ಕೊಪ್ಪಳ: ಕೊರೋನಾ ಕಾಟಕ್ಕೆ ದೇವಸ್ಥಾನ ಬಂದ್!

By Kannadaprabha NewsFirst Published Mar 21, 2020, 2:32 PM IST
Highlights

ಗವಿಮಠ, ಹುಲಿಗೆಮ್ಮ ದೇವರ ದರ್ಶನ ಬಂದ್ | ಕೊಪ್ಪಳ ಜಿಲ್ಲಾದ್ಯಂತ ಬಹುತೇಕ ದೇವಾಲಯಗಳಲ್ಲಿಲ್ಲ ದೇವರ ದರ್ಶನ ಮಾ. 21ರಿಂದ 31ರ ವರೆಗೂ ದರ್ಶನ ನೀಡದಿರಲು ನಿರ್ಧಾರ | ಕೊರೋನಾ ಭೀತಿಯಿಂದ ಮನೆಯಿಂದ ಆಚೆ ಬರದ ಜನ|

ಕೊಪ್ಪಳ[ಮಾ.21]: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇದುವರೆಗೂ ಅಂಗಡಿ, ಮುಂಗಟ್ಟುಗಳು ಬಂದ್ ಮಾಡಿದ್ದು ಆಯಿತು. ಈಗ ಜಿಲ್ಲಾದ್ಯಂತ ದೇವಸ್ಥಾನದ ಬಾಗಿಲುಗಳು ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದಂತೆ ಬಂದ್ ಆಗುತ್ತಿವೆ. ದೇವರ ದರ್ಶನಕ್ಕಾಗಿ ಭಕ್ತರು ಆಗಮಿಸುವುದರಿಂದ ಉಂಟಾಗಬಹುದಾದ ಸಮಸ್ಯೆಯನ್ನು ನೀಗಿಸಲು ಜಿಲ್ಲಾಡಳಿತ ಮುಜರಾಯಿ ವ್ಯಾಪ್ತಿಯ ದೇವಾಲಯಗಳನ್ನು ಬಂದ್ ಮಾಡಿದ್ದರೆ, ಖಾಸಗಿ ದೇವಾಲಯಗಳು ಒಂದೊಂದೆ ಬಂದ್ ಮಾಡುವ ಕುರಿತು ಪ್ರಕಟಣೆಗಳು ಹೊರಬೀಳುತ್ತಿವೆ. 

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಹುಲಿಗೆಮ್ಮ ದೇವಿ, ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನ ಹಾಗೂ ಕನಕಗಿರಿಯ ಕನಕಾಚಲಪತಿ ದೇವಸ್ಥಾನಗಳ ಬಾಗಿಲು ಬಂದ್ ಮಾಡಲಾಗಿದೆ. ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 31ರ ವರೆಗೂ ದರ್ಶನಕ್ಕೆ ಅವಕಾಶ ನೀಡದೆ ಕೇವಲ ಆಂತರಿಕವಾಗಿ ಕೆಲವೊಂದು ಪೂಜೆಯನ್ನು ನಿಯಮಾನುಸಾರ ಮಾಡಲು ನಿರ್ಧರಿಸಲಾಗಿದೆ. 

ಭಯ ಬಿಡಿ, ಕೈ ತೊಳೆಯಿರಿ, #SafeHands ಚಾಲೇಂಜ್‍ಗೆ ನೀವು ರೆಡಿನಾ?

ಗವಿಮಠವೂ ಬಂದ್ ನಾಡಿನ ಪ್ರಸಿದ್ಧಮಠಗಳಲ್ಲೊಂದಾಗಿರುವ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿಯೂ ಮಾ. 21ರಿಂದ ಮಾರ್ಚ್31ರ ವರೆಗೂ ಭಕ್ತರ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಈ ನಡುವೆ ಅಮಾವಾಸ್ಯೆಯಂದು ನಡೆಯಬೇಕಾಗಿದ್ದ ಹರಕೆಯ ತೇರು, ಬೆಳಕಿನೆಡೆಗೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಅಲ್ಲದೆ ಯುಗಾದಿಯಂದು ನಡೆಯುತ್ತಿದ್ದ ಪಂಚಾಂಗ ಪಠಣ ಕಾರ್ಯಕ್ರಮವನ್ನು ಈ ವರ್ಷ ರದ್ದು ಮಾಡಲಾಗಿದೆ ಎಂದು ಗವಿಮಠ ಪ್ರಕಟಣೆಯಲ್ಲಿ ತಿಳಿಸಿದೆ. 

ಕೊರೋನಾ ಅಟ್ಟಹಾಸ: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಿಂದ ಪ್ರತಿದಿನ 1000 ರೂ.!

ಶಾಲಾ ಕಾಲೇಜುಗಳಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಜನರು ದೇವಸ್ಥಾನಗಳಿಗೆ ಸುತ್ತಾಟವನ್ನು ಹೆಚ್ಚಳ ಮಾಡಿದ್ದರು. ಅದರಲ್ಲೂ ಕೊರೋನಾ ಭೀತಿಯಿಂದ ಪಾರಾಗಲು ದೇವರ ಮೊರೆ ಹೋಗುವ ನೆಪದಲ್ಲಿ ದೇವಸ್ಥಾನಗಳಿಗೆ ಸುತ್ತಾಟ ಪ್ರಾರಂಭಿಸಿದ್ದರು. ಇದರ ಮಾಹಿತಿಯನ್ನು ಪಡೆದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿಷೇಧ ಮಾಡಲು ತೀರ್ಮಾನಿಸಲಾಯಿತು. ಈಗ ಉಳಿದಂತೆ ಇತರೆ ದೇವಾಲಯಗಳಲ್ಲಿಯೂ ಸ್ವಯಂ ಪ್ರೇರಣೆಯಿಂದ ಮಠ, ದೇವಸ್ಥಾನಗಳ ಆಡಳಿತ ಮಂಡಳಿ ಈ ಕುರಿತು ನಿರ್ಧಾರವನ್ನು ತೆಗೆದುಕೊಂಡು ದೇವಸ್ಥಾನ ಮುಂದೆ ಬೋರ್ಡ್ ನೇತು ಹಾಕಿದ್ದಾರೆ. ಈ ಮೂಲಕ ಭಕ್ತರು ಬಾರದಂತೆ ಸೂಚನೆಯನ್ನು ನೀಡಿದ್ದಾರೆ. 

36ಕ್ಕೆ ಏರಿಕೆ: 

ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ 35 ಇದ್ದ ಕೊರೋನಾ ನಿಗಾದಲ್ಲಿರುವವರ ಸಂಖ್ಯೆ ಶುಕ್ರವಾರ 36ಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಿಗೆ ಹೋಲಿಕೆ ಮಾಡಿದರೆ ನಿಗಾದಲ್ಲಿ ಇರುವವರ ಸಂಖ್ಯೆ ಏರಿಕೆಯಾಗಿರುವುದು ತೀರಾ ಕಡಿಮೆಯಾಗಿದೆ. ದಿನಕ್ಕೆ ಹತ್ತಾರು ಏರುತ್ತಿದ್ದ ಈ ನಿಗಾ ಸಂಖ್ಯೆ ಕೇವಲ ಒಂದು ಏರಿಕೆಯಾಗಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ. ಸಾವಿರಾರು ಸಂಖ್ಯೆಯಲ್ಲಿದ್ದಾರೆ ಜಿಲ್ಲೆಯವರು ವಿದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರೂ ಈಗ ಬರುವ ಉತ್ಸುಕತೆಯನ್ನು ತೋರಿದ್ದರೂ ಬರುವುದಕ್ಕೆ ನಿರ್ಬಂಧ ಹೇರಿದ್ದರಿಂದ ಅವರ್ಯಾರು ಬರದಂತೆ ಆಗಿದೆ. ಈ ಮೊದಲೇ ಬಂದವರೇ ಈಗ ನಿಗಾದಲ್ಲಿ ಇರುವುದು. ಜಿಲ್ಲೆಯಿಂದ ಹೊರಗಡೆ ಇರುವ ಯಾರು ಸಹ ಕೊರೋನಾದಿಂದ ಬಳಲುತ್ತಿರುವ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಆದರೆ, ಮರಳಿ ಜಿಲ್ಲೆಗೆ ಆಗಮಿಸುವ ಉತ್ಸುಕತೆಯಲ್ಲಿ ಇದ್ದರೂ ಅವಕಾಶ ಇಲ್ಲದಂತೆ ಆಗಿದೆ. ಮನೆಯಿಂದ ಆಚೆ ಬರದ ಜನ ಜಿಲ್ಲಾದ್ಯಂತ ಕೊರೋನಾ ಭೀತಿ ಎಷ್ಟಾಗಿದೆ ಎಂದರೆ ಜನರು ಮನೆಯಿಂದ ಆಚೆಯೇ ಆಗಮಿಸುತ್ತಿಲ್ಲ. ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಆಗಮಿಸಿ, ಮತ್ತೆ ಮನೆ ಸೇರಿಕೊಳ್ಳುತ್ತಿದ್ದಾರೆ. ಇನ್ನು ನಗರ ಪ್ರದೇಶದಲ್ಲಿದ್ದವರು ರಜೆ ದೊರೆಯುತ್ತಿದ್ದಂತೆ ತಮ್ಮೂರು ಗ್ರಾಮೀಣ ಪ್ರದೇಶಕ್ಕೆ ಹೋಗಿದ್ದಾರೆ. 

ಊರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಗರ ಪ್ರದೇಶದಲ್ಲಿ ಹೆಚ್ಚು ಜನನಿಭಿಡತೆಯಿಂದ ಸಮಸ್ಯೆಯಾಗಬಹುದು ಎಂದು ಗ್ರಾಮೀಣ ಪ್ರದೇಶದತ್ತ ಹೆಜ್ಜೆ ಹಾಕಿದ್ದಾರೆ. ಕಚೇರಿಗಳು ಖಾಲಿ ಖಾಲಿ ಕಚೇರಿಗಳು ಖಾಲಿ ಖಾಲಿ ಎನ್ನುವಂತೆ ಇವೆ. ಬಹುತೇಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಬರುತ್ತಲೇ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಭಣಭಣ ಎನ್ನುತ್ತಿದೆ. ಹಿರಿಯ ಅಧಿಕಾರಿಗಳು ಕಚೇರಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ತುರ್ತಾಗಿ ಬರಬೇಕಾಗಿದ್ದರೇ ಬಂದು ಮತ್ತೆ ಮನೆಗೆ ಹೋಗುತ್ತಿದ್ದಾರೆ.

ಬಸ್ ಸಂಚಾರ ರದ್ದು 

ಬಸ್ ಸಂಚಾರವೂ ಸಂಪೂರ್ಣ ಬಂದ್ ಆಗಲಿದೆ. ತುರ್ತು ಸೇವೆಯನ್ನು ಮಾತ್ರ ಅನಿವಾರ್ಯವಾದರೆ ಮಾತ್ರ ಮಾಡಲಾಗುತ್ತದೆ. ಭಾನುವಾರ ಜನಸಂದಣಿಯನ್ನಾಧರಿಸಿ, ಅಗತ್ಯವೇನಿಸಿದರೇ ಮಾತ್ರ ಬಸ್ ಸೇವೆ ದೊರೆಯುತ್ತದೆ. ಶನಿವಾರ ತೆರಳಿ ರಾತ್ರಿ ವಸತಿಯಾಗುತ್ತಿರುವುದನ್ನು ರದ್ದು ಮಾಡಲಾಗಿದ್ದು, ರಾತ್ರಿಯೇ ಮರಳಿ ಡೀಪೋಗೆ ಬಸ್‌ಗಳು ಬರಲಿವೆ. ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಸಂಚಾರ ಇರುವುದಿಲ್ಲ. ಆದರೆ, ರಾತ್ರಿ 9 ಗಂಟೆಯ ನಂತರ ನೋಂದಾಯಿತ ಬಸ್‌ಗಳು ಪ್ರಯಾಣಿಕರಿದ್ದರೇ ಮಾತ್ರ ಚಲಿಸುತ್ತವೆ.

click me!