BSY ನಡೆಸಿಕೊಳ್ಳುವ ರೀತಿಗೆ ಅಸಮಾಧಾನ : ರಾಜೀನಾಮೆ ಕಾರಣ ಹೇಳಿದ ಮುಖಂಡ

By Kannadaprabha NewsFirst Published Sep 29, 2021, 8:48 AM IST
Highlights
  • ನಾನು ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ
  • ಇನ್ನು ಮುಂದೆ ಜಿಲ್ಲಾ ಬಿಜೆಪಿ ಸಂಘಟನೆಯಲ್ಲಿ ನನ್ನ ಪಾತ್ರ ಇರುವುದಿಲ್ಲ. ನಾನು ಯಾವುದೇ ಚಟುವಟಿಕೆಯಲ್ಲೂ ಭಾಗವಹಿಸುವುದಿಲ್ಲ

 ಬೆಂಗಳೂರು (ಸೆ.29):  ನಾನು ಬಿಜೆಪಿ (BJP) ತುಮಕೂರು (Tumakuru) ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇನ್ನು ಮುಂದೆ ಜಿಲ್ಲಾ ಬಿಜೆಪಿ ಸಂಘಟನೆಯಲ್ಲಿ ನನ್ನ ಪಾತ್ರ ಇರುವುದಿಲ್ಲ. ನಾನು ಯಾವುದೇ ಚಟುವಟಿಕೆಯಲ್ಲೂ ಭಾಗವಹಿಸುವುದಿಲ್ಲ ಎಂದು ಸುರೇಶ್‌ಗೌಡ (Suresh Gowda)  ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಟ್ಟಿದವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ನೋಡುತ್ತಿದ್ದೇವೆ. ದಂಡನಾಯಕ ಇಲ್ಲದಿದ್ದರೆ ಯುದ್ಧ ಮಾಡುವವರು ಯಾರು? ಬಸವರಾಜ ಬೊಮ್ಮಾಯಿ (Basavaraja Bommai) ಅವರು ಉತ್ತಮ ನಾಯಕರೇ. ಆದರೆ, ಯಡಿಯೂರಪ್ಪ (BS Yediyurappa) ಅವರು ಪಕ್ಷ ಸಂಘಟನೆ ಮಾಡಿರುವುದನ್ನು ಗೌರವಿಸಬೇಕಲ್ಲವೇ ಎಂದು ಹೇಳಿದ್ದಾರೆ. ಈ ಮೂಲಕ ಬಿ.ಎಸ್‌. ಯಡಿಯೂರಪ್ಪ ಹಾಗೂ ಯಡಿಯೂರಪ್ಪ ಬೆಂಬಲಿಗರನ್ನು ಪಕ್ಷ ನಡೆಸಿಕೊಳ್ಳುತ್ತಿರುವುದಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ದಿಢೀರ್‌ ರಾಜೀನಾಮೆ

ನಾನು ಏಕೆ ರಾಜೀನಾಮೆ ನೀಡಿದ್ದೇನೆ ಎಂಬುದನ್ನು ಪಕ್ಷವನ್ನೇ ಕೇಳಿ ಎಂದಿರುವ ಅವರು, ತುಮಕೂರು ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ (Loksabha Election) ಕಾಂಗ್ರೆಸ್‌, ಜೆಡಿಎಸ್‌ ಎರಡೂ ಪಕ್ಷ ಒಂದಾದರೂ ಎಚ್‌.ಡಿ. ದೇವೇಗೌಡರ ವಿರುದ್ಧ ಪಕ್ಷವನ್ನು ಗೆಲ್ಲಿಸಿದ್ದೇನೆ. ನಮ್ಮ ತಂದೆ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಬಿಟ್ಟು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಹೋಗಿದ್ದೆ. ನಮ್ಮ ಕ್ಷೇತ್ರದ ಏಳು ಜಿ.ಪಂ. ಕ್ಷೇತ್ರಗಳಲ್ಲಿ ಏಳನ್ನೂ ಗೆದ್ದಿದ್ದೆ. ಕೇವಲ ಯಡಿಯೂರಪ್ಪ ಅವರ ಮಾತಿಗಾಗಿ ಇಷ್ಟೆಲ್ಲಾ ಮಾಡಿದ್ದೇನೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಹೋಗಲ್ಲ:  ನಾನು ಎಬಿವಿಪಿಯಿಂದ ಬೆಳೆದು ಬಂದವನು. ಎಂ.ಕೆ. ಶ್ರೀಧರ್‌, ದತ್ತಾತ್ರೇಯ ಹೊಸಬಾಳೆ ಅವರು ನನ್ನನ್ನು ಬಿಜೆಪಿಗೆ ಕರೆತಂದವರು. ಜೀವರಾಜ್‌ ಆಳ್ವ, ರಾಮಕೃಷ್ಣ ಹೆಗಡೆ ಅವರ ಬಳಿಕ ಕಾಂಗ್ರೆಸ್‌ ಎಂಬ ಕಲ್ಪನೆಯೇ ನಮಗೆ ಇಲ್ಲ. ಕಾಂಗ್ರೆಸ್‌ ಸೇರುವಂತಹ ತಪ್ಪು ನಿರ್ಧಾರಗಳು ನನ್ನ ಜೀವನದಲ್ಲಿ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕೈ ಸೇರಬಹುದು 

ತುಮಕೂರು (Tumakuru) ಜಿಲ್ಲಾ ಬಿಜೆಪಿ (BJP) ಅಧ್ಯಕ್ಷ ಸುರೇಶ್‌ಗೌಡ (Suresh Gowda) ಅವರು ಕಾಂಗ್ರೆಸ್‌ ಮುಖಂಡರ ಜೊತೆ ಮಾತುಕತೆ ನಡೆಸಿರಬಹುದು ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ (KN Rajanna) ಹೇಳಿದ್ದಾರೆ. 

ಕಾಂಗ್ರೆಸ್‌ ವರಿಷ್ಠರನ್ನು ಸುರೇಶಗೌಡರು ಭೇಟಿ ಮಾಡಿರಬಹುದು ಎಂಬ ಸಂಶಯ ನನಗಿದೆ. ಆದರೆ ಕರಾರುವಕ್ಕಾಗಿ ಹೇಳುವುದಕ್ಕಾಗುವುದಿಲ್ಲ. ಸುರೇಶ ಗೌಡರಿಗೆ ಅವರದ್ದೇ ಆದ ತೇಜಸ್ಸು ಇದೆ. ಕ್ಷೇತ್ರದ ಜನತೆ ಜೊತೆ ಹೆಚ್ಚಿನ ಕಾಲ ಕಳೆಯಬೇಕೆಂದು ಕಾರಣ ಕೊಟ್ಟಿದ್ದಾರೆ. ಆದರೆ ಕೇವಲ ಅಷ್ಟೇ ಅಲ್ಲದೇ ಅವರ ರಾಜೀನಾಮೆಗೆ (Resignation) ಬೇರೆ ಬೇರೆ ಕಾರಣ ಇರಬಹುದು ಎಂದರು. ನಾವು ವಾರದಲ್ಲಿ ಮೂರು ನಾಲ್ಕು ಬಾರಿ ಫೋನ್‌ ಮಾಡುತ್ತಿದ್ದೆವು.

 ಅಲ್ಲದೇ ಬೆಂಗಳೂರಿನ (Bengaluru) ಸದಾಶಿವನಗರದ ಕಾಫಿ ಡೇನಲ್ಲಿ ಭೇಟಿ ಮಾಡುತ್ತಿರುತ್ತೇವೆ. ಅವರು ಕಾಂಗ್ರೆಸ್‌ಗೆ ಬರುವ ಬಗ್ಗೆ ಒಂದು ವರ್ಷದ ಹಿಂದೆಯೇ ನಾನು ಹೇಳಿದ್ದೆ. ಅದು ಈಗೀಗ ಸತ್ಯ ಆಗುತ್ತಿದೆ ಎಂದರು.

click me!