ದುಡ್ಡು ಇಸ್ಕಂಡು ಇಟ್ಕಂಡ್ರೆ ಗುಂಡಿ ಮುಚ್ಚೋರು ಯಾರು?

By Kannadaprabha NewsFirst Published Sep 29, 2022, 12:48 PM IST
Highlights

ಚಿತ್ರದುರ್ಗದಲ್ಲಿ ಒಂದೆಡೆ ನೂರಾರು ಕೋಟಿ ರುಪಾಯಿ ಸುರಿದು ರಸ್ತೆ ಹಾಗೂ ಅವೈಜ್ಞಾನಿಕ ಡಿವೈಡರ್‌ ಅಳವಡಿಕೆ ಕಾರ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ಕೇಬಲ್‌, ಗ್ಯಾಸ್‌ ಪೈಪ್‌ ಲೈನ್‌ ಎಂದು ರಸ್ತೆ ಅಗೆಯುವ ಕಾಮಗಾರಿಗಳಿಂದಾಗಿ ಜನರು ಹೈರಾಗಿದ್ದಾರೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ (ಸೆ.29) : ಚಿತ್ರದುರ್ಗದಲ್ಲಿ ಒಂದೆಡೆ ನೂರಾರು ಕೋಟಿ ರುಪಾಯಿ ಸುರಿದು ರಸ್ತೆ ಹಾಗೂ ಅವೈಜ್ಞಾನಿಕ ಡಿವೈಡರ್‌ ಅಳವಡಿಕೆ ಕಾರ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ಕೇಬಲ್‌, ಗ್ಯಾಸ್‌ ಪೈಪ್‌ ಲೈನ್‌ ಎಂದು ರಸ್ತೆ ಅಗೆಯುವ ಕಾರ್ಯ ಎಗ್ಗಿಲ್ಲದೇ ಸಾಗಿದೆ. ರಸ್ತೆ ನಿರ್ಮಿಸುವಾಗ ನಿಯಮ ಪಾಲಿಸದೆ ಹಾಗೂ ಕೌಶಲ್ಯಗಳ ಅಳವಡಿಸದೇ ಇರುವ ಪರಿಣಾಮ ಹೊಸ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Bharat Jodo Yatra: ರಾಹುಲ್ ಕಾಲ್ನಡಿಗೆ ಬಿಜೆಪಿಗೆ ನಡುಕ: ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್

ಯಾವುದೇ ರಸ್ತೆ ಮಾಡುವಾಗ ಭವಿಷ್ಯದ ದೃಷ್ಟಿಯಿಂದ ಪೂರ್ವತಯಾರಿ ಇರುತ್ತದೆ. ಅಂದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೈಪ್‌ ಅಳವಡಿಕೆ, ಕೇಬಲ್‌, ಒಳಚರಂಡಿ ವ್ಯವಸ್ಥೆ ಕಲ್ಪಿಸುವಾಗ ರಸ್ತೆ ಅಗೆಯಬಾರದೆಂಬ ಕಾರಣಕ್ಕೆ ಜಾಗ ಬಿಟ್ಟುಕೊಳ್ಳಲಾಗುತ್ತದೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ತದ್ವಿರುದ್ದವಾದ ವಾತಾವರಣವಿದೆ.

ರಸ್ತೆ ಮಾಡಿದ ನಂತರ ಅಯ್ಯೋ. . .! ಇಲ್ಲಿ ಕುಡಿವ ನೀರಿನ ಪೈಪ್‌ಲೈನ್‌ಗೆ ಜಾಗ ಬಿಟ್ಟುಕೊಳ್ಳಬೇಕಿತ್ತು ಎಂಬಿತ್ಯಾದಿ ರಾಗಗಳು ಹೊರ ಬರುತ್ತವೆ. ತಕ್ಷಣವೇ ಆಗಿದ್ದಾಯ್ತು, ರಸ್ತೆ ಹೊಡೆದರಾಯ್ತೆಂಬ ಅತ್ಯಂತ ಸರಳೀಕೃತ ನಿಲುವುಗಳತ್ತ ನಗರಸಭೆ ಅಧಿಕಾರಿಗಳು ಮುಖ ಮಾಡುತ್ತಾರೆ. ಪರಿಣಾಮ ರಸ್ತೆಗಳ ಮೇಲೆ ಗುಂಡಿಗಳು ಗೋಚರಿಸುತ್ತವೆ. ಉದ್ದನೆಯ ಗುಂಡಿಗಳು ಬೀಳುತ್ತವೆ. ಮೊದಲೇ ಕಳಪೆ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಇವುಗಳ ಮೇಲೆ ಗುಂಡಿಗಳು ಬಿದ್ದರೆ ಏನಾಗಬೇಡ ?

ಗ್ಯಾಸ್‌ ಪೈಪ್‌ಲೈನ್‌:

ಚಿತ್ರದುರ್ಗ ನಗರದಲ್ಲಿ ಗೇಲ್‌ ಇಂಡಿಯಾ ಕಂಪನಿಯವರು ಮನೆ ಮನೆಗೆ ಗ್ಯಾಸ್‌ ಸಂಪರ್ಕ ಕಲ್ಪಿಸಲು ಮುಂದಾಗಿದ್ದು, ಪ್ರಮುಖ ಬಡಾವಣೆಗಳಲ್ಲಿ ಮುಖ್ಯ ಪೈಪ್‌ಲೈನ್‌ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕಳೆದ ಮೂರು ವರ್ಷದಿಂದಲೇ ಗ್ಯಾಸ್‌ ಸೌಲಭ್ಯದ ಪ್ರಸ್ತಾಪವಾಗುತ್ತಿದೆ. ಧವಳಗಿರಿ ಬಡಾವಣೆಯ ಕೆಲ ಮನೆಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸಿ ಅಡುಗೆ ಅನಿಲ ಪೂರೈಕೆ ಮಾಡಲಾಗುತ್ತಿದೆ. ಉಳಿದ ಬಡಾವಣೆಗಳಿಗೂ ಕೊಳವೆ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಗ್ಯಾಸ್‌ ಪೈಪ್‌ಲೈನ್‌ಗಾಗಿ ರಸ್ತೆ ಅಂಚಿನಲ್ಲಿ ಅಲ್ಲಲ್ಲಿ ಜಾಗ ಬಿಡಬಹುದಿತ್ತು. ಆದರೆ ರಸ್ತೆ ಯಾರವೋ, ಸಿಸಿ ರಸ್ತೆ ಮಾಡುವ ಗುತ್ತಿಗೆದಾರ ಯಾರೋ, ಪೈಪ್‌ಲೈನ್‌ ಅಳವಡಿಸುವವ ಮತ್ಯಾರೋ ಎನ್ನುವಂತಾಗಿದ್ದು ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಗುಂಡಿಗಳು ಬಿದ್ದ ನಂತರವೇ ಎಲ್ಲರ ಅರಿವಿಗೆ ಬರುತ್ತದೆ.

 

Chitradurga: ಅಕಾಲಿಕ ಮಳೆಗೆ ಸುಮಾರು 71153 ಹೆಕ್ಟೇರ್ ಬೆಳೆ ನಾಶ: ಕಂಗಾಲಾದ ಅನ್ನದಾತ

ಹಣ ಕಟ್ಟುತ್ತಾರೆ:

ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಗರಿಕರಾಗಲಿ ಅಥವ ಯಾವುದೇ ಕಂಪನಿಗಳಾಗಲಿ ರಸ್ತೆ ಅಗೆದರೆ ಅದನ್ನು ಮರಳಿ ಅದೇ ಸ್ವರೂಪಕ್ಕೆ ತರಲು ಬೇಕಾಗುವ ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಚಿತ್ರದುರ್ಗ ನಗರದಲ್ಲಿ ಗೇಲ್‌ ಇಂಡಿಯಾದವರು ಸರಿ ಸುಮಾರು 18 ಕಿಮೀ ನಷ್ಟುರಸ್ತೆ ಅಗೆಯಲಿದ್ದು ಇದಕ್ಕಾಗಿ 1.10 ರುಪಾಯಿಯಷ್ಟುಮೊತ್ತ ಪಾವತಿಸಿದ್ದಾರೆ. ಹಣ ಕಟ್ಟಿಸಿಕೊಂಡ ನಗರಸಭೆ ರಸ್ತೆಗಳಲ್ಲಿರುವ ಗುಂಡಿ ಮುಚ್ಚಿ ಮೊದಲು ಹೇಗಿತ್ತೋ ಹಾಗೆ ಮಾಡಬೇಕಾಗಿದೆ. ಆದರೆ ಇಂತಹ ಪ್ರಯತ್ನಗಳು ನಗರಸಭೆ ಕಡೆಯಿಂದ ನಡೆದೇ ಇಲ್ಲ. ದುಡ್ಡಿ ಇಸ್ಕಂಡು ಸುಮ್ಮನೆ ಕೂರಲಾಗಿದೆ. ಹಾಗಾಗಿ ಗುಂಡಿಗಳು ಹಾಗೆಯೇ ಉಳಿದಿದ್ದು ಕತ್ತಲಲ್ಲಿ ವಾಹನ ಸವಾರರ ಏಮಾರಿಸುತ್ತವೆ.

click me!