ಮೋದಿ ಆಡಳಿತದಲ್ಲಿ ಮನೆಮನೆಗೂ ಸವಲತ್ತು: ಕೇಂದ್ರ ಸಚಿವ ನಾರಾಯಣಸ್ವಾಮಿ

By Kannadaprabha NewsFirst Published Feb 6, 2023, 9:40 PM IST
Highlights

ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಸರ್ಕಾರದ ಸವಲತ್ತುಗಳು ಪ್ರತಿ ಮನೆ ಮನೆಗೂ ತಲುಪಿವೆ. ಬಿಜೆಪಿ ಸರ್ಕಾರ ಕೆಳ ಹಂತದಲ್ಲಿ ನಾಗರಿಕರಿಗೆ ಸ್ಪಂದನೆ ಮಾಡುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಶಿರಾ (ಫೆ.06): ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಸರ್ಕಾರದ ಸವಲತ್ತುಗಳು ಪ್ರತಿ ಮನೆ ಮನೆಗೂ ತಲುಪಿವೆ. ಬಿಜೆಪಿ ಸರ್ಕಾರ ಕೆಳ ಹಂತದಲ್ಲಿ ನಾಗರಿಕರಿಗೆ ಸ್ಪಂದನೆ ಮಾಡುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಬರಗೂರು ಗ್ರಾಮದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಏನು ಮಾಡಿದೆ? ಸ್ವಚ್ಚಭಾರತ ನಿರ್ಮಾಣಕ್ಕೆ ದೇಶದ 11 ಕೋಟಿಗೂ ಹೆಚ್ಚು ಮನೆಗಳಿಗೆ ಶೌಚಾಲಯ ನೀಡಿದ್ದು ಮೋದಿಯವರ ಹೆಗ್ಗಳಿಕೆ. ಪ್ರಧಾನಿಗಳು ಅಭಿವೃದ್ಧಿಯ ಸಂಕಲ್ಪ ಮಾಡಿ ಇಂದು ವಿಶ್ವನಾಯಕರಾಗಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಪ್ರಜ್ಞಾವಂತ, ವಿದ್ಯಾವಂತ ಮತದಾರರು ಬದ್ಧತೆ ಇರುವ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದರು.

ಬಿಜೆಪಿಯದು ಮಂಚದ ಸರ್ಕಾರ, ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು: ಸಿ.ಎಂ.ಇಬ್ರಾಹಿಂ

ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾಗಿ ಎರಡುವರೆ ವರ್ಷಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. 75 ವರ್ಷಗಳಿಂದ ರಸ್ತೆಗಳನ್ನೇ ಕಾಣದ ಗೊಲ್ಲರಹಟ್ಟಿಗಳಿಗೆ ರಸ್ತೆ ಚರಂಡಿ ನಿರ್ಮಿಸಿದ್ದೇನೆ. ತಾಲೂಕಿನಲ್ಲಿ ಇದುವರೆಗೂ ಯಾರೂ ನೀಡದಷ್ಟುಸುಮಾರು 1500 ಸಾಗುವಳಿ ಚೀಟಿ ವಿತರಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಾನು ಸದಸ್ಯತ್ವ ಪಡೆದದ್ದು ಮೊಟ್ಟಮೊದಲಿಗೆ ಬಿಜೆಪಿ ಪಕ್ಷದಿಂದ. ಬಿಜೆಪಿ ಪಕ್ಷ ನನ್ನ ಮಾತೃ ಪಕ್ಷ. ಮಾತೃ ಪಕ್ಷದಲ್ಲೇ ಇರುತ್ತೇನೆ. ಬಿಜೆಪಿ ಪಕ್ಷ ಸಿದ್ಧಾಂತ ಮೌಲ್ಯ, ಶಿಸ್ತಿನ ಪಕ್ಷ. ಕೊಟ್ಟಮಾತನ್ನು ಉಳಿಸಿಕೊಳ್ಳುವ ಪಕ್ಷ. ಹಾಗಾಗಿ ನಾನು ಬಿಜೆಪಿ ಪಕ್ಷದಲ್ಲೇ ಇರುತ್ತೇನೆ ಇಲ್ಲಿಯೇ ಟಿಕೆಟ್‌ ನೀಡಿದರೆ ಮತ್ತೊಮ್ಮೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್‌ ಮುಖಂಡ ದಯಾನಂದ ಗೌಡ, ಅಜ್ಜೇಗೌಡ ಸೇರಿದಂತೆ ನೂರಾರು ಮಂದಿ ಇತರೆ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಹಲಗುಂಡೇಗೌಡ, ಜಿ.ಪಂ.ಮಾಜಿ ಸದಸ್ಯ ಪ್ರಕಾಶ್‌ ಗೌಡ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್‌.ಮಾರುತೀಶ್‌, ಮದಲೂರು ಮೂರ್ತಿ ಮಾಸ್ಟರ್‌, ನಗರಸಭೆ ಉಪಾಧ್ಯಕ್ಷ ಅಂಬುಜ ನಟರಾಜ್‌, ಸದಸ್ಯ ರಂಗರಾಜು, ಬರಗೂರು ಯುವರಾಜ್‌, ನರಸಿಂಹೇಗೌಡ, ನಾಗರತ್ನ, ಲತಾ ಕೃಷ್ಣ, ಗಿರಿಧರ್‌ ಸೇರಿದಂತೆ ಹಲವರು ಹಾಜರಿದ್ದರು.

ನನ್ನ ಅವಧಿಯಲ್ಲಿ ದಾಖಲೆಯ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ: ಜಿ.ಟಿ.ದೇವೇಗೌಡ

ಕೇಂದ್ರದ ಬಜೆಟ್‌ನಲ್ಲಿ ದೇಶದ ಯಾವುದೇ ರಾಜ್ಯಗಳಿಗೆ ನೀಡದಷ್ಟುಅನುದಾನವನ್ನು ಕರ್ನಾಟಕಕ್ಕೆ ನೀಡಿ, ಬಯಲಸೀಮೆಯ ಪ್ರದೇಶಗಳಿಗೆ ನೀರೊದಗಿಸುವ ಅಪ್ಪರ್‌ ಭದ್ರ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರು.ಗಳನ್ನು ಮಂಜೂರು ಮಾಡಿದೆ. ತಾಲೂಕಿನ ಜನರ ಬಹುದಿನಗಳ ಕನಸಾದ ತುಮಕೂರು-ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 1300 ಕೋಟಿ ರು.ಗಳನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ.
-ಎ.ನಾರಾಯಣಸ್ವಾಮಿ ಕೇಂದ್ರ ಸಚಿವ

click me!