ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ: ಕಾರಣ?

By Kannadaprabha NewsFirst Published Feb 28, 2020, 11:34 AM IST
Highlights

ಸಂಬಂಧಿಗಳಿದ್ದರೂ ಅನಾಥವಾಗಿ ಅಂತ್ಯಕ್ರಿಯೆ| ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಮೂವರ ಅಂತ್ಯಕ್ರಿಯೆ ನಡೆಸಿದ ಖಾಕಿ ಪಡೆ| ತಾಯಿ, ಮಗಳು, ಮಗನ ದಾರು​ಣ ಸಾವು| 

ವಿಜಯಪುರ(ಫೆ.28): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಂಡವರ ಸಂಬಂಧಿಗಳು ಈಗ ಬಂದು ಅವರ ಬಟ್ಟೆಗಳ ಮೂಲಕ ಪತ್ತೆ ಮಾಡಿದ್ದಾರೆ.

ಇಂತಹ ಹೃದಯವಿದ್ರಾವಕ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಕೊಲ್ಹಾರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಿಂದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವಗಳು ದೊರೆತ ನಂತರ ಪೊಲೀಸರೇ ಅನಾಥ ಶವಗಳೆಂದು ಅವರ ಅಂತ್ಯಕ್ರಿಯೆ ಮಾಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ, ವಿಜಯಪುರ ನಿವಾಸಿಗಳಾದ ರೇಣುಕಾ ಅಶೋಕ ಹವಾಲ್ದಾರ (45), ಐಶ್ವರ್ಯ ಅಶೋಕ ಹವಾಲ್ದಾರ (23) ಹಾಗೂ ಅಖಿಲೇಶ ಅಶೋಕ ಹವಾಲ್ದಾರ (18) ಆತ್ಮಹತ್ಯೆ ಮಾಡಿಕೊಂಡವರು. ಕುಟುಂಬದಲ್ಲಿ ಮನಸ್ತಾಪ ಉಂಟಾಗಿ ತಾಯಿ, ಮಗಳು, ಮಗ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ತಮ್ಮ ಸಾವಿಗೆ ನಾವೇ ಕಾರಣರಾಗಿದ್ದೇವೆ ಎಂಬ ಡೆತ್‌ನೋಟ್‌ ಅನ್ನು ಐಶ್ವರ್ಯ ಬರೆದಿರುವುದು ಗುರುವಾರ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.19ರಂದೇ ಕಾಣೆಯಾಗಿದ್ದರು:

ಈ ನತದೃಷ್ಟರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದವರು. ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ವಾಸವಾಗಿದ್ದರು. ರೇಣುಕಾಳ ಅಕ್ಕ ಉಷಾಳ ಮಗಳು ದೀಪಾಳ ಆರೈಕೆಗಾಗಿ ಈ ಮೂವರು ವಿಜಯಪುರದಲ್ಲಿ ನೆಲೆಸಿದ್ದರು. 10 ವರ್ಷಗಳ ಹಿಂದೆ ರೇಣುಕಾಳ ಅಕ್ಕ ಉಷಾ ಕ್ಯಾನ್ಸರ್‌ನಿಂದ ಸಾವನ್ನಪ್ಪಿದಳು. ಕಳೆದ 7 ವರ್ಷಗಳ ಹಿಂದೆ ಉಷಾ ಪತಿ ನಾರಾಯಣ ಕೂಡ ಮೃತಪಟ್ಟಿದ್ದ. ನಾರಾಯಣ ಮತ್ತು ಅಶೋಕ ಹವಾಲ್ದಾರ (ಮೃತ ರೇಣುಕಾಳ ಪತಿ) ಸಹೋದರ ಜೊತೆಗೆ ಉಷಾ ಮತ್ತು ರೇಣುಕಾ ಸಹೋದರಿಯರ ಮದುವೆಯಾಗಿತ್ತು. ಉಷಾ ಹವಾಲ್ದಾರ ಅವರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಫೆ.16ರ ಮಧ್ಯರಾತ್ರಿಯಿಂದಲೇ ಈ ಮೂವರು ಮನೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದ್ದು, ಅಂದೇ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾರಣ, ಇವರು ಆತ್ಮಹತ್ಯೆ ಮಾಡಿಕೊಂಡು ಮೂರು ದಿನಗಳ ನಂತರ ಅಂದರೆ, ಫೆ.19ರಂದು ಐಶ್ವರ್ಯಳ ಶವ ಪತ್ತೆಯಾಗಿತ್ತು. ಫೆ.25ರಂದು ರೇಣುಕಾ ಮತ್ತು ಅಶೋಕ ಅವರ ಶವಗಳು ಕೃಷ್ಣಾ ನದಿಯಲ್ಲಿಯೇ ಪ್ರತ್ಯೇಕವಾಗಿ ಪತ್ತೆಯಾಗಿದ್ದವು. 

ಈ ಹಿನ್ನೆಲೆಯಲ್ಲಿ ಮೂವರು ಕಾಣೆಯಾಗಿರುವ ಬಗ್ಗೆ ವಿಜಯಪುರ ಮಹಿಳಾ ಠಾಣೆಯಲ್ಲಿ ಫೆ.25ರಂದು ಪ್ರಕರಣ ದಾಖಲಾಗಿತ್ತು. ಇದಾದ ಮೇಲೆ ಪೊಲೀಸರು ಈ ಶವಗಳನ್ನು ಅನಾಥವೆಂದು ತಿಳಿದು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಆದರೆ, ಫೆ.26ರಂದು ಸಂಬಂಧಿಕರಿಗೆ ಆತ್ಮಹತ್ಯೆ ಮಾಡಿಕೊಂಡವರ ಕುರಿತು ಮಾಹಿತಿ ಸಿಕ್ಕಿದೆ. ಇದರಿಂದಾಗಿ ಅಶೋಕ ಹವಾಲ್ದಾರ ಕುಟುಂಬದಲ್ಲಿ ಆತಂಕ ಮಡುಗಟ್ಟಿದೆ. ಪ್ರಕರಣವನ್ನು ಕುಟುಂಬದ ಸದಸ್ಯರನ್ನು ಸ್ಥಳಕ್ಕೆ ಕರೆಸಿ ಮೃತರ ಬಟ್ಟೆಪರಿಶೀಲಿಸಿದ ಮೇಲೆ ಮೃತರ ಗುರುತು ಪತ್ತೆಯಾಗಿದೆ. ಈ ಬಗ್ಗೆ ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!