ತತ್ತರಿಸಿದ ಉತ್ತರಕರ್ನಾಟಕಕ್ಕೆ ಸುಧಾಮೂರ್ತಿ 10 ಕೋಟಿ ರು ನೆರವು

By Web DeskFirst Published Aug 8, 2019, 6:33 PM IST
Highlights

ಕನ್ನಡಿಗರ ಹೆಮ್ಮೆಯ ಸಾಧಕರರು, ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುತ್ತ ಜೀವಿಸುತ್ತಿರುವ ರೀತಿ ಪ್ರತಿಯೊಬ್ಬರಿಗೂ ಪ್ರೇರಣೆ. ಇದೀಗ ಇನ್ಫೋಸಿಸ್ ಸುಧಾ ಮೂರ್ತಿ ಹೃದಯ ಉತ್ತರ ಕರ್ನಾಟಕದ ಕಣ್ಣೀರಿಗೆ ಮಿಡಿದಿದ್ದು,  ತಮ್ಮ ಇನ್‍ಫೋಸಿಸ್ ಫೌಂಡೇಶನ್ ನಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ 10 ಕೋಟಿ ರೂಪಾಯಿ ನೆರವು ನೀಡಿದ್ದಾರೆ.

ಬೆಂಗಳೂರು, (ಆ.08): ಇನ್‍ಫೋಸಿಸ್‍ನ ಅಂಗಸಂಸ್ಥೆಯಾಗಿರುವ ಸ್ವಯಂ ಸೇವಾ ಸಂಸ್ಥೆಯಾದ ಇನ್‍ಫೋಸಿಸ್ ಫೌಂಡೇಶನ್ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ.

ಈಗಾಗಲೇ ರಾಯಚೂರು, ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಫೌಂಡೇಶನ್ ಪರಿಹಾರ ಕಾರ್ಯಗಳನ್ನು ಆರಂಭಿಸಿದ್ದು, ಉಳಿದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತನ್ನ ಜಾಲಗಳು ಮತ್ತು ಸ್ವಯಂಸೇವಕರೊಂದಿಗೆ ಹಂತಹಂತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿದೆ. 

ಮುನಿದ ವರುಣರಾಯ, ಪ್ರವಾಹಕ್ಕೆ ಜನ ತತ್ತರ, ನೆರವಿಗೆ ಧಾವಿಸಿದ ಸಿನಿ ತಾರೆಯರು

ಕುಡಿಯುವ ನೀರು, ಆಹಾರ ಉತ್ಪನ್ನಗಳು, ಬಟ್ಟೆ ಮತ್ತು ವೈದ್ಯಕೀಯ ಕಿಟ್‍ಗಳು ಸೇರಿದಂತೆ ಪ್ರವಾಹಪೀಡಿತ ಪ್ರದೇಶಗಳ ಜನರ ಅಗತ್ಯ ವಸ್ತುಗಳನ್ನು ವಿತರಣೆ ಕಾರ್ಯವನ್ನು ಫೌಂಡೇಶನ್ ಈಗಾಗಲೇ ಆರಂಭಿಸಿದೆ.

ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅನಾಹುತಗಳು ಸಂಭವಿಸಿದ್ದು, ರಸ್ತೆ, ರೈಲು ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೌಂಡೇಶನ್ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಅಗತ್ಯ ಇರುವೆಡೆ ಪರಿಹಾರ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್‍ಫೋಸಿಸ್ ಫೌಂಡೇಶನ್ ಪ್ರಕೃತಿ ವಿಕೋಪಗಳಿಗೆ ತುತ್ತಾದ ಜನರಿಗೆ ನೆರವಾಗುತ್ತಾ ಬಂದಿದೆ. ಇತ್ತೀಚೆಗೆ ಒಡಿಶಾದಲ್ಲಿ ಸೈಕ್ಲೋನ್‍ನಿಂದ ಉಂಟಾದ ಅನಾಹುತಗಳಿಗೆ ತುತ್ತಾದ ಜನರಿಗೆ ಫೌಂಡೇಶನ್ ನೆರವಾಗಿತ್ತು. 

ಇದಲ್ಲದೇ, ಕಳೆದ ವರ್ಷ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ನೆರವಿನ ಹಸ್ತ ಚಾಚಿತ್ತು.

click me!