ಮುದ್ದೇಬಿಹಾಳದಲ್ಲಿ ಭೀಕರ ಅಪಘಾತ: ಅತ್ತೆ, ಅಳಿಯ ಸಾವು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕ..!

By Girish GoudarFirst Published May 25, 2023, 11:30 PM IST
Highlights

ಮೃತ ಇಬ್ಬರ ದೇಹಗಳ ಒಳಗಿನ ಮಾಂಸ, ಖಂಡಗಳು ಸಿಡಿದು ಚೂರಾಗಿ ರಸ್ತೆಯಲ್ಲಿ ಚಲ್ಲಾಪಿಲ್ಲಿ ಆಗಿರುವುದು ಅಪಘಾತದ ಭೀಕರತೆ ಎತ್ತಿ ತೋರಿಸುವಂತಿತ್ತು. 

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಮೇ.25): ಲಾರಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಚಕ್ರದಡಿ ಸಿಲುಕಿದ ಒಂದು ಬೈಕ್‌ನಲ್ಲಿದ್ದ  ಅತ್ತೆ, ಅಳಿಯ ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ‌. ಇನ್ನೊಂದು ಬೈಕಿನ ಸವಾರನಿಗೆ ಗಂಭೀರ ಗಾಯಗಳಾಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದ ತಂಗಡಗಿ ರಾಜ್ಯ ಹೆದ್ದಾರಿಯಲ್ಲಿ ಇಂದು(ಗುರುವಾರ) ರಾತ್ರಿ 9-30 ಗಂಟೆ ಸುಮಾರಿಗೆ ನಡೆದಿದೆ.

ಛಿದ್ರ ಛಿದ್ರವಾದ ಮೃತದೇಹಗಳು..!

ಮೃತ ಇಬ್ಬರ ದೇಹಗಳ ಒಳಗಿನ ಮಾಂಸ, ಖಂಡಗಳು ಸಿಡಿದು ಚೂರಾಗಿ ರಸ್ತೆಯಲ್ಲಿ ಚಲ್ಲಾಪಿಲ್ಲಿ ಆಗಿರುವುದು ಅಪಘಾತದ ಭೀಕರತೆ ಎತ್ತಿ ತೋರಿಸುವಂತಿತ್ತು. 

Caught On Cam: ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಹರಿದ ಕಾರು!

ಮುದ್ನಾಳ ಗ್ರಾಮದ ನಿವಾಸಿಗಳು.!

ಮೃತರನ್ನು ಹೆದ್ದಾರಿ ಪಕ್ಕದಲ್ಲೇ ಇರುವ ಮುದ್ನಾಳ ಗ್ರಾಮದ ಶರಣಮ್ಮ ಕಂಬಳಿ (55) ಮತ್ತು ಅಳಿಯ ನಾಗೇಶ ಶಿವಪೂರ (35) ಎಂದು ಗುರ್ತಿಸಲಾಗಿದೆ. ಗಾಯಗೊಂಡಿರುವ ಕೃತಿಕಾ (10) ಮತ್ತು ಭೂಮಿಕಾ (8) ಇವರು ಮೃತ ನಾಗೇಶನ ಮಕ್ಕಳು ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಬೈಕನ ಸವಾರ ಮುದ್ದೇಬಿಹಾಳದ ಮುತ್ತೂಟ್ ಫೈನಾನ್ಸನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಧೀರ ಬೇನಾಳ ಎಂದು ತಿಳಿದುಬಂದಿದ್ದು ಇವರೆಲ್ಲರಿಗೂ ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಲು ಕ್ರಮ ಕೈಕೊಳ್ಳಲಾಗಿದೆ.

ಕಾರು ಅಪಘಾತದಲ್ಲಿ ಕಿರುತೆರೆ ನಟಿ ವೈಭವಿ ಸಾವು

ತರಕಾರಿ ಮಾರಿ ಮನೆಗೆ ಹೊರಟವರು ಮಸನ ಸೇರಿದರು..!

ಅತ್ತೆ ಮತ್ತು ಅಳಿಯ ಇಬ್ಬರೂ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಎದುರು ಇರುವ ಮಿನಿ ಕಾಯಿಪಲ್ಯೆ ಮಾರ್ಕೆಟನಲ್ಲಿ ತರಕಾರಿ ಮಾರುವವರು. ರಾತ್ರಿ ದಿನದ ವ್ಯಾಪಾರ ಮುಗಿಸಿಕೊಂಡು ಮಕ್ಕಳ ಸಮೇತ ಊರಿಗೆ ಬೈಕನಲ್ಲಿ ಹೋಗುವಾಗ ಈ ದುರಂತ ಸಂಭವಿಸಿದೆ. ಕೇವಲ ಒಂದು ಕಿಮೀ ಅಂತರ ಕ್ರಮಿಸಿದ್ದರೆ ಇವರು ಸುರಕ್ಷಿತವಾಗಿ ಮನೆ ಸೇರುತ್ತಿದ್ದರು. ಆದರೆ ಜವರಾಯ ಲಾರಿಯ ರೂಪದಲ್ಲಿ ಇವರ ಮೇಲೆರಗಿ ಪ್ರಾಣವನ್ನೇ ಕಸಿದದ್ದೂ ಅಲ್ಲದೆ ಮಕ್ಕಳನ್ನೂ ತಂದೆ ಇಲ್ಲದ ತಬ್ಬಲಿಯನ್ನಾಗಿ ಮಾಡಿದ ಎಂದು ಸೇರಿದ್ದ ಜನಸ್ತೋಮ ಮಾತನಾಡಿಕೊಳ್ಳುತ್ತಿತ್ತು.

ಚಾಲಕನ ಸಮೇತ ಲಾರಿ ವಶಕ್ಕೆ ಪಡೆದ ಪೊಲೀಸರು..!

ಘಟನೆಯ ಮಾಹಿತಿ ಪಡೆದ ಪೊಲೀಸರು ನೇಬಗೇರಿ ಗ್ರಾಮದ ಬಳಿ ಲಾರಿಯನ್ನು ಚಾಲಕನ ಸಮೇತ ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಂಬ್ಯುಲೆನ್ಸಗೆ ಮೃತ ದೇಹಗಳ ಛಿದ್ರವಾದ ಭಾಗಗಳನ್ನು ಸಲಿಕೆಯಿಂದ ಚೀಲದಲ್ಲಿ ತುಂಬಿ ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟುವಂತಿತ್ತು. 

click me!