ಸೂರ್ಯಕಾಂತಿ, ಸಜ್ಜೆ ಧಾರಣೆ ಪಾತಾಳಕ್ಕೆ: ರಾಯಚೂರು ರೈತರು ಕಂಗಾಲು

By Ravi JanekalFirst Published Sep 22, 2022, 3:15 PM IST
Highlights
  • ಸೂರ್ಯಕಾಂತಿ, ಸಜ್ಜೆ ಧಾರಣೆ ಪಾತಾಳಕ್ಕೆ: ರೈತ ಕಂಗಾಲು
  • ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಒಳ ಒಪ್ಪಂದ, ಅಧಿಕಾರಿಗಳ ಸಡಿಲ ನೀತಿ
  • ಕ್ವಿಂಟಾಲ್‌ ಸೂರ್ಯಕಾಂತಿಗೆ 7500 ವರೆಗೆ ಇದ್ದ ಧಾರಣೆಯನ್ನು ದಿಢೀರ್‌ ಕಡಿಮೆ

ಲಿಂಗಸುಗೂರು (ಸೆ.22) ವ್ಯಾಪಾರಿಗಳ ಒಳ ಒಪ್ಪಂದ, ಕೃಷಿ ಉತ್ಪನ್ನ ಮಾರುಕಟ್ಟೆಅಧಿಕಾರಿಗಳ ಸಡಿಲ ನೀತಿಯಿಂದ ರೈತ ಬೆಳೆದ ಉತ್ಪನ್ನಗಳಾದ ಸೂರ್ಯಕಾಂತಿ, ಸಜ್ಜೆ ಧಾರಣೆ ದಿಢೀರ್‌ ಕುಸಿತವಾಗಿ ಸರಕು ಸಮೇತ ಮಾರುಕಟ್ಟೆಗೆ ಬಂದ ರೈತರು ಬೆಲೆ ಕುಸಿತ ಕೇಳಿ ಕಂಗಾಲಾಗಿದ್ದಾರೆ.

ಮೈದಾ, ರವೆ, ಗೋಧಿ ಹಿಟ್ಟಿನ ರಫ್ತಿಗೆ ಆ.14 ರಿಂದ ನಿರ್ಬಂಧ; ಬೆಲೆಯೇರಿಕೆಗೆ ಕಡಿವಾಣ ಬೀಳುತ್ತಾ?

ಅತಿವೃಷ್ಟಿಮಧ್ಯೆ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ, ಸೂರ್ಯಕಾಂತಿಯನ್ನು ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುತ್ತಾರೆ. ಕಳೆದೆರಡು ದಿನಗಳ ಹಿಂದೆ ಕ್ವಿಂಟಾಲ್‌ಗೆ 6500 ರಿಂದ 7500 ವರೆಗೆ ಧಾರಣೆ ಇತ್ತು. ಯಾವಾಗ ಸೂರ್ಯಕಾಂತಿ ಆವಕ ದ್ವಿಗುಣಗೊಳ್ಳುತ್ತಿದ್ದಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಒಳ ಒಪ್ಪಂದ ಮಾಡಿಕೊಂಡು ಕ್ವಿಂಟಾಲ್‌ ಸೂರ್ಯಕಾಂತಿಗೆ 7500 ವರೆಗೆ ಇದ್ದ ಧಾರಣೆಯನ್ನು ದಿಢೀರ್‌ ಕಡಿಮೆ ಮಾಡಿದ್ದಾರೆ. ಕರಡಕಲ್‌ ಅಂಗಡಿಯವರು ಕ್ವಿಂಟಾಲ್‌ಗೆ ರು. 6500ಕ್ಕೆ ಖರೀದಿ ಮಾಡುತ್ತಿದ್ದರು. ಆದರೆ, ಉಳಿದ ವ್ಯಾಪಾರಿಗಳು ಒಟ್ಟಾಗಿ ಎಲ್ಲರೂ ರು. 4500 ರಿಂದ 5500ದ ಒಳಗೆ ಖರೀದಿಸುವ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸೂರ್ಯಕಾಂತಿ ಮಾರಾಟಕ್ಕೆ ಬಂದಿದ್ದ ರೈತ ನಾಗಪ್ಪ ಗಂಭೀರ ಆರೋಪ ಮಾಡಿದರು.

ಇನ್ನೂ ಸಜ್ಜೆ ಧಾರಣೆ ಕ್ವಿಂಟಲ್‌ಗೆ ರು. 2800ರವರೆಗೂ ಇತ್ತು. ಅದು ಕೂಡಾ ಈಗ ರು. 1800ಕ್ಕೆ ಕುಸಿತವಾಗಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಉತ್ಪಾದಿಸಿದ ಉತ್ಪನ್ನಗಳಿಗೆ ಧಾರಣೆ ಇಳಿಮುಖವಾಗುತ್ತಿದ್ದು, ಹೆಚ್ಚು ಬಂಡವಾಳ ಹಾಕಿ ಕೃಷಿ ಮಾಡುವ ರೈತರಿಗೆ ಧಾರಣೆ ಕುತ್ತಿಗೆ ಕೊಯ್ದಂತಾಗಿದೆ.

ಬಿಳಿ ಚೀಟಿ ವ್ಯಾಪಾರ:

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿ ಬೆಳೆಗೆ ಬಿಳಿ ಚೀಟಿ ಬಿಲ್‌ ನೀಡುತ್ತಾರೆ. ಇದು ಗಮನಕ್ಕೆ ಇದ್ದರೂ ಎಪಿಎಂಸಿ ಅಧಿಕಾರಿಗಳ ಗಮನಿಸುವುದಿಲ್ಲ. ಇದರಿಂದ ಎಪಿಎಂಸಿ ರೈತರ ಹಿತ ಕಾಯುವ ಬದಲು ವ್ಯಾಪಾರಿ, ಅಂಗಡಿಕಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ರೈತರದ್ದಾಗಿದೆ.

ಪ್ರಧಾನಿ ಮೋದಿಗೆ ಟ್ವೀಟ್‌:

ಲಿಂಗಸುಗೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ, ಸಜ್ಜೆ ಬೆಲೆ ದಿಢೀರ್‌ ಕುಸಿತಗೊಂಡಿರುವುದಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿಯವರು ಪ್ರಧಾನಿ ಮೋದಿಯವರಿಗೆ ಟ್ವೀಟ್‌ ಮಾಡಿದ್ದು, ಖಾದ್ಯ ತೈಲ ಆಮದು ತಗ್ಗಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ತೈಲ ಖಾದ್ಯ ಬೆಳೆಗಳಿಗೆ ಉತ್ತೇಜನ ನೀಡುತ್ತಿದೆ. ಮತ್ತೊಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಲೆ ಕುಸಿದ ರೈತರು ಕಂಗಾಲಾಗಿದ್ದಾರೆ. ಹೂಡಿದ ಬಂಡವಾಳಬಾರದು ಸಾಳ ತೀರದು, ಬೆವರು ಸುರಿಸಿ ಬೆಳೆದ ಸೂರ್ಯಕಾಂತಿಗೆ ನ್ಯಾಯ ಸಮ್ಮತ ಬೆಲೆ ನೀಡಿರಿ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಜೊತೆಗೆ ಸೂರ್ಯಕಾಂತಿ ಬೆಲೆ ಕುಸಿತದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಧಾರಣೆ ಕುಸಿತ ಧ್ವನಿ ಮೊಳಗುವಂತೆ ಮಾಡಿದ್ದು ಎಂಎಲ್‌ಸಿ ಶರಣಗೌಡ ಬಯ್ಯಾಪುರ ಕೆಳನೆಯಲ್ಲಿ ಬೆಲೆ ಕುಸಿತದ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ.

ಖಾದ್ಯ ತೈಲದ ಮೇಲೆ ಆಮದು ಸುಂಕ ರಿಯಾಯಿತಿ, ಮತ್ತೆ 6 ತಿಂಗಳು ವಿಸ್ತರಿಸಿದ ಕೇಂದ್ರ ಸರ್ಕಾರ!

ವಿಪರೀತ ಮಳೆಯಿಂದ ಸೂರ್ಯಕಾಂತಿ ಇಳುವರಿ ಕುಸಿತಗೊಂಡಿದೆ. ಅತಿವೃಷ್ಟಿಮಧ್ಯೆ ಬೆಳೆದ ಉತ್ಪನ್ನ ರಾಶಿ ಮಾಡಿ ಮಾರಾಟಕ್ಕೆ ತಂದಿದ್ದೇವೆ. ಆದರೆ, ಬೆಲೆ ದಿಢೀರ್‌ ಕುಸಿತಗೊಂಡಿದ್ದು ಹೂಡಿದ ಬಂಡವಾಳವು ದಕ್ಕುದಂತಾಗಿದೆ. ಸೂಕ್ತ ಬೆಲೆ ನೀಡಬೇಕು.

-ಶರಣಪ್ಪ ಉದ್ಬಾಳ ಎಐಡಿವೈಓ ಮುಖಂಡ, ಲಿಂಗಸುಗೂರು.

‘ಮೀಟಿಂಗ್‌ನಲ್ಲಿ ಇದ್ದು ಲಿಂಗಸುಗೂರು ಎಪಿಎಂಸಿಗೆ ಸೂರ್ಯಕಾಂತಿ ಎಷ್ಟುಅವಕ, ಧಾರಣೆ ಬಗ್ಗೆ ಮಾಹಿತಿ ಇಲ್ಲಾ. ಅಲ್ಲಿನ ಸಿಬ್ಬಂದಿಯನ್ನು ಕೇಳಿ ಮಾಹಿತಿ ಪಡೆಯಿರಿ’.

- ಬಿ.ಕೃಷ್ಣಾ ಪಿಎಂಸಿ ಕಾರ್ಯದರ್ಶಿ, ಎಪಿಎಂಸಿ ಲಿಂಗಸುಗೂರು.

click me!