ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಂಕಿತ ರೋಗಿಗೆ ಕೊರೋನಾ ಇಲ್ಲ

Kannadaprabha News   | Asianet News
Published : Mar 08, 2020, 08:49 AM IST
ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಂಕಿತ ರೋಗಿಗೆ ಕೊರೋನಾ ಇಲ್ಲ

ಸಾರಾಂಶ

ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ತಾಲೂಕಿನ ಮುನಿಯಾಲು ಗ್ರಾಮದ ಶಂಕಿತ ರೋಗಿಗೆ ಕೊರೋನಾ ವೈರಸ್‌ ತಗುಲಿಲ್ಲ ಎಂದು ಪ್ರಯೋಗಾಲಯದ ವರದಿ ದೃಢಪಡಿಸಿದೆ.  

ಉಡುಪಿ(ಮಾ.08): ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ತಾಲೂಕಿನ ಮುನಿಯಾಲು ಗ್ರಾಮದ ಶಂಕಿತ ರೋಗಿಗೆ ಕೊರೋನಾ ವೈರಸ್‌ ತಗುಲಿಲ್ಲ ಎಂದು ಪ್ರಯೋಗಾಲಯದ ವರದಿ ದೃಢಪಡಿಸಿದೆ.

ಪತ್ನಿಯೊಂದಿಗೆ ಇಸ್ರೆಲ್‌ ದೇಶಕ್ಕೆ ಹೋಗಿದ್ದ 75 ವರ್ಷ ವಯಸ್ಸಿನ ಈ ವ್ಯಕ್ತಿಗೆ, ಬುಧವಾರ ಊರಿಗೆ ಬರುತ್ತಿದ್ದಂತೆ ಕೆಮ್ಮು ಮತ್ತು ಶೀತದ ತೊಂದರೆ ಕಾಣಿಸಿಕೊಂಡಿತ್ತು. ಅವರು ಸ್ಥಳೀಯ ಕ್ಲಿನಿಕ್‌ಗೆ ಔಷಧಿಗೆ ಹೋಗಿದ್ದ ಅವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿತು. ತಕ್ಷಣ ಅವರನ್ನು ಅಂದು ರಾತ್ರಿಯೇ ಮನವೊಲಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆ ತಂದು, ಕೊರೋನಾ ಚಿಕಿತ್ಸೆಗಾಗಿಯೇ ಪ್ರತ್ಯೇಕವಾಗಿ ತೆರೆಯಲಾಗಿರುವ ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು.

ಉಡುಪಿಯಲ್ಲಿ ಶಂಕಿತ ಕೊರೋನಾ ಪ್ರಕರಣ ಪತ್ತೆ

ನಂತರ ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಸರ್ಕಾರಿ ಪ್ರಯೋಗಾಲಯಕ್ಕೆ ಕಳಹಿಸಲಾಗಿತ್ತು. ಕೊರೋನಾಕ್ಕೆ ಔಷಧಿ ಇಲ್ಲದಿರುವುದರಿಂದ ಅಲ್ಲಿ ಅವರ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಲಾಗಿತ್ತು. ಅವರೊಂದಿಗೆ ವಿದೇಶಕ್ಕೆ ಹೋಗಿದ್ದ ಅವರ ಪತ್ನಿಗೆ ಯಾವುದೇ ತೊಂದರೆ ಇಲ್ಲದಿರುವುದರಿಂದ ಮೇಲ್ನೋಟಕ್ಕೆ ಈ ವ್ಯಕ್ತಿಗೆ ಕೊರೋನಾ ಸೋಂಕು ಆಗಿರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು.

ಕೊರೋನಾ ವೈರಸ್‌ಗೆ ಬೆಚ್ಚಿಬಿದ್ದ ಬೆಳಗಾವಿ: ಆತಂಕದಲ್ಲಿ ಜನತೆ!

ಅದರಂತೆ 48 ಗಂಟೆಗಳಲ್ಲಿ ಪ್ರಯೋಗಾಲಯದಿಂದ ವರದಿ ಬಂದಿದ್ದು, ಅದರಲ್ಲಿ ಅವರಿಗೆ ಕೊರೋನಾ ಸೋಂಕು ತಗುಲಿಲ್ಲ. ಅವರಿಗೆ ಸಾಮಾನ್ಯ ಕೆಮ್ಮು ಮತ್ತು ಶೀತವಾಗಿದೆ ಎಂಬ ವರದಿ ಬಂದಿದೆ. ಇದರಿಂದ ಆಸ್ಪತ್ರೆಯ ವೈದ್ಯರು, ಜಿಲ್ಲಾಡಳಿತ ಮತ್ತು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಅವರಿಗೆ ಕೆಮ್ಮು ಮತ್ತು ಶೀತಕ್ಕೆ ಔಷಧಿ ನೀಡಿ, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ, ಚೀನಾ ಪ್ರವಾಸಕ್ಕೆ ಹೋಗಿ ಬಂದಿದ್ದ 3 ಮಂದಿ ಶೀತದಿಂದ ನರಳುತ್ತಿದ್ದವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರ ಗಂಟಲಿನ ದ್ರವದ ವರದಿಯೂ ನೆಗೆಟಿವ್‌ ಬಂದಿದ್ದು ಅವರನ್ನು ಎರಡೇ ದಿನಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!