ಪಾರ್ಶ್ವ ವಾಯು ಪೀಡಿತ ಕೆಇಎಸ್ ಅಧಿಕಾರಿಗೆ ಸ್ವಯಂ ನಿವೃತ್ತಿ ಆದೇಶ!

Kannadaprabha News   | Asianet News
Published : Sep 11, 2020, 08:39 AM IST
ಪಾರ್ಶ್ವ ವಾಯು ಪೀಡಿತ ಕೆಇಎಸ್ ಅಧಿಕಾರಿಗೆ ಸ್ವಯಂ ನಿವೃತ್ತಿ ಆದೇಶ!

ಸಾರಾಂಶ

ಪಾರ್ಶ್ವವಾಯು ಪೀಡಿತ ಅಧಿಕಾರಿಗೆ ಸ್ವಯಂ ನಿವೃತ್ತಿಗೆ ಅವಕಾಶ ನಿಡಲಾಗಿದೆ. ಸಚಿವ ಎಸ್‌. ಸುರೇಶಕುಮಾರ ಮಾನವೀಯತೆಯ ದೃಷ್ಟಿಯಿಂದ ಸ್ವಯಂ ನಿವೃತ್ತಿಯ ಆದೇಶವನ್ನು ಹಸ್ತಾಂತರಿಸಿದರು.

ಧಾರವಾಡ (ಸೆ.11):  ಕಳೆದ ಐದು ವರ್ಷಗಳ ಹಿಂದೆ ಪಾಶ್ರ್ವವಾಯು ಪೀಡಿತರಾಗಿ ಸಂಪೂರ್ಣ ಅಂಗವೈಕಲ್ಯದಿಂದ ಹಾಸಿಗೆ ಹಿಡಿದಿರುವ ಕೆಇಎಸ್‌ ಅಧಿಕಾರಿ, ಬೆಳಗಾವಿ ಡಯಟ್‌ ಹಿರಿಯ ಉಪನ್ಯಾಸಕ ಮಹಾದೇವ ಮಾಳಗಿ ಅವರಿಗೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಮಾನವೀಯತೆಯ ದೃಷ್ಟಿಯಿಂದ ಸ್ವಯಂ ನಿವೃತ್ತಿಯ ಆದೇಶವನ್ನು ಹಸ್ತಾಂತರಿಸಿದರು.

ಇಲ್ಲಿನ ನಿಸರ್ಗ ಲೇಔಟ್‌ನ ಮಹಾದೇವ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಸಚಿವರು, ಯೋಗಕ್ಷೇಮ ವಿಚಾರಿಸಿ ಅವರ ಕುಟುಂಬದ ಸಂಕಷ್ಟವನ್ನು ಆಲಿಸಿದರು. ಅವರ ದೈಹಿಕ ಸಾಮರ್ಥ್ಯ ಇಲ್ಲದಿರುವುದನ್ನು ಪರಿಗಣಿಸಿ ಸರ್ಕಾರ ಸ್ವಯಂ ನಿವೃತ್ತಿ ಆದೇಶ ನೀಡಿದೆ. ಇದರಿಂದ ಅವರಿಗೆ ನಿವೃತ್ತಿ ನಂತರದ ಎಲ್ಲ ಸೌಲಭ್ಯಗಳು ದೊರೆಯಲಿವೆ. ಜತೆಗೆ ಅನುಕಂಪ ಆಧಾರಿತ ನೌಕರಿಗೆ ಮನವಿ ಮಾಡಿದ್ದು, ಇದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಬೇಕಾದ ವಿಷಯವಾಗಿರುವುದರಿಂದ ಮುಂಬರುವ ದಿನಗಳಲ್ಲಿ ವಿಷಯವನ್ನು ಸಭೆಗೆ ಮಂಡಿಸಲು ತಮ್ಮ ಶಕ್ತಿಮೀರಿದ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿಗಳು ಈ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ಸಚಿವರು ಅವರ ಕುಟುಂಬಕ್ಕೆ ಸ್ಪಷ್ಟಪಡಿಸಿದರು.

9 ರಿಂದ 12 ನೇ ತರಗತಿಗೆ ಶಿಕ್ಷಕರ ಮಾರ್ಗದರ್ಶನಕ್ಕೆ ಅವಕಾಶ: ಸಚಿವ ಸುರೇಶ್‌ ಕುಮಾರ್‌ ...

ಐದು ವರ್ಷಗಳಿಂದ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದೇವೆ. ಆಸ್ಪತ್ರೆಗೆ ಅಲೆದಾಡಿ ಕೈಯಲ್ಲಿದ್ದ ಎಲ್ಲ ಹಣ ಕಳೆದುಕೊಂಡಿದ್ದು ಸರ್ಕಾರದಿಂದ ಚಿಕಿತ್ಸಾ ವೆಚ್ಚ ಸಹ ಬಂದಿಲ್ಲ. ತವರು ಮನೆಯಲ್ಲಿ ವಾಸವಾಗಿದ್ದು ಇಬ್ಬರು ಹೆಣ್ಣು ಮಕ್ಕಳ ಭವಿಷ್ಯವೂ ಕತ್ತಲಲ್ಲಿದೆ. ದಯವಿಟ್ಟು ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡಿ. 2015ರಿಂದ ನಿವೃತ್ತಿ ವರೆಗಿನ ಹಿಂಬಾಕಿ ಹಾಗೂ ಕೆಸಿಎಸ್‌ಆರ್‌ ನಿಯಮಾವಳಿ ಪ್ರಕಾರ ಅವರಿಗೆ ಸಿಗಬೇಕಾದ ಎಲ್ಲ ಆರ್ಥಿಕ ಸೌಲಭ್ಯಗಳನ್ನು ದೊರೆಯುವಂತೆ ಮಹಾದೇವ ಅವರ ಪತ್ನಿ ಪ್ರಭಾವತಿ ಹಾಗೂ ಮಕ್ಕಳಾದ ಸಮೀಕ್ಷಾ, ಸಂಪದಾ ಸಚಿವರಲ್ಲಿ ಕಣ್ಣೀರು ಸುರಿಸುತ್ತಾ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವ ಸುರೇಶಕುಮಾರ, 1999 ಬ್ಯಾಚಿನ ಕೆಇಎಸ್‌ ಅಧಿಕಾರಿಯಾಗಿರುವ ಮಹದೇವ ಮಾಳಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ, ಕ್ಷೇತ್ರ ಶಿಕ್ಷಣಾಧಿಕಾರಿ, ಡಯಟ್‌ ಹಿರಿಯ ಉಪನ್ಯಾಸಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ಕಳೆದ ಐದು ವರ್ಷಗಳಿಂದ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿರುವ ವಿಷಯ ತಿಳಿಯಿತು. ಸರ್ಕಾರ ಅವರಿಗೆ ಈಗ ಸ್ವಯಂ ನಿವೃತ್ತಿ ನೀಡಿದೆ. ಅವರಿಗೆ ಈಗ ಶೇ. 40ರಷ್ಟುನ್ಯಾಯ ದೊರಕಿದ್ದು ಮುಖ್ಯಮಂತ್ರಿಗಳ ಮೂಲಕ ಸಂಪೂರ್ಣ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ, ತಾವು ವೈದ್ಯಕೀಯ ಖರ್ಚ-ವೆಚ್ಚಗಳ ಪಟ್ಟಿಯನ್ನು ನೀಡಿದರೆ ಸರ್ಕಾರದಿಂದ ಪಾವತಿಸಲು ಪ್ರಯತ್ನಿಸುತ್ತೇನೆ ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ವಿ. ಸಂಕನೂರ, ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಮೋಹನಕುಮಾರ್‌ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಉಮೇಶ್‌ ಬೊಮ್ಮಕ್ಕನವರ ಇದ್ದರು.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!