Mysuru : ಕೊಳೆತು ನಾರುತ್ತಿದೆ ಲಕ್ಷ್ಮಣತೀರ್ಥ ನದಿ

Published : Apr 08, 2023, 09:20 AM IST
Mysuru :  ಕೊಳೆತು ನಾರುತ್ತಿದೆ ಲಕ್ಷ್ಮಣತೀರ್ಥ ನದಿ

ಸಾರಾಂಶ

ಹುಣಸೂರಿನಲ್ಲಿ ಇತಿಹಾಸ ಪ್ರಸಿದ್ಧ ಲಕ್ಷ್ಮಣ ತೀರ್ಥನದಿಗೆ ಕೊಳಚೆ ನೀರು ಸೇರಿ ಕೊಳೆತು ನಾರುತ್ತಿದೆ ಎಂದು ಸತ್ಯ ಎಂಎಎಸ್‌ ಫೌಂಡೇಷನ್‌ ಗೌರವಾಧ್ಯಕ್ಷ ಸತ್ಯಪ್ಪ ಆರೋಪಿಸಿದರು.

  ಮೈಸೂರು :  ಹುಣಸೂರಿನಲ್ಲಿ ಇತಿಹಾಸ ಪ್ರಸಿದ್ಧ ಲಕ್ಷ್ಮಣತೀರ್ಥನದಿಗೆ ಕೊಳಚೆ ನೀರು ಸೇರಿ ಕೊಳೆತು ನಾರುತ್ತಿದೆ ಎಂದು ಸತ್ಯ ಎಂಎಎಸ್‌  ಫೌಂಡೇಷನ್‌ ಗೌರವಾಧ್ಯಕ್ಷ ಸತ್ಯಪ್ಪ ಆರೋಪಿಸಿದರು.

ಕಾವೇರಿ ನದಿಯ ಉಪ ನದಿಯಾದ ಲಕ್ಷ್ಮಣ ತೀರ್ಥ ನದಿಗೆ ಧಾರ್ಮಿಕ ಇತಿಹಾಸವಿದೆ. ಆದರೆ ಹುಣಸೂರಿನಲ್ಲಿ ಈ ನದಿ ಸುಮಾರು ಒಂದು ಕಿ.ಮೀ. ಹರಿಯುತ್ತದೆ. ಈ ವೇಳೆ ನದಿಗೆ ಕೊಳಚೆ ನೀರು ಬಿಟ್ಟಪರಿಣಾಮ ಕೊಳೆತು ನಾರುತ್ತದೆ. ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿಹುಣಸೂರು ನಗರ ಪ್ರವೇಶಿಸುವ ತನಕ ಶುದ್ಧವಾಗಿರುವ ಲಕ್ಷ್ಮಣತೀರ್ಥ ನದಿಯು ಹುಣಸೂರು ನಗರ ಪ್ರವೇಶಿಸಿದಾಕ್ಷಣ ಮಲಿನವಾಗಲು ಪ್ರಾರಂಭವಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹುಣಸೂರಿನ ಹೃದಯ ಭಾಗದಲ್ಲೇ ಲಕ್ಷ್ಮಣತೀರ್ಥ ನದಿ ಹರಿದರೂ ಈ ನೀರು ಕುಡಿಯಲು ಯೋಗ್ಯವಲ್ಲದ ಕಾರಣಕ್ಕೆ ಪಕ್ಕದ ಕೃಷ್ಣರಾಜನಗರ ತಾಲೂಕಿನಿಂದ ಅಂದರೆ ಸುಮಾರು ಸುಮಾರು 25 ಕಿ.ಮೀ. ದೂರದಿಂದ ಕಾವೇರಿ ನದಿಯ ನೀರನ್ನು ಪೂರೈಸಲಾಗುತ್ತದೆ. ನಗರದ ಹಲವು ಭಾಗಗಳಲ್ಲಿ ಈಗಲೂ ನೀರಿನ ಸಮಸ್ಯೆ ಇದೆ ಎಂದು ಅವರು ವಿವರಿಸಿದರು.

ನದಿ ನೀರು ಮಲಿನವಾಗುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆ ಕಾಟ ಮತ್ತು ಇತರೆ ಮಾರಣಾಂತಿಕ ರೋಗ ಹೆಚ್ಚಾಗಿದೆ. ಈ ನದಿ ಮುಂದೆ ಹರಿಯುತ್ತಾ ಕಟ್ಟೆಮಳಲವಾಡಿ ಅಣೆಕಟ್ಟು, ಶಿರೂರು ಅಣೆಕಟ್ಟು, ಮೂಲಕ ಕೃಷ್ಣರಾಜಸಾಗರ ಸೇರುತ್ತದೆ. ಇದರಿಂದಾಗಿ ಹುಣಸೂರಿನ ನಂತರ ಹಳ್ಳಿಯ ಜನರು ಈ ಕೊಳೆತ ಲಕ್ಷ್ಮಣತೀರ್ಥ ನದಿಯ ನೀರನ್ನೇ ಉಪಯೋಗಿಸಬೇಕು. ಕೃಷ್ಣರಾಜಸಾಗರ ಅಣೆಕಟ್ಟು ಸೇರುವ ಹುಣಸೂರಿನ ಕೊಳಚೆ ನೀರು ರಾಜಧಾನಿ ಬೆಂಗಳೂರು ಮತ್ತು ಪ್ರಮುಖ ನಗರಗಳಿಗೂ ಕುಡಿಯಲು ಸರಬರಾಜು ಆಗುತ್ತಿದೆ. ಸುಮಾರು ಎರಡು ಕೋಟಿ ಜನರಿಗೆ ಲಕ್ಷ್ಮಣತೀರ್ಥ ನದಿ ನೀರು ಕಾವೇರಿ ನದಿಗೆ ಸೇರ್ಪಡೆಯಾಗಿ ನೀರುಣಿಸುತ್ತಿದೆ. ಅಂದರೆ ಕಲುಷಿತಗೊಂಡಿರುವ ಲಕ್ಷ್ಮಣತೀರ್ಥ ನದಿಯ ನೀರು ಕಾವೇರಿ ನೀರಿನೊಂದಿಗೆ ಬೆರೆತು ಜನರಿಗೆ ಹಲವಾರು ಕಾಯಿಲೆ ಹರಡಲು ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಕಳೆದ 20 ವರ್ಷಗಳಿಂದ ಆಯ್ಕೆಯಾದ ಶಾಸಕರು ಮತ್ತು ತಾಲೂಕು ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿ ಕೊಳಚೆ ನೀರು ನದಿಗೆ ಹರಿಯಲು ಬಿಟ್ಟು ಕಣ್ಣುಮುಚ್ಚಿ ಕುಳಿತಿದೆ. ಶಾಸಕರು ಮತ್ತು ತಾಲೂಕು ಆಡಳಿತ ಮಂಡಳಿ ನಿರ್ಲಕ್ಷ್ಯ ಬೇಜವಾಬ್ದಾರಿ ಧೋರಣೆಯಿಂದ ಲಕ್ಷ್ಮಣತೀರ್ಥ ನದಿಯು ಕೊಳೆತು ನಾರುತ್ತಿದೆ. ಹೀಗಾಗಿ ಕಾವೇರಿ ನೀರು ಸೇವಿಸುವ ಎಲ್ಲರೂ ಲಕ್ಷ್ಮಣತೀರ್ಥ ನದಿ ಸಂರಕ್ಷಣೆಗೆ ಹೋರಾಟ ಮಾಡಲೇಬೇಕು ಎಂದು ಅವರು ಮನವಿ ಮಾಡಿದರು.

ಗ್ರಾಪಂ ಸದಸ್ಯರಾದ ಕುಮಾರ್‌, ಸಜ್ಜನ್‌ರಾವ್‌ ಪವಾರ್‌, ರೈತ ಮುಖಂಡರಾದ ವೆಂಕೋಬರಾವ್‌ ಜಗತಾಪ್‌, ಅನಂತೇಗೌಡ ಇದ್ದರು.

PREV
Read more Articles on
click me!

Recommended Stories

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ
ಹಾವೇರಿ: ಅಕ್ಕಿ ಕಳ್ಳರ ಪಾಲಾಗುತ್ತಿದೆ ಬಡವರ 'ಅನ್ನಭಾಗ್ಯ'; ಸಿಎಂ ಸಿದ್ದರಾಮಯ್ಯ ಅವರೇ ಇಲ್ನೋಡಿ!