ಇರುಳಿಗರು ವಾಸಿಸುತ್ತಿದ್ದ ಪ್ರದೇಶಕ್ಕೆ ತಾಲೂಕು ಅಧಿಕಾರಿಗಳ ಭೇಟಿ

By Kannadaprabha NewsFirst Published Jul 17, 2019, 8:10 AM IST
Highlights

ಮಾಗಡಿಯ ಸಾವನದುರ್ಗ ತಪ್ಪಲಿನ ಜೋಡುಗಟ್ಟೆ ಅರಣ್ಯ ಪ್ರದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇರುಳಿಗರು ವಾಸಿಸುತ್ತಿದ್ದ ಕುರುಹುಗಳು, ಕಲ್ಯಾಣಿ, ಶವವನ್ನು ಮುಚ್ಚಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಸಂಬಂಧ ಪಟ್ಟಇಲಾಖೆಗಳಿಗೆ ವರದಿ ಸಲ್ಲಿಸಿದರು.

ಬೆಂ. ಗ್ರಾಮಾಂತರ(ಜು.17) ಮಾಗಡಿ ತಾಲೂಕು ಮಟ್ಟದ ಅಧಿಕಾರಿಗಳು ಇರುಳಿಗರು ವಾಸಿಸುತ್ತಿದ್ದ ಸಾವನದುರ್ಗ ತಪ್ಪಲಿನ ಜೋಡುಗಟ್ಟೆಅರಣ್ಯ ಪ್ರದೇಶಕ್ಕೆ ಮಂಗ​ಳ​ವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಣ್ಯ ಕಾಯ್ದೆ ಉಲ್ಲಂಘಿಸಿರುವ ಪಿಡಿಒಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಹಂಚಿಕುಪ್ಪೆ ಗ್ರಾ.ಪಂ. ಮುಂಭಾಗ ಇರುಳಿಗರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ನೇತೃತ್ವದಲ್ಲಿ ಸೋಮವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಇರುಳಿಗರು ವಾಸಿಸುತ್ತಿದ್ದ ಕುರುಹುಗಳು, ಕಲ್ಯಾಣಿ, ಶವವನ್ನು ಮುಚ್ಚಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಸಂಬಂಧ ಪಟ್ಟಇಲಾಖೆಗಳಿಗೆ ವರದಿ ಸಲ್ಲಿಸಿದರು.

ಕಾಣದ ಕುರುಹುಗಳು:

ಇರುಳಿಗರು 40 ವರ್ಷದ ಹಿಂದೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಇಲ್ಲಿ 40 ವರ್ಷದಿಂದ ಬೇಸಾಯ ಹಾಗೂ ವಾಸಿಸುತ್ತಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ. ಈ ಸ್ಥಳದಲ್ಲಿ ಸ್ವಾಭಾವಿಕವಾಗಿ ಬೆಳೆದ ಗಿಡ, ಮರಗಳು ಇದ್ದು, ಇರುಳಿಗರು ವಾಸಿಸುತ್ತಿದ್ದರು ಎನ್ನಲಾದ ಭೂಮಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ವಲಯ ಅರಣ್ಯಾಧಿಕಾರಿ ತಿಳಿಸಿದರು.

ಇಂದಿಗೂ ರಸ್ತೆ, ವಿದ್ಯುತ್ ಇಲ್ಲದೆ ಬದುಕುತ್ತಿದೆ ಆದಿವಾಸಿ ಕುಟುಂಬ

ಇರುಳಿಗರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ತಲತಲಾಂತರದಿಂದ ಇರುಳಿಗರಾದ ನಾವು ಕಾಡಿನಲ್ಲಿಯೇ ವಾಸಿಸುವುದರ ಜೊತೆಗೆ ಭೂಮಿಯನ್ನು ಉಳುಮೆ ನಡೆಸಿ ಕಾಡನ್ನು ಸಂರಕ್ಷಿಸಿಕೊಂಡು ಬರುತ್ತಿದ್ದೇವೆ. ನಾವು ಕಾಡಿನಲ್ಲಿ ವಾಸಮಾಡುತ್ತಿದ್ದ ವೇಳೆ ಬದುಗಳು, ಗುಡ್ಡೆಗಳು, ಕಲ್ಲುಸೇವೆ, ಸ್ಮಶಾನದಲ್ಲಿನ ಪೂಜಾ ಸ್ಥಳಗಳು, ಶವಗಳನ್ನು ಕಲ್ಲುಗಳಲ್ಲಿಟ್ಟು ಪೂಜೆ ಮಾಡಿರುವ ಕುರುಹುಗಳು, ಕರಡಿ ಮಾರಮ್ಮನ ಗುಡ್ಡೆಯ ಹತ್ತಿರ ಇರುವ ಒಂದು ನೀರಿನ ಮಡು, ಸುಮಾರು ಅರವತ್ತು ವರ್ಷದ ಹುಣಸೆ ಮರಗಳು ಸೇರಿದಂತೆ ನೈಸರ್ಗಿಕ ಮರಗಿಡಗಳು ಇರುವ ಬಗ್ಗೆ ಸಾಕಷ್ಟುಸಾಕ್ಷಿ, ಅಧಾರಗಳಿದ್ದು ಈ ಬಗ್ಗೆ ಅಧಿಕಾರಿಗಳು ಸಂಕ್ಷಿಪ್ತವಾಗಿ ಪರಿಶೀಲಿಸಿ, ಇರುಳಿಗರ ನೇತೃತ್ವದಲ್ಲಿ ಗ್ರಾಮಸಭೆ ಮಾಡಿ ಅರಣ್ಯ ಜಮೀನು ಮಂಜೂರು ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದರು.

ಅಭಿವೃದ್ಧಿಗೆ ಮುಂದಾಗಿ:

ಜಿಲ್ಲೆಯಾದ್ಯಂತ ಇರುವ ಇರುಳಿಗ ಸಮುದಾಯ ವಾಸಿಸುತ್ತಿರುವ ದೊಡ್ಡಿಗಳಲ್ಲಿ ಇದೇ ರೀತಿ ಗ್ರಾಮಸಭೆ ನಡೆಸಿ ಕುರುಹುಗಳ ಬಗ್ಗೆ ದಾಖಲಿಸಿ ಅರಣ್ಯ ಹಕ್ಕು ಪತ್ರಗಳನ್ನು ಶೀಘ್ರವೇ ನೀಡಲು ಜಿಲ್ಲಾಡಳಿತ ಮುಂದಾಗಬೇಕು. ಸರಕಾರ ಇರುಳಿಗರ ದೊಡ್ಡಿಗಳನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದರು.

click me!