ಚಿಕ್ಕಮಗಳೂರು: ಬೀಟಮ್ಮ ಗುಂಪಿನ ಆನೆಗಳ ಉಪಟಳದಿಂದ ಬೇಸತ್ತ ಗ್ರಾಮಸ್ಥರು; ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

By Ravi JanekalFirst Published Feb 15, 2024, 8:36 PM IST
Highlights

ಬೀಟಮ್ಮ ಗುಂಪಿನ ಆನೆಗಳ ಉಪಟಳದಿಂದ ಬೇಸತ್ತ ಚಿಕ್ಕಮಗಳೂರು ತಾಲೂಕಿನ ಇಂದಾವರ ಹಾಗೂ ಸುತ್ತಲಿನ ಗ್ರಾಮಸ್ಥರು ಇಂದು ಮಧ್ಯಾಹ್ನ ದಿಢೀರ್ ರಸ್ತೆ ತಡೆ ನಡೆಸಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

 ಚಿಕ್ಕಮಗಳೂರು (ಫೆ.15): ಬೀಟಮ್ಮ ಗುಂಪಿನ ಆನೆಗಳ ಉಪಟಳದಿಂದ ಬೇಸತ್ತ ಚಿಕ್ಕಮಗಳೂರು ತಾಲೂಕಿನ ಇಂದಾವರ ಹಾಗೂ ಸುತ್ತಲಿನ ಗ್ರಾಮಸ್ಥರು ಇಂದು ಮಧ್ಯಾಹ್ನ ದಿಢೀರ್ ರಸ್ತೆ ತಡೆ ನಡೆಸಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು. ಚಿಕ್ಕಮಗಳೂರು-ಮಲ್ಲಂದೂರು ರಸ್ತೆಯ ಇಂದಾವರ ಗೇಟ್ ಬಳಿ ಸೇರಿದ ಇಂದಾವರ, ಹುಕ್ಕುಂದ, ಕಾರೆಮನೆ, ಮೈಲಿಮನೆ ಇನ್ನಿತರೆ ಗ್ರಾಮದ ಜನರು, ರಸ್ತೆ ಮಧ್ಯೆ ಕುಳಿತು ಘೋಷಣೆಗಳನ್ನು ಕೂಗಿದರು.

ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ : 

ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುವ ಜೊತೆಗೆ ಪ್ರಾಣ ಭೀತಿ ಉಂಟುಮಾಡಿರುವ ಆನೆಗಳ ಹಿಂಡನ್ನು ಹಿಮ್ಮೆಟ್ಟಿಸಲು ಕೂಡಲೇ ಅರಣ್ಯ ಇಲಾಖೆ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಆನೆಗಳ ಹಿಂಡು ಗ್ರಾಮಗಳಿಗೆ ನುಗ್ಗಿ ದಾಂಧಲೆ ನಡೆಸುವ ಸಾದ್ಯತೆಗಳಿದ್ದರೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.ಕಳೆದ ನಾಲ್ಕೈದು ದಿನಗಳಿಂದಲೂ ಇಂದಾವರ ಹಾಗೂ ಸುತ್ತಲ ಗ್ರಾಮಗಳ ಜನರು ಕಾಡಾನೆಗಳ ಭಯದಲ್ಲೇ ಕಾಲ ತಳ್ಳುತ್ತಿದ್ದಾರೆ. 

ಒಂದು ರೀತಿಯಲ್ಲಿ ಈ ಭಾಗದ ಜನ ಜೀವನವೇ ಅಸ್ತವ್ಯಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಇಂದೇ ರಾತ್ರಿ ಅವುರಗಳನ್ನು ದೂರಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇಂದಾವರದ ಐ.ಕೆ. ಲೋಕೇಶ್ ಮಾತನಾಡಿ, ಆನೆಗಳ ಹಾವಳಿಯಿಂದ ಉಂಟಾಗುತ್ತಿರುವ ತೊಂದರೆ ಬಗ್ಗೆ ಖುದ್ದು ಅರಣ್ಯ ಇಲಾಖೆ ನೋಡುತ್ತಿದ್ದರೂ ಅವುಗಳನ್ನು ಹಿಮ್ಮೆಟ್ಟಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಕೇಳಿದಾಗಲೆಲ್ಲಾ ಆನೆ ಹಿಂಡುಗಳನ್ನು ಮುತ್ತೋಡಿ ಅರಣ್ಯ ಕಡೆಗೆ ಓಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ. ಆದರೆ ಮುತ್ತೋಡಿಯಲ್ಲಿರುವ ಆನೆಗಳು ಹೊರಗಿನಿಂದ ಬಂದಿರುವ ಹಿಂಡನ್ನು ಸೇರಿಸಿಕೊಳ್ಳುವುದಿಲ್ಲ. ಅಲ್ಲಿ ಪರಸ್ಪರ ಕಾಳಗ ಉಂಟಾದಲ್ಲಿ ಮತ್ತೆ ಅವರು ನಮ್ಮ ಗ್ರಾಮಗಳ ಕಡೆಗೆ ನುಗ್ಗಿ ದಾಂಧಲೆ ನಡೆಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಬಂದ ದಾರಿಯಲ್ಲೇ ಹಿಮ್ಮೆಟ್ಟಿಸಲು ಕೂಡಲೇ ಕ್ರಮ ಕ್ಯಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯಪುರ: ಬೇಸಗೆ ಮುನ್ನವೇ ಬರಿದಾಯ್ತು ತುಂಗಭದ್ರೆಯ ಒಡಲು!

ಸ್ಥಳಕ್ಕೆ ಆಗಮಿಸಿದ ಡಿಎಫ್ಓ ರಮೇಶ್ ಬಾಬು : 

ಇದೇ ವೇಳೆ ಆನೆಗಳ ಹಾವಳಿಯಿಂದ ಗ್ರಾಮಸ್ಥರು ಐದಾರು ದಿನಗಳಿಂದ ಹೊರಕ್ಕೆ ಬರುವುದಕ್ಕೇ ಹೆದರುತ್ತಿದ್ದಾರೆ ಎಂದು ದೂರಿದ ಸ್ಥಳೀಯರು,  ಇದರಿಂದ ಕೂಲಿ ಕೆಲಸಕ್ಕೂ ಕುತ್ತುಂಟಾಗಿದೆ. ದುಡಿದು ತಿನ್ನುವ ಜನರಿಗೆ ದಿಕ್ಕು ತೋಚದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೂನ್‌ ಅಂತ್ಯದವರೆಗೂ 4 ಜಿಲ್ಲೆಗಳಿಗೆ ತುಂಗಭದ್ರಾ ನೀರು: ಸಚಿವ ಶಿವರಾಜ ತಂಗಡಗಿ

ಇಂದಾವರ ಸೇರಿದಂತೆ ಸುತ್ತಲೂ ಇರುವ ಹತ್ತಾರು ಹಳ್ಳಿಗಳ ಜನರು ಆಸು ಪಾಸಿನಲ್ಲಿರುವ ಕಾಫಿ ತೋಟಗಳನ್ನೇ ಉದ್ಯೋಗಕ್ಕಾಗಿ ನೆಚ್ಚಿಕೊಂಡಿದ್ದಾರೆ. ಈಗ ಆನೆಗಳ ಹಿಂಡು ಪ್ರವೇಶಿಸಿರುವುದರಿಂದ ಅವರೆಲ್ಲರೂ ಮನೆಯಲ್ಲೇ ಉಳಿಯುವಂತಾಗಿದ್ದು, ಕಾರ್ಮಿಕರೂ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದ್ದು, ತೋಟಗಳಲ್ಲಿ ಕೆಲಸ, ಕಾರ್ಯಗಳು ಸ್ಥಗಿತಗೊಂಡು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿ ವಿಫಲರಾದರು. ಕಡೆಗೆ ಡಿಎಫ್ಓ ರಮೇಶ್ ಬಾಬು ಅವರು ಸ್ಥಳಕ್ಕಾಗಮಿಸಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ, ಆನೆಗಳನ್ನು ಆದಷ್ಟು ಬೇಗನೆ ಇಲ್ಲಿಂದ ಕದಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

click me!