ಮಸ್ಕತ್, ಕತಾರ್‌ನಿಂದ ಕನ್ನಡಿಗರ ಕರೆತರಲು ಸಿದ್ಧತೆ, ಸೌದಿ ಅರೇಬಿಯಾ ವಿಮಾನ ನಿಗದಿ..?

By Kannadaprabha NewsFirst Published May 20, 2020, 8:55 AM IST
Highlights

ದುಬೈನಿಂದ ಈಗಾಗಲೇ ಎರಡು ವಿಮಾನಗಳು ಮಂಗಳೂರು ವಿಮಾನ ನಿಲ್ದಾಣ ತಲುಪಿವೆ. ಇಂದು ಮಸ್ಕತ್ ಹಾಗೂ 22ರಂದು ಕತಾರ್‌ನಿಂದ ವಿಮಾನಗಳು ತಲುಪಲಿವೆ. ಇದೀಗ ಸೌದಿ ಅರೆಬಿಯಾದಿಂದ ವಿಮಾನ ಬರುವ ಬಗ್ಗೆ ಮಾತು ಕೇಳಿ ಬಂದಿದೆ.

ಮಂಗಳೂರು(ಮೇ 20): ಸೌದಿ ಅರೇಬಿಯಾದಿಂದ ಮಂಗಳೂರಿಗೆ ಯಾವುದೇ ವಿಮಾನ ಆಗಮನ ಇನ್ನೂ ನಿಗದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಿದರು. ಮೇ 20ರಂದು ಮಸ್ಕತ್‌ ಹಾಗೂ 22ರಂದು ಕತಾರ್‌ನಿಂದ ಮಂಗಳೂರಿಗೆ ವಿಮಾನ ಆಗಮಿಸಲಿದೆ.

ದುಬೈಯಿಂದ ಎರಡು ವಿಮಾನ ಈಗಾಗಲೇ ಆಗಮಿಸಿದೆ. ಸೌದಿ ಅರೇಬಿಯಾದಿಂದ ಮಂಗಳೂರಿಗೆ ವಿಮಾನ ಆಗಮನದ ಬಗ್ಗೆ ಇನ್ನೂ ಯಾವುದೇ ನಿಗದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 5 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ತಲಾ ಇಬ್ಬರು ಪುರುಷರು ಹಾಗೂ ಮಹಿಳೆಯರು ಮತ್ತು ಒಬ್ಬ ಬಾಲಕ ಸೋಂಕಿತರಾಗಿದ್ದು, ಅದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ.

ಐವರು ಸೋಂಕಿತರಲ್ಲಿ 4 ಮಂದಿ ಮೂಲತಃ ಉಡುಪಿ ಜಿಲ್ಲೆಯವರು. ಅವರು ಮುಂಬೈಯಿಂದ ಊರಿಗೆ ಹಿಂತಿರುಗಿದ್ದರು. ಒಬ್ಬ ಯುವತಿ ಮಾತ್ರ ಚಿತ್ರದುರ್ಗ ಜಿಲ್ಲೆಯಿಂದ ಉಡುಪಿಗೆ ಕ್ಯಾನ್ಸರ್‌ ಚಿಕಿತ್ಸೆಗೆ ಬಂದ ರೋಗಿಯಾಗಿದ್ದಾರೆ.

ಮಂಗಳೂರಿನಲ್ಲಿ ದುಬೈ ಪ್ರಯಾಣಿಕರ ತಕರಾರು..!

ಮುಂಬೈಯಿಂದ ಬಂದ 24 ವರ್ಷದ ಯುವಕ (ಪಿ-1286), 24 ವಯಸ್ಸಿನ ಗರ್ಭಿಣಿ ಮಹಿಳೆ (ಪಿ-1287), 8 ವರ್ಷದ ಬಾಲಕ (ಪಿ-1288) 38 ವರ್ಷದ ಪುರುಷ (ಪಿ-1289 ) ಇವರೆಲ್ಲರೂ ಬೈಂದೂರು ತಾಲೂಕಿನ ನಿವಾಸಿಗಳಾಗಿದ್ದು, ಅಲ್ಲಿಯೇ ಕ್ವಾರಂಟೈನ್‌ಗೊಳಪಡಿಸಲಾಗಿತ್ತು. ಈಗ ಅವರು ಬಂದ ಬಸ್‌ನಲ್ಲಿದ್ದ ಮತ್ತು ಕ್ವಾರಂಟೈನ್‌ನಲ್ಲಿ ಜತೆಗಿದ್ದ, ಸಂಪರ್ಕಕ್ಕೆ ಬಂದವರನ್ನು ಗುರುತಿಸಿ, ಪ್ರತ್ಯೇಕಿಸಿ ಅವರ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಮೇ 16ರಂದು ಚಿತ್ರದುರ್ಗದ 17 ವರ್ಷದ ಯುವತಿ (ಪಿ-1290) ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕ್ಯಾನ್ಸರ್‌ ಚಿಕಿತ್ಸೆಗೆ ದಾಖಲಾಗಿದ್ದರು. ನಿಯಮದಂತೆ ಚಿಕಿತ್ಸೆಗೆ ಮೊದಲು ಆಕೆಯ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಗೆ ಸೋಂಕಿರುವುದು ದೃಢಪಟ್ಟಿದೆ. ಈಗ ಆಕೆಯ ಜತೆಗೆ ಬಂದವರು, ಆಕೆಯ ಜತೆ ಆಸ್ಪತ್ರೆಯಲ್ಲಿ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ಕೊರೋನಾ ಕಾಟ: 'ಬಸ್‌ ಟಿಕೆಟ್‌ ಕೊಡಲು ಆನ್‌ಲೈನ್‌ ವ್ಯವಸ್ಥೆಗೆ ಚಿಂತನೆ'

ಈ 5 ಮಂದಿ ಸೋಂಕಿತರನ್ನು ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಮಾಚ್‌ರ್‍ನಲ್ಲೇ ಪತ್ತೆಯಾದ 3 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ, ಒಬ್ಬರು ಮೃತಪಟ್ಟಿದ್ದಾರೆ. 11 ಮಂದಿ ಚಿಕಿತ್ಸೆಯಲ್ಲಿದ್ದಾರೆ.

click me!