ಉತ್ತರ ಕನ್ನಡ| Padma Shri ಗೌರವ ಹೆಚ್ಚಿಸಿದ ತುಳಸಿ ಗೌಡ

By Kannadaprabha NewsFirst Published Nov 16, 2021, 11:57 AM IST
Highlights

*   ತುಳಸಿ, ಸುಕ್ರಿ ಗೌಡ ಕ್ಷೇತ್ರದ ರತ್ನಗಳಿದ್ದಂತೆ
*   ಚಪ್ಲಿ ಹಾಕಿ ನಂಗೆ ರೂಢಿನೇ ಇಲ್ಲ: ತುಳಸಿ ಗೌಡ
*   ಪದ್ಮಶ್ರೀ ತುಳಸಿ ಗೌಡರಿಗೆ ರೂಪಾಲಿ ನಾಯ್ಕ ಸತ್ಕಾರ

ಕಾರವಾರ(ನ.16): ಪದ್ಮಶ್ರೀ(Padma Shri) ಪುರಸ್ಕೃತರಾಗಿ ತವರಿಗೆ ಮರಳಿದ ತುಳಸಿ ಗೌಡ(Tulsi Gowda) ಅವರನ್ನು ಸೋಮವಾರ ಜಿಲ್ಲಾಡಳಿತದಿಂದ ಸತ್ಕರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭಕ್ಕೆ ತುಳಸಿ ಗೌಡ ಅವರನ್ನು ಕೈ ಹಿಡಿದು ಕರೆತಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ, ಶಾಲು ಹೊದಿಸಿ, ಪೇಟ ತೊಡಿಸಿ, ಫಲ-ತಾಂಬೂಲ ನೀಡಿ ಗೌರವಿಸಿದ್ದಾರೆ. 

ಆನಂತರ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ತುಳಸಿ ಗೌಡ ಅವರಿಗೆ ಪದ್ಮಶ್ರೀ ದೊರೆತಿರುವುದು ಜಿಲ್ಲೆಗೆ(Uttara Kannada), ರಾಜ್ಯಕ್ಕೆ(Karnataka) ಹಾಗೂ ದೇಶಕ್ಕೆ(India) ಅಭಿಮಾನದ ಸಂಗತಿ. ತುಳಸಿ ಗೌಡ ಅವರಿಂದಾಗಿ ಪದ್ಮಶ್ರೀ ಪ್ರಶಸ್ತಿಯ ಹಾಗೂ ಪ್ರದಾನ ಮಾಡಿದವರ ಗೌರವ ಹೆಚ್ಚಾಗಿದೆ ಎಂದರು.

Padma Awards; ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

ಅರಣ್ಯದೊಂದಿಗೆ(Forest) ಸುಮಾರು 40 ವರ್ಷಗಳ ಅನುಭವ ಹೊಂದಿರುವ ಅವರ ಸೇವೆ ಶ್ಲಾಘನೀಯವಾಗಿದೆ. ಯಾವುದೇ ಸ್ವಾರ್ಥ ಇಲ್ಲದೆ ಗಿಡ-ಮರಗಳನ್ನು ಬೆಳೆಸುವ ಮೂಲಕ ಇಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ(Civilian Award) ಪಾತ್ರರಾಗಿದ್ದಾರೆ. ಆದರೆ ಈಗಿನವರು ಯಾವ ಕೆಲಸ ಮಾಡಿದರೆ ಏನು ಸಿಗುತ್ತದೆ ಎಂದು ಯೋಚಿಸಿ ಕೆಲಸ ಮಾಡುತ್ತಾರೆ. ಆದರೆ ತುಳಸಿ ಗೌಡ ಅವರದ್ದು ಪರಿಪೂರ್ಣ ಮರಗಿಡಗಳ ಪ್ರೀತಿ. ಅವರು ತಾನು ಈ ಕೆಲಸ ಮಾಡಿದರೆ ವಯಸ್ಸಾದ ಮೇಲೆ ತನಗೆ ಈ ಪ್ರಶಸ್ತಿ ಸಿಗುತ್ತದೆ ಎಂದು ಯೋಚಿಸಿರಲಿಲ್ಲ. ಏನನ್ನೂ ಅಪೇಕ್ಷೆಯೂ ಪಟ್ಟಿರಲಿಲ್ಲ. ಅಜ್ಜಿಯ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿ ಎಂದರು.

ಸನ್ಮಾನದ ಆನಂತರ ಮಾತನಾಡಿದ ಪದ್ಮಶ್ರೀ ತುಳಸಿ ಗೌಡ, ಎಲ್ಲರೂ ಗಿಡ ನೆಡಬೇಕು. ಗಿಡದಿಂದಲೇ ಮಳೆ-ಬೆಳೆ ಬರುತ್ತದೆ. ಈಗಿನವರೆಲ್ಲ ಗಿಡಮರ ಬೆಳೆಸುವುದು ಕಡಿಮೆ. ನಾನು ಈಗಲೂ ಪ್ರತಿ ವರ್ಷ 5 ಸಾವಿರದಷ್ಟು ಗಿಡ(Tree) ನೆಡುತ್ತೇನೆ. ನನ್ನ ಮಕ್ಕಳಿಗೂ ಗಿಡ ಬೆಳೆಸಿ ಎಂದು ಹೇಳುತ್ತೇನೆ. ಶಾಲೆಗೆ ಹೋದರು, ಮನೆಗೆ ಬಂದವರಿಗೂ ಗಿಡ ನೆಡಿ ಎಂದು ಹೇಳುತ್ತೇನೆ. ಗಿಡ ಇದ್ರೆ ಗಾಳಿ, ನೀರು ಸಿಗುತ್ತದೆ. ಯಾವಾಗಾದರೂ ಉಪಯೋಗಕ್ಕೂ ಬರುತ್ತದೆ. ಆದರೆ ಅಕೇಶಿಯ ಬೇಡ. ನಾವು ನರ್ಸರಿಯಲ್ಲಿ ಕೂಡ ಬೆಳೆಸುವುದಿಲ್ಲ ಎಂದು ಹೇಳಿದರು.

ತುಳಸಜ್ಜಿಯಿಂದ ಜಿಲ್ಲಾಡಳಿತಕ್ಕೆ ಮನವಿ

ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಜಿಲ್ಲಾಡಳಿತದ ಸನ್ಮಾನ ಸ್ವೀಕರಿಸಿ, ತಮಗೊಂದು ಮನೆ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಜತೆಗೆ ಒಂದು ಬಾವಿ ಹಾಗೂ ಮೊಮ್ಮಗನಿಗೊಂದು ಉದ್ಯೋಗ(Job)ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಮಾಧ್ಯಮಗಳ(Media) ಮುಂದೆ ತುಳಸಿ ಗೌಡ ಹೇಳಿಕೊಂಡಿದ್ದಾರೆ. ಜತೆಗೆ ಸಮಾಜದ ಎಲ್ಲರಿಗೂ ಮನೆ, ಭೂಮಿ, ನೀರಿನ ಸೌಲಭ್ಯ ನೀಡುವಂತೆಯೂ ಮನವಿ ಮಾಡಿದ್ದಾರೆ.
ಅಪರ ಜಿಲ್ಲಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಗಣಪತಿ, ಉಪವಿಭಾಗಾಧಿಕಾರಿಗಳಾದ ವಿದ್ಯಾಶ್ರೀ ಚಂದರಗಿ, ಮಮತಾದೇವಿ ಜಿ.ಎಸ್‌. ಇದ್ದರು.

ಚಪ್ಲಿ ಹಾಕಿ ನಂಗೆ ರೂಢಿನೇ ಇಲ್ಲ

ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ರಾಷ್ಟ್ರಪತಿ ಭವನದಲ್ಲಿ ತುಳಸಿ ಗೌಡ ಬರಿಗಾಲಲ್ಲೇ ಭಾಗವಹಿಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media) ಸಾಕಷ್ಟು ವೈರಲ್‌(Viral) ಆಗಿತ್ತು. ತುಳಸಿಯ ಸರಳತೆಯ ಕುರಿತು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯದವರು ಕೇಳಿದಾಗ ತನಗೆ ಚಪ್ಪಲಿ(Slippers)ಧರಿಸಿ ರೂಢಿನೇ ಇಲ್ಲ. ನಾನು ಧರಿಸುವುದೂ ಇಲ್ಲ. ಕಾಡಿಗೂ ಚಪ್ಪಲಿ ಇಲ್ಲದೆ ಹೋಗುತ್ತೇನೆ. ಕಲ್ಲು, ಮುಳ್ಳುಗಳು ಚುಚ್ಚುವುದಿಲ್ಲ ಎಂದರು.

ಪದ್ಮಶ್ರೀ ತುಳಸಿ ಗೌಡರಿಗೆ ರೂಪಾಲಿ ನಾಯ್ಕ ಸತ್ಕಾರ

ಪದ್ಮಶ್ರೀ ಪ್ರಶಸ್ತಿ ಪಡೆದು ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ವೃಕ್ಷಮಾತೆ ತುಳಸಿ ಗೌಡ ಅವರ ನಿವಾಸಕ್ಕೆ ತೆರಳಿ ಕಾರವಾರ-ಅಂಕೋಲಾ(Karwar-Ankola) ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ(Roopali Naik) ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ಬಳಿಕ ಅವರು ಮಾತನಾಡಿ, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಹಾಡುಹಕ್ಕಿ ಸುಕ್ರಿ ಗೌಡ ಹಾಗೂ ಸಸಿ ಬೆಳೆಸುವುದಕ್ಕೆ ಜೀವವನ್ನು ಮುಡಿಪಾಗಿಟ್ಟ ತುಳಸಿ ಗೌಡ ಎರಡು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಇದರಿಂದ ನನ್ನ ಕ್ಷೇತ್ರದ ಘನತೆ ಹೆಚ್ಚಾಗಿದೆ. ಕ್ಷೇತ್ರಕ್ಕೆ, ನಾಡಿಗೆ ಹೆಮ್ಮೆ ತಂದ ಇವರು ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ತುಳಸಿ ಗೌಡ ಅವರ ನಿವಾಸಕ್ಕೆ ಬರುವುದಕ್ಕೆ ಇದ್ದ ರಸ್ತೆಯ ಸಮಸ್ಯೆ ನಿವಾರಣೆ ಮಾಡಲಾಗಿದೆ. ಶೀಘ್ರದಲ್ಲಿ ರಸ್ತೆ ಮತ್ತು ಕಾಲುಸೇತುವೆ ನಿರ್ಮಾಣವಾಗಲಿದೆ ಎಂದರು.

23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ

ಜನಪದ ಕೋಗಿಲೆ ಸುಕ್ರಿ ಗೌಡ ಹಾಗೂ ವೃಕ್ಷಮಾತೆ ತುಳಸಿ ಗೌಡ ಅವರು ನನ್ನ ಕ್ಷೇತ್ರ, ನಮ್ಮ ನಾಡಿನ ರತ್ನಗಳಿದ್ದಂತೆ. ಅವರ ಸಾಧನೆಯಿಂದ ಕರ್ನಾಟಕದ ಬಾರ್ಡೋಲಿ ಅಂಕೋಲೆಯ ಕೀರ್ತಿ ಎಲ್ಲೆಡೆ ಮತ್ತಷ್ಟು ವ್ಯಾಪಿಸಿದೆ ಎಂದರು.
ಪದ್ಮಶ್ರೀ ಪ್ರಶಸ್ತಿಯ ಪದಕವನ್ನು ವೀಕ್ಷಿಸಿದ ಶಾಸಕಿ ರೂಪಾಲಿ ನಾಯ್ಕ, ಇದು ಎಷ್ಟು ಹಣ ಕೊಟ್ಟರೂ ಸಿಗದ ಪದಕ. ಸಾಧನೆಯನ್ನು ಗುರುತಿಸಿ ಪದಕವನ್ನು ನೀಡಲಾಗುತ್ತದೆ. ತುಳಸಿ ಗೌಡ ಅವರ ಮಾರ್ಗದರ್ಶನ(Guidance) ನಮಗೆ ಅವಶ್ಯಕ ಎಂದರು.

ಪ್ರಶಸ್ತಿಯನ್ನು ವಿತರಿಸಿದ ನಮ್ಮ ರಾಷ್ಟ್ರಪತಿ(President) ರಾಮನಾಥ ಕೋವಿಂದ(Ram Nath Kovind) ಅವರಿಗೆ ಹಾಗೂ ಎರಡು ಬಾರಿ ನನ್ನ ಕ್ಷೇತ್ರದ ಇಬ್ಬರು ಸಾಧಕರನ್ನು ಗುರುತಿಸಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರಿಗೆ ಶಾಸಕಿ ರೂಪಾಲಿ ನಾಯ್ಕ ಧನ್ಯವಾದ ಸಲ್ಲಿಸಿದರು.

ಪ್ರಶಸ್ತಿ ಫಲಕ ವೀಕ್ಷಣೆ

ಪದ್ಮಶ್ರೀ ತುಳಸಿ ಗೌಡ ಅವರೊಂದಿಗೆ ಕೆಲಸಮಯ ಕಳೆದ ಶಾಸಕಿ ರೂಪಾಲಿ ನಾಯ್ಕ, ದೆಹಲಿಗೆ ಹೋಗಿ ಬಂದಿದ್ದು, ಪ್ರಶಸ್ತಿ ಸ್ವೀಕರಿಸಿದ ಅನುಭವಗಳನ್ನು ಕೇಳಿ ತಿಳಿದರು. ಪದ್ಮಶ್ರೀ ಪ್ರಶಸ್ತಿ ಪದಕ, ಫಲಕಗಳನ್ನು ವೀಕ್ಷಿಸಿದರು. ಕ್ಷೇತ್ರಕ್ಕೆ ಹಾಗೂ ಇಡಿ ದೇಶಕ್ಕೆ ತುಳಸಿ ಗೌಡ ಮಾದರಿ ಎಂದು ಬಣ್ಣಿಸಿದರು.
 

click me!