುಂದಾದರೆ ಹಿಂದಿ ಮತ್ತು ಬಿಜೆಪಿಯವರ ವಿರುದ್ಧವೂ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ