ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

By Kannadaprabha NewsFirst Published Jul 22, 2021, 7:27 AM IST
Highlights

* ಗಬ್ಬೂರು ಕ್ರಾಸ್‌ ಬಳಿ ಬೈಪಾಸ್‌ನಲ್ಲಿ ಆಟೋಗೆ ಡಿಕ್ಕಿ ಹೊಡೆದ ಲಾರಿ
* ತಾರಿಹಾಳ ಬಳಿ ಬೈಕ್‌- ಲಾರಿ ನಡುವೆ ಡಿಕ್ಕಿ 
* ಅಪಘಾತದಿಂದ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತ 

ಹುಬ್ಬಳ್ಳಿ(ಜು.22): ಇಲ್ಲಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬುಧವಾರ ಸಂಜೆ ವೇಳೆ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಆಟೋ- ಲಾರಿ ಡಿಕ್ಕಿ

ಗಬ್ಬೂರು ಕ್ರಾಸ್‌ ಬಳಿ ಬೈಪಾಸ್‌ನಲ್ಲಿ ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದು ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೆಹುಬ್ಬಳ್ಳಿಯ ನಿವಾಸಿಗಳಾದ ಶ್ರೀನಿವಾಸ ಮಾರುತಿ ಕಲಾದಗಿ (46) ಹಾಗೂ ಮಹ್ಮದ ಹುಸೇನಿ ಇಬ್ರಾಹಿಂಸಾಬ ಮುಲ್ಲಾ (56) ಮೃತಪಟ್ಟವರು. ಇವರು ಆಟೋದಲ್ಲಿ ಬೈಪಾಸ್‌ ಬಳಿ ತೆರಳುತ್ತಿದ್ದರು. ಈ ವೇಳೆ ಹುಬ್ಬಳ್ಳಿಯಿಂದ ಹಾವೇರಿ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಎಲ್ಲ ನಜ್ಜುಗುಜ್ಜಾಗಿದೆ. ಮೃತದೇಹಗಳೆರಡು ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆಲ್ಲ ರಕ್ತ ಹರಿದಿತ್ತು. ಆಟೋದಲ್ಲಿ ಸಿಲುಕಿದ್ದ ದೇಹಗಳನ್ನು ಹೊರತೆಗೆಯುವಲ್ಲಿ ಸಾರ್ವಜನಿಕರು ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು. ಅಪಘಾತದಿಂದ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತವಾಗಿತ್ತು.

ಕಲಬುರಗಿ : ಭೀಕರ ಅಪಘಾತ - ನಾಲ್ವರ ದುರ್ಮರಣ

ಅಪಘಾತ ಸಂಭವಿಸುತ್ತಿದ್ದಂತೆ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾಗಲು ಯತ್ನಿಸಿದ. ಆದರೆ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಓರ್ವ ಸಾವು:

ಇನ್ನೊಂದು ಪ್ರಕರಣದಲ್ಲಿ ಬೈಕ್‌- ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ತಾರಿಹಾಳ ಬಳಿ ನಡೆದಿದೆ. ಬೈಪಾಸ್‌ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ ಮೇಲೆ ಸ್ನೇಹಿತರಿಬ್ಬರು ಬರುತ್ತಿದ್ದ ವೇಳೆ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಬೈಕ್‌ ಚಲಾಯಿಸುತ್ತಿದ್ದ ಯುವಕನ ತಲೆಗೆ ಗಂಭೀರವಾಗಿ ಗಾಯವಾದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತಪಟ್ಟ ವ್ಯಕ್ತಿಯ ಹೆಸರು ಹಾಗೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬೈಕ್‌ ಹಿಂಬದಿ ಕುಳಿತ್ತಿದ್ದ ಸವಾರನಿಗೆ ತೀವ್ರತರನಾದ ಗಾಯಗಳಾಗಿದ್ದು ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
 

click me!