ಮೈಸೂರು: ಏ. 12 ರವರೆಗೆ ಮಳೆ ಸಾಧ್ಯತೆ

Published : Apr 08, 2023, 09:03 AM IST
ಮೈಸೂರು: ಏ. 12 ರವರೆಗೆ ಮಳೆ ಸಾಧ್ಯತೆ

ಸಾರಾಂಶ

ರೇವತಿ ನಕ್ಷತ್ರದ ಮಳೆ ಕಾಲವು ಏ. 12 ರವರೆಗೆ ಇರುತ್ತದೆ. ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮೈಸೂರು: ರೇವತಿ ನಕ್ಷತ್ರದ ಮಳೆ ಕಾಲವು ಏ. 12 ರವರೆಗೆ ಇರುತ್ತದೆ. ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ದೀರ್ಘಾವಧಿ ಹವಾಮಾನ ಮನ್ಸೂಚನೆ ಪ್ರಕಾರ 13 ರವರೆಗೆ ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಅವಧಿಯಲ್ಲಿ ತೆಂಗಿಗೆ ರುಗೋಸ್‌ ಬಿಳಿ ನೊಣ, ಶುಂಠಿಗೆ ಗಡ್ಡೆ ಕೊಳೆ ರೋಗ, ಮಾವಿಗೆ ಕೊಂಡ ಕೊರಕ, ಭತ್ತಕ್ಕೆ ಬೆಂಕಿ ರೋಗ, ಕುತ್ತಿಗೆ ರೋಗ ಕಂಡುಬರಲಿದೆ. ಹೆಚ್ಚಿನ ಮಾಹಿತಿಗೆ ರೈತರು ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌ ಮೊ. 94498 69914, ದೂ. 0821- 2591267, ಸಹ ಸಂಶೋಧಕ ಡಾ.ಜಿ.ವಿ. ಸುಮಂತ್‌ಕುಮಾರ್‌ ಮೊ. 95353 45814 ಸಂಪರ್ಕಿಸಬಹುದು.

6 ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು (ಏ.08): ರಾಜ್ಯದ ಆರು ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಕೆಲಕಾಲ ಆಲಿಕಲ್ಲು ಸಹಿತ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಸಿಡಿಲು ಬಡಿದು ಮೂವರು ಸೇರಿ, ಮಳೆ ಸಂಬಂಧಿ ಅನಾಹುತಕ್ಕೆ ಐವರು ಬಲಿಯಾಗಿದ್ದಾರೆ. ಕಲಬುರಗಿ, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡದಲ್ಲಿ ಶುಕ್ರವಾರ ಕೆಲಕಾಲ ಉತ್ತಮ ಮಳೆ ಸುರಿದಿದ್ದು, ಬೀದರ್‌ನಲ್ಲಿ ಸಾಧಾರಣ ಮಳೆಯಾಗಿದೆ. ಕೊಪ್ಪಳ, ಉತ್ತರ ಕನ್ನಡ, ಗದಗದಲ್ಲಿ ಭಾರೀ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೆಲವೆಡೆ ಬೆಳೆಗಳಿಗೂ ಹಾನಿಯಾಗಿದೆ.

ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಕನೂರು ತಾಲೂಕು, ಗದಗ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆಯ ಅಬ್ಬರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಆಲಿಕಲ್ಲು ಮಳೆಯಿಂದಾಗಿ ರಸ್ತೆ, ಹೊಲಗಳೆಲ್ಲ ಸಂಪೂರ್ಣವಾಗಿ ಶ್ವೇತ ವರ್ಣಕ್ಕೆ ತಿರುಗಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳದಲ್ಲಂತು ಮನೆ ಚಾವಣಿಗಳೆಲ್ಲ ಸಂಪೂರ್ಣವಾಗಿ ಆಲಿಕಲ್ಲುಗಳಿಂದ ಆವೃತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲೂ ಆಲಿಕಲ್ಲು ಸಹಿತ ಒಂದು ಗಂಟೆ ಕಾಲ ಅಬ್ಬರದ ಮಳೆ ಸುರಿದಿದ್ದು, ಧಾರವಾಡ ಜಿಲ್ಲೆಯಲ್ಲೂ ಕೆಲಕಾಲ ಉತ್ತಮ ಮಳೆಯಾಗಿದೆ.

ಪ್ರವಾಸಕ್ಕೆ ಹೋಗುವವರಿಗೆ ಮಳೆ ಅಡ್ಡಿಯಾಗೋ ಸಾಧ್ಯತೆ: ಏ.12ರಿಂದ 20ರವರೆಗೆ ಕರ್ನಾಟಕದಲ್ಲಿ ವರುಣಾರ್ಭಟ

ಗದಗದಲ್ಲಿ ಸಿಡಿಲಿಗೆ ಇಬ್ಬರು ಬಲಿ: ಸಿಡಿಲಬ್ಬರಕ್ಕೆ ಗದಗ ತಾಲೂ​ಕಿನ ಲಿಂಗ​ದಾ​ಳ​ದಲ್ಲಿ ಕುರಿ ಮೇಯಿ​ಸಲು ತೆರ​ಳಿದ್ದ ಶರಣಪ್ಪ (16), ದೇವೇಂದ್ರಪ್ಪ (16) ಸ್ಥಳದಲ್ಲೇ ಮೃತಪಟ್ಟರೆ, ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಿಲ್ವಾಡ (ಬಿ) ಗ್ರಾಮದ ರೈತ ಭೋಗಪ್ಪ (60) ಕೃಷಿ ಕೆಲಸ ಮಾಡುತ್ತಿದ್ದಾಗ ಬಲಿಯಾಗಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಯಂಕುಬಾಯಿ ಕುಲಕರ್ಣಿ (79), ಶಾರವ್ವಾ ಪತ್ತಾರ (58) ಅವರು ಮಳೆಯಿಂದಾಗಿ ನೆನೆದಿದ್ದ ಮನೆಯ ಚಾವಣಿ ಕುಸಿದು ಮೃತಪಟ್ಟಿದ್ದಾರೆ.

ಗಾಳಿಗೆ ಹಾರಿಹೋದ 10 ಚೆಕ್‌ಪೋಸ್ಟ್‌ಗಳು: ಅಸೆಂಬ್ಲಿ ಚುನಾವಣೆಗಾಗಿ ಜಿಲ್ಲಾದ್ಯಂತ 45ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿತ್ತು. ಈ ಪೈಕಿ ಅಫಜಲ್ಪುರ, ಕಲಬುರಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳ ಪೈಕಿ 10ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳು ಬಿರುಗಾಳಿಗೆ ಹಾರಿ ಹೋಗಿವೆ. ಬಳೂರಗಿ, ಅರ್ಜುಣಗಿ ಸೇರಿದಂತೆ ಗಡಿಯಲ್ಲಿ ಹಾಕಲಾಗಿದ್ದ ಚೆಕ್‌ಪೋಸ್ಟ್‌ಗಳು ಹಾರಿ ಹೋಗಿವೆ. ಬಟ್ಟೆಯ ಆಸರೆ ಇರುವ ತಾತ್ಕಾಲಿಕ ಚೆಕ್‌ಪೊಸ್ಟ್‌ ಇವಾಗಿದ್ದವು. ಬಿರುಗಾಳಿಗೆ ಅವೆಲ್ಲವೂ ಹರಿದು ಹಾರಿ ಹೋಗಿವೆ.

ಕಲಬುರಗಿ ನಗರ ಹಾಗೂ ಸುತ್ತಲಿನ 15 ಕಿಮೀ ವ್ಯಾಪ್ತಿಯಲ್ಲಿ ಶುಕ್ರವಾರ ಇಡೀ ದಿನ ಮೋಡ ಕವಿದ ವಾತಾವರಣವಿದೆ. ಕಲಬುರಗಿಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಏಕಾಏಕಿ ಸುರಿದ ಶುಕ್ರವಾರದ ಧಾರಾಕಾರ ಮಳೆಯಿಂದಾಗಿ ತಂಪನೆಯ ವಾತಾವರಣ ಸೃಷ್ಟಿಯಾಗಿದೆ. ಬೇಸಿಗೆಯ ಪ್ರಖರ ತಾಪಮಾನ ತುಸು ಶಮನವಾದಂತಾಗಿದೆ. ರಭಸದ ಗಾಳಿ, ಗುಡುಗಿನ ಅಬ್ಬರ ಜೋರಾಗಿದ್ದರಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಹಲವೆಡೆ ಬೆಳಗಿನ 3 ಗಂಟೆ ಕರೆಂಟ್‌ ಇರಲೇ ಇಲ್ಲ. ಹೀಗಾಗಿ ಎಂದಿನ ಕೆಲಸಗಳಿಗೆ ಇದು ಭಾರಿ ಅಡ್ಡಿ ಮಾಡಿತ್ತು. ಮಳೆ, ಗಾಳಿಯ ರಭಸ ತಗ್ಗಿದ ನಂತರ ಕರೆಂಟ್‌ ಪುನಃ ಬಂತು. ಮರ ಗಿಡಗಳು ಧರೆಗೆ ಒರಗಿದ್ದಲ್ಲದೆ ಅನೇಕ ಕಡೆ ವಿದ್ಯುತ್‌ ತಂತಿಗಳ ಮೈಲೂ ಮರಲು ಬಿದ್ದ ಕಾರಣ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಕಾಡಿದೆ.

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌