ಪತಿ ಮನೆಗೆ ಬರಲು ತಡವಾಯಿತೆಂದು ಕುಮಟಾದ ಉಪನ್ಯಾಸಕಿ ಆತ್ಮಹತ್ಯೆ

By Web DeskFirst Published Nov 1, 2018, 8:30 PM IST
Highlights

ಪತಿ ಮನೆಗೆ ಬರಲು ತಡವಾಯಿತೆಂಬ ಕಾರಣಕ್ಕೆ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಈ ಪ್ರಕರಣದಲ್ಲಿ ಹೀಗೊಂದು ಪ್ರಶ್ನೆ ಮೂಡಿದೆ. 

ಕುಮಟಾ[ನ.01]  ತಾಲೂಕಿನ ಬಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಮಂಗಳವಾರ ರಾತ್ರಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇರಳ ಕಾಸರಗೋಡಿನ ನಿವಾಸಿ ಸ್ವಾತಿ ಘನಶ್ಯಾಮ ಭಟ್ಟ (29) ನೇಣಿಗೆ ಶರಣಾದ ಉಪನ್ಯಾಸಕಿ.

ಅವರು ನಾಲ್ಕು ತಿಂಗಳ ಹಿಂದೆ ಬಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಟ್ಟಣದ ಬಗ್ಗೋಣಿನಲ್ಲಿ ಪತಿ ಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತಿ ಘನಶ್ಯಾಮ ಭಟ್ಟ ಇಲ್ಲಿನ ಕ್ಯಾಂಪ್ಕೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಬ್ಬರು ಪ್ರೀತಿಸಿ 11 ತಿಂಗಳ ಹಿಂದೆ ಮದುವೆಯಾಗಿದ್ದರು.

ಪತಿ ಘನಶ್ಯಾಮಗೆ ಮಂಗಳವಾರ ಸಂಜೆ ಫೋನ್ ಕರೆ ಮಾಡಿ ಕೆಲಸದಿಂದ ಮನೆಗೆ ಬೇಗ ಬರುವಂತೆ ತಿಳಿಸಿದ್ದರು. ಆದರೆ ಪತಿ ಕಾರ್ಯ ಒತ್ತಡದಿಂದ ಮನೆಗೆ ಬರಲು ವಿಳಂಬವಾಗಿತ್ತು. ಮನೆಗೆ ಬರುವಷ್ಟರಲ್ಲಿ ಸ್ವಾತಿ ಅವರು ನೇಣು ಬಿಗಿದು ಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!