
ಸಂಡೂರು : ಬಳ್ಳಾರಿ-ವಿಜಯನಗರ ವಲಯದ ಸಾಂಸ್ಕೃತಿಕ ಇತಿಹಾಸ ಅಧ್ಯಯನದಲ್ಲಿ ತೊಡಗಿರುವ 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ಇಮ್ಮಡಿ ಹರಿಹರನ ಕಾಲಕ್ಕೆ ಸೇರಿದ 2 ಅತ್ಯಂತ ಅಪರೂಪದ ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಮಾಡಿದೆ. ಗ್ರಾಮದ ರೈತರಾದ ಹರಿಜನ ಹುಲಿಗೆಮ್ಮ ಮತ್ತು ಹಟ್ಟಿ ರಮೇಶ ಎಂಬುವವರ ಕೃಷಿ ಜಮೀನಿನಲ್ಲಿ ಈ ಐತಿಹಾಸಿಕ ಸಾಕ್ಷ್ಯಗಳು ದೊರೆತಿವೆ.
ಕೆಲ ದಿನಗಳ ಹಿಂದೆಯಷ್ಟೇ ಸಂಶೋಧನಾ ತಂಡವು ಇದೇ ಗ್ರಾಮದಲ್ಲಿ ಜೈನ ಧರ್ಮದ 17ನೇ ತೀರ್ಥಂಕರರಾದ ಶ್ರೀ ಕುಂಥುನಾಥರ ಹೆಸರನ್ನು ಉಲ್ಲೇಖಿಸುವ ಪ್ರಮುಖ ದಾನ ಶಾಸನವೊಂದನ್ನು ಶೋಧಿಸಿತ್ತು. ಅದರ ಮುಂದುವರಿದ ಅಧ್ಯಯನದ ಭಾಗವಾಗಿ ಈಗ ಮತ್ತೂ ಎರಡು ಜಿನ ಶಾಸನಗಳು ಪತ್ತೆಯಾಗಿರುವುದು, ಸಂಡೂರು ಪ್ರದೇಶವು ಪ್ರಾಚೀನ ಕಾಲದಲ್ಲಿ ಜೈನ ಧರ್ಮದ ಪ್ರಮುಖ ಶ್ರದ್ಧಾಕೇಂದ್ರವಾಗಿತ್ತು ಎಂಬುದಕ್ಕೆ ಬಲವಾದ ಪುಷ್ಟಿ ನೀಡಿದೆ.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಅವರು ಶಾಸನಗಳ ರಚನಾ ಶೈಲಿಯ ಬಗ್ಗೆ ಮಾಹಿತಿ ನೀಡಿ, "ಐದು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿರುವ ಈ ಶಾಸನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಪೂರ್ಣವಾಗಿ ಕನ್ನಡ ಭಾಷೆ ಮತ್ತು ಲಿಪಿಯಲ್ಲೇ ಇರುವ ಈ ಶಿಲಾಶಾಸನಗಳ ಮೇಲ್ಭಾಗದ ಬಲಬದಿಯಲ್ಲಿ ಸೂರ್ಯ, ಎಡಬದಿಯಲ್ಲಿ ಚಂದ್ರನ ಚಿತ್ರಗಳಿವೆ. ಪ್ರಭಾವಳಿಯ ಕೆಳಗೆ, ಮುಕ್ಕೊಡೆಯ ಅಡಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಜಿನ ಮೂರ್ತಿಯ ಸುಂದರ ಕೆತ್ತನೆ ಇವುಗಳಲ್ಲಿದೆ," ಎಂದು ವಿವರಿಸಿದರು.
ಹೊಸದಾಗಿ ಪತ್ತೆಯಾದ ಶಾಸನಗಳಲ್ಲಿ ಒಂದರಲ್ಲಿ 7 ಸಾಲು ಹಾಗೂ ಮತ್ತೊಂದರಲ್ಲಿ 8 ಸಾಲುಗಳ ಬರಹವಿದೆ. ವಿಜಯನಗರದ ದೊರೆ ಇಮ್ಮಡಿ ಹರಿಹರರಾಯರು ಶ್ರೀ ಕುಂಥು ತೀರ್ಥಂಕರರಿಗೆ ದೊಡ್ಡ ಅಂತಾಪುರದ ಗದ್ದೆಯ ಕೆಳಭಾಗದಲ್ಲಿ ಹನ್ನೆರಡು ಕೊಳಗದಷ್ಟು ಬೆಳೆಯಬಹುದಾದ 'ಜಿಜವರಿ' ಭೂಮಿಯನ್ನು ದಾನವಾಗಿ ನೀಡಿರುವುದನ್ನು ಈ ಎರಡೂ ಶಾಸನಗಳು ಸ್ಪಷ್ಟಪಡಿಸುತ್ತವೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಮಾತನಾಡಿ, "ಈ ಶಾಸನಗಳು ಕೇವಲ ಭೂದಾನದ ದಾಖಲೆಗಳಲ್ಲ. ವಿಜಯನಗರ ಕಾಲದಲ್ಲಿ ಧಾರ್ಮಿಕ ಸಂಸ್ಥೆಗಳು ಆರ್ಥಿಕವಾಗಿ ಹೇಗೆ ನಿರ್ವಹಿಸಲ್ಪಡುತ್ತಿದ್ದವು ಮತ್ತು ರಾಜಮನೆತನವು ಧಾರ್ಮಿಕ ಕೇಂದ್ರಗಳೊಂದಿಗೆ ಹೊಂದಿದ್ದ ಸಾಮರಸ್ಯ ಹಾಗೂ ಬಾಂಧವ್ಯ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಇವು ಅತ್ಯಂತ ಮಹತ್ವದ ಆಧಾರಗಳಾಗಿವೆ," ಎಂದರು.
ನೂರಾರು ವರ್ಷಗಳ ಇತಿಹಾಸವಿರುವ ಈ ಅಪರೂಪದ ಅಪ್ರಕಟಿತ ಜಿನ ಶಾಸನಗಳನ್ನು ತಕ್ಷಣವೇ ಸಂರಕ್ಷಿಸುವ ಅಗತ್ಯವಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ. ಸೂಕ್ತ ರಕ್ಷಣೆ ನೀಡುವುದರಿಂದ ಭವಿಷ್ಯದ ಸಂಶೋಧಕರಿಗೆ ಹಾಗೂ ಸ್ಥಳೀಯ ಇತಿಹಾಸ ಪ್ರೇಮಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗಲಿದೆ. ಸ್ಥಳೀಯ ನಿವಾಸಿಗಳಾದ ತಾಯಪ್ಪ, ರಾಗಿ ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಅವರ ಸಹಕಾರದೊಂದಿಗೆ ಈ ಕ್ಷೇತ್ರಕಾರ್ಯ ಕೈಗೊಳ್ಳಲಾಗಿತ್ತು. ಈ ಸಂಶೋಧನಾ ತಂಡದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್. ರವಿ, ಮಾರುತಿ, ಇಸ್ಮಾಯಿಲ್ ಸಿದ್ದಿಕಿ ಹಾಗೂ ಅಶೋಕ್ ನಾಯಕ್ ದಿದ್ದಿಗಿ ಈ ವೇಳೆ ಜೊತೆಗಿದ್ದರು.