250ನೇ ಪರ್ಯಾಯೋತ್ಸವ ಆರಂಭ, ಉಡುಪಿ ನಗರಾದ್ಯಂತ ದೀಪಾಲಂಕಾರ

By Kannadaprabha NewsFirst Published Jan 17, 2020, 10:25 AM IST
Highlights

ಅಷ್ಟಮಠಗಳೊಳಗೆ ಎರಡು ವರ್ಷಗಳಿಗೊಮ್ಮೆ ಸರದಿಯಂತೆ ನಡೆಯುವ ಶ್ರೀಕೃಷ್ಣನ ಪೂಜಾಧಿಕಾರ ಹಸ್ತಾಂತರ ಸಂಪ್ರದಾಯ ಈ ಪರ್ಯಾಯೋತ್ಸವವಾಗಿದ್ದು, ಇದರ ಆಚರಣೆಗೆ ಇಡೀ ಉಡುಪಿ ಸಜ್ಜಾಗಿ ನಿಂತಿದೆ. ಮಧ್ವಾಚಾರ್ಯರ ತಪೋಭೂಮಿ, ದೇಶದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಉಡುಪಿ ಶ್ರೀಕೃಷ್ಣಮಠದ 250ನೇ ಪರ್ಯಾಯೋತ್ಸವ ಜು.17, 18ರಂದು ನಡೆಯಲಿದೆ.

ಉಡುಪಿ(ಜ.17): ಮಧ್ವಾಚಾರ್ಯರ ತಪೋಭೂಮಿ, ದೇಶದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಉಡುಪಿ ಶ್ರೀಕೃಷ್ಣಮಠದ 250ನೇ ಪರ್ಯಾಯೋತ್ಸವ ಜು.17, 18ರಂದು ನಡೆಯಲಿದೆ. ಅಷ್ಟಮಠಗಳೊಳಗೆ ಎರಡು ವರ್ಷಗಳಿಗೊಮ್ಮೆ ಸರದಿಯಂತೆ ನಡೆಯುವ ಶ್ರೀಕೃಷ್ಣನ ಪೂಜಾಧಿಕಾರ ಹಸ್ತಾಂತರ ಸಂಪ್ರದಾಯ ಈ ಪರ್ಯಾಯೋತ್ಸವವಾಗಿದ್ದು, ಇದರ ಆಚರಣೆಗೆ ಇಡೀ ಉಡುಪಿ ಸಜ್ಜಾಗಿ ನಿಂತಿದೆ.

ಕಳೆದೆರಡು ವರ್ಷಗಳಿಂದ ಪಲಿಮಾರು ಮಠವು ಶ್ರೀಕೃಷ್ಣನ ಪೂಜಾ ಕೈಂಕರ್ಯದ ಉಸ್ತುವಾರಿ ವಹಿಸಿದ್ದು, ಮುಂದಿನ 2 ವರ್ಷಗಳ ಕಾಲ ಅದಮಾರು ಮಠವು ಪೊಡವಿಯೊಡೆಯನ ಪೂಜಾಧಿಕಾರ ಪಡೆಯಲಿದೆ.

ಪೇಜಾವರ ಮಠದ ಮುಂದೆ ಮುಸ್ಲಿಮರ ಗುಂಪು: ಶ್ರೀಗಳ ಸ್ಮರಣೆಯ ಕಂಪು!

ಪರ್ಯಾಯೋತ್ಸವದ ಭಾಗವಾಗಿ ಶುಕ್ರವಾರದಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಶನಿವಾರ ಮುಂಜಾನೆ 5.57ಗಂಟೆಗೆ ಕೃಷ್ಣನ ಪೂಜೆಯ ಸರದಿ ವಿಧ್ಯುಕ್ತವಾಗಿ ಬದಲಾಗಲಿದೆ. ಈ ಶುಭ ಮುಹೂರ್ತದಲ್ಲಿ, ಕಳೆದೆರಡು ವರ್ಷಗಳಿಂದ ಕೃಷ್ಣನ ಪೂಜಾ ಕೈಂಕರ್ಯವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಅಕ್ಷಯಪಾತ್ರೆ ಮತ್ತು ಕೃಷ್ಣನ ಪೂಜೆಯ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯ ತೀರ್ಥರ ಮಾರ್ಗದರ್ಶನದಲ್ಲಿ ಪರ್ಯಾಯ ಸರದಿಯ ಪರಂಪರೆಯನ್ನು ಮುನ್ನಡೆಸಲಿದ್ದಾರೆ.

ರೈಲು ನಿಲ್ದಾಣಕ್ಕೆ ಪೇಜಾವರಶ್ರೀ ಹೆಸರು: ಕೇಂದ್ರ ಸಚಿವರಿಗೆ ಕೋಟ ಶಿಫಾರಸು

ಹೀಗಿರುತ್ತದೆ ಪರ್ಯಾಯೋತ್ಸವ: ಶನಿವಾರ ಮುಂಜಾನೆ 1.20 ಗಂಟೆಗೆ ಅದಮಾರು ಈಶಪ್ರಿಯ ಶ್ರೀಗಳು ಉಡುಪಿಯಿಂದ 15 ಕಿ.ಮೀ. ದೂರದಲ್ಲಿರುವ ದಂಡತೀರ್ಥಕ್ಕೆ ತೆರಳಿ ಪೂಜೆಸ್ನಾನಾದಿಗಳನ್ನು ಮುಗಿಸಿ ಉಡುಪಿಯ ಜೋಡುಕಟ್ಟೆಎಂಬಲ್ಲಿಗೆ ಬರಲಿದ್ದಾರೆ. ಅಲ್ಲಿ ಅವರನ್ನು ಇತರ ಅಷ್ಟಮಠಾಧೀಶರು ಬರಮಾಡಿಕೊಳ್ಳಲಿದ್ದಾರೆ. ಅಲ್ಲಿ ಅದಮಾರು ಮಠದ ಪಟ್ಟದ ದೇವರಿಗೆ ಪೂಜೆ ನಡೆಯುತ್ತದೆ. ಅಲ್ಲಿಂದ 1.50ಕ್ಕೆ ಲಕ್ಷಾಂತರ ಮಂದಿ ಭಕ್ತರ, ವೈವಿಧ್ಯಮಯ ಜನಪದ- ಸಾಂಸ್ಕೃತಿಕ ತಂಡಗಳ ಪ್ರದರ್ಶನ, ಮಂಗಳವಾದ್ಯ ಘೋಷ, ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಅವುಗಳ ನಡುವೆ ಭಾವಿ ಪರ್ಯಾಯ ಪೀಠಾಧೀಶರು ಮುಂಭಾಗದಲ್ಲಿ ಮತ್ತು ಇತರ ಅಷ್ಠ ಮಠಾಧೀಶರು ಜೇಷ್ಠತೆಯ ಆಧಾರದಲ್ಲಿ ಮೇನೆ (ಪಲ್ಲಕ್ಕಿ)ಯಲ್ಲಿ ಕುಳಿತು 5.30ಕ್ಕೆ ಕೃಷ್ಣಮಠಕ್ಕೆ ಬರಲಿದ್ದಾರೆ. ಅಲ್ಲಿ ಮಧ್ವಚಾರ್ಯರ ಸಾನ್ನಿಧ್ಯವಿರುವ ಸರ್ವಜ್ಞ ಪೀಠದಲ್ಲಿ, 5.57ಕ್ಕೆ ಅಕ್ಷಯಪಾತ್ರೆ ಹಸ್ತಾಂತರವಾಗಲಿದೆ. ನಂತರ ಅದಮಾರು ಶ್ರೀಗಳು ಕೃಷ್ಣನ ಪೂಜೆಯನ್ನು ಆರಂಭಿಸಲಿದ್ದು, 10 ಗಂಟೆಗೆ ಕೃಷ್ಣನ ಮಹಾಪೂಜೆ ನಡೆಯಲಿದೆ.

ಮಧ್ಯಾಹ್ನ ಧಾರ್ಮಿಕ ದರ್ಬಾರ್‌: ಉಡುಪಿ ಪರ್ಯಾಯದಲ್ಲಿ ಮುಂಜಾನೆಯೇ ದರ್ಬಾರ್‌ ನಡೆಸುವುದು ಸಂಪ್ರದಾಯವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಮುಂಜಾನೆಗೆ ಬದಲು ಮಧ್ಯಾಹ್ನ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಮೈಸೂರು ಮಹಾರಾಜರು, ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ರಾಜಾಂಗಣದಲ್ಲಿ ಪರ್ಯಾಯ ಶ್ರೀಗಳು, ಅಷ್ಟಮಠಾಧೀಶರೊಂದಿಗೆ ಸಾರ್ವಜನಿಕ ಧಾರ್ಮಿಕ ದರ್ಬಾರ್‌ ಸಭೆ ನಡೆಯಲಿದೆ. ಇಲ್ಲಿ ಆಸ್ಥಾನ ವಿದ್ವಾಂಸರ, ಅಧಿಕಾರಿಗಳ ಘೋಷಣೆ, ಮುಂದಿನ ಯೋಜನೆಗಳ ಪ್ರಕಟಣೆ, ಶುಭಾಶಂಸನೆ ಇತ್ಯಾದಿಗಳು ನಡೆಯಲಿವೆ.

ಪರ್ಯಾಯ ಮಹೋತ್ಸವ ಟೈಂಲೈನ್‌

  • ಜ.18 ಮುಂಜಾನೆ 1.20-ಕಾಪು ದಂಡತೀರ್ಥದಲ್ಲಿ ಶ್ರೀಗಳಿಂದ ಪವಿತ್ರಸ್ನಾನ
  • 1.50ಕ್ಕೆ-ಶ್ರೀಗಳು ಉಡುಪಿಯ ಜೋಡುಕಟ್ಟೆಗೆ ಆಗಮನ, ಪಟ್ಟದ ದೇವರಿಗೆ ಪೂಜೆ, ಮೆರವಣಿಗೆ ಆರಂಭ
  • 4.50ಕ್ಕೆ-ರಥಬೀದಿಗೆ ಆಗಮನ, ಕನಕನಕಿಂಡಿಯಲ್ಲಿ ಕೃಷ್ಣ ದರ್ಶನ, ಚಂದ್ರಮೌಳಿಶ್ವರ, ಅನಂತೇಶ್ವರ ದರ್ಶನ
  • 5.30ಕ್ಕೆ-ಶ್ರೀಗಳಿಂದ ಕೃಷ್ಣ ಮಠಕ್ಕೆ ಪ್ರವೇಶ
  • 5.57ಕ್ಕೆ-ಅಕ್ಷಯಪಾತ್ರೆ ಸ್ವೀಕಾರ, ಪವಿತ್ರ ಸರ್ವಜ್ಞ ಪೀಠಾರೋಹಣ
  • 10.00ಕ್ಕೆ-ಶ್ರೀಕೃಷ್ಣನಿಗೆ ಪರ್ಯಾಯ ಶ್ರೀಗಳಿಂದ ಮಹಾಪೂಜೆ
  • 10.30ಕ್ಕೆ-ಮಹಾ ಅನ್ನ ಸಂತರ್ಪಣೆ ಆರಂಭ
  • 2.30ಕ್ಕೆ-ರಾಜಾಂಗಣದಲ್ಲಿ ದರ್ಬಾರ್‌ ಸಭೆ ಆರಂಭ
  • 7.30ಕ್ಕೆ-ರಥಬೀದಿಯಲ್ಲಿ ಮಹಾರಥೋತ್ಸವ
click me!