ಶೋಷಣೆಗೆ ಒಳಗಾಗುವ ಕಾಲ ಇದಲ್ಲ: ಸಿ.ಟಿ.ರವಿ

By Kannadaprabha NewsFirst Published Oct 6, 2022, 11:42 AM IST
Highlights

ನಾವ್ಯಾರೂ ಶೋಷಣೆಗೆ ಒಳಗಾಗುವ ಕಾಲ ಇದಲ್ಲ. ತಲೆ ಎತ್ತಿ ನಿಲ್ಲುವ ಪ್ರೇರಣೆ ಅಂಬೇಡ್ಕರ್‌ ಅವರ ದೀಕ್ಷಾ ಭೂಮಿ ಪ್ರವಾಸದಿಂದ ಸಿಗಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಚಿಕ್ಕಮಗಳೂರು (ಅ.6) : ನಾವ್ಯಾರೂ ಶೋಷಣೆಗೆ ಒಳಗಾಗುವ ಕಾಲ ಇದಲ್ಲ. ತಲೆ ಎತ್ತಿ ನಿಲ್ಲುವ ಪ್ರೇರಣೆ ಅಂಬೇಡ್ಕರ್‌ ಅವರ ದೀಕ್ಷಾ ಭೂಮಿ ಪ್ರವಾಸದಿಂದ ಸಿಗಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ

ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಬಾರಿಗೆ ಪ್ರವಾಸ ಕಷ್ಟಕರವಾಗಬಾರದು ಎನ್ನುವ ಕಾರಣಕ್ಕೆ ಹೈಟೆಕ್‌ ಬಸ್‌ ವ್ಯವಸ್ಥೆ ಮಾಡಲಾಗಿದೆ. ಕೇವಲ ಪ್ರವಾಸಿಗರಾಗಿ ಅಲ್ಲ. ಅಧ್ಯಯನ ಮಾಡುವ ಭಾವನೆಯಿಂದ ತೆರಳಬೇಕು. ತಮ್ಮ ಸುರಕ್ಷತೆಗೆ ಹಾಗೂ ತಮ್ಮೊಂದಿಗಿರುವವರ ಸುರಕ್ಷತೆಗೂ ಗಮನಕೊಡಬೇಕು. ಯಾತ್ರೆ ಮುಗಿದ ನಂತರ ಮುಂದೆ ಈ ಸಂಬಂಧ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸುತ್ತೇವೆ ಎಂದರು.

ಡಾ.ಅಂಬೇಡ್ಕರ್‌ ಅವರಿಗೆ ಸೇರಿದ ಪಂಚ ಧಾಮಗಳನ್ನು ಪಂಚತೀರ್ಥಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದು ವಿಶೇಷ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಅದರಲ್ಲಿ ಮಧ್ಯಪ್ರದೇಶದ ಅಂಬೇಡ್ಕರ್‌ ಅವರ ಜನ್ಮಸ್ಥಾನವಾದ ಮೊಹುಮಾ ಗ್ರಾಮ, ಅವರ ಕರ್ಮಭೂಮಿ ನಾಗಪುರ ದೀಕ್ಷಾಭೂಮಿ. ಅಲ್ಲಿ ಇದ್ದ ಸ್ಮಾರಕಕ್ಕೆ ಇನ್ನಷ್ಟುಅನುದಾನ ಹಾಕಿ ಕೇಂದ್ರ ಸರ್ಕಾರ ಮತ್ತು ಈ ಹಿಂದೆ ದೇವೇಂದ್ರ ಫಡ್ನವೀಸ್‌ ಅವರ ಸರ್ಕಾರ ಅನುದಾನ ಮಂಜೂರು ಮಾಡಿದ್ದ ಕಾರಣ ಇನ್ನಷ್ಟುಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

ಇಲ್ಲಿಗೆ ಭೇಟಿ ನೀಡುವವರಿಗೆ ನಿಜಧರ್ಮ, ಮಾನವತೆ, ರಾಷ್ಟ್ರಭಕ್ತಿಯ ಅರಿವಾಗುತ್ತದೆ. ಅಂಬೇಡ್ಕರ್‌ ಅವರು ರಾಷ್ಟ್ರೀಯ ಹಿತಾಸಕ್ತಿ ಜೊತೆಗೆ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ. ಅವರ ಬದುಕು ಮತ್ತು ಬರಹವನ್ನು ಅಧ್ಯಯನ ಮಾಡಿಕೊಂಡವರಿಗೆ ಇದರ ಅರಿವಾಗುತ್ತದೆ. ತನ್ನ ಸಮುದಾಯಕ್ಕೆ ಆದ ನೋವು, ಅನ್ಯಾಯವನ್ನು ಎಷ್ಟುಗಟ್ಟಿಧ್ವನಿಯಲ್ಲಿ ವಿರೋಧಿಸಿದರೋ ಅಷ್ಟೇ ಗಟ್ಟಿಧ್ವನಿಯಲ್ಲಿ ರಾಷ್ಟ್ರ ಹಿತಾಸಕ್ತಿ ಪರವಾಗಿ ನಿಂತಿರುವುದು ಸಂವಿಧಾನದಲ್ಲೂ ವ್ಯಕ್ತವಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ಯಾತ್ರೆಗೆ ಶಾಸಕರ ನಿರ್ದೇಶನದ ಮೇರೆಗೆ ಈ ಬಾರಿ ಐಷಾರಾಮಿ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಆರ್‌ಎಸ್‌ಎಸ್‌ ದೇಶ ಭಕ್ತ ಸಂಘಟನೆ, ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿ

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚೈತ್ರ ಮಾತನಾಡಿ, ಅಂಬೇಡ್ಕರ್‌ ಅವರು 6 ಲಕ್ಷ ಅನುಯಾಯಿಗಳ ಜೊತೆ ದೀಕ್ಷೆ ಪಡೆದಿದ್ದರು. ಅದು ಎಲ್ಲರಿಗೂ ಪವಿತ್ರ ಸ್ಥಾನವಾಗಿದೆ. ಜಿಲ್ಲೆಯಿಂದ 140 ಜನರು ಇಲಾಖೆ ವತಿಯಿಂದ ತೆರಳುತ್ತಿದ್ದಾರೆ. 20 ಜನ ಮಹಿಳೆಯರು ಸೇರಿದ್ದಾರೆ ಎಂದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್‌, ಅಪರ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ, ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ರಮೇಶ್‌ ಹಾಜರಿದ್ದರು.

click me!