ಚರಂಡಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು: ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ

By Web DeskFirst Published Sep 30, 2019, 10:37 AM IST
Highlights

ಮಳೆಗೆ ತುಂಬಿದ ಚರಂಡಿ, ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು| ಕೂಡ್ಲಿಗಿ ತಾಲೂಕು ಚೌಡಾಪುರ ನಿವಾಸಿಗಳ ಪರದಾಟ| ಗ್ರಾಮದ ಅಂಬೇಡ್ಕರ್‌ ನಗರ ಹಾಗೂ ವಾಲ್ಮೀಕಿ ನಗರದ ಮನೆಗಳಿಗೆ ನುಗ್ಗಿದ  ಚರಂಡಿ ನೀರು| ಕೆಲವು ಕುಟುಂಬದವರು ರಾತ್ರಿ ಪೂರ್ತಿ ನೀರಿನಲ್ಲೇ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು| ತ್ಯಾಜ್ಯಗಳಿಂದ ತುಂಬಿ ಚರಂಡಿ ಕಟ್ಟಿ ಹೋಗಿದ್ದರಿಂದ ಈ ಸ್ಥಿತಿ ನಿರ್ಮಾಣ|  ಬಡಾವಣೆಯ ಮಕ್ಕಳು, ಯುವಕರು ಚರಂಡಿ ಸ್ವಚ್ಛಗೊಳಿಸಿದರು| 

ಕೂಡ್ಲಿಗಿ(ಸೆ.30): ಶನಿವಾರ ತಡರಾತ್ರಿ ಸುರಿದ ಮಳೆಗೆ ತಾಲೂಕಿನ ಚೌಡಾಪುರ ಗ್ರಾಮದ ಅಂಬೇಡ್ಕರ್‌ ನಗರ ಹಾಗೂ ವಾಲ್ಮೀಕಿ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಹೀಗಾಗಿ ಕೆಲವು ಕುಟುಂಬದವರು ರಾತ್ರಿ ಪೂರ್ತಿ ನೀರಿನಲ್ಲೇ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. 

ತ್ಯಾಜ್ಯಗಳಿಂದ ತುಂಬಿ ಚರಂಡಿ ಕಟ್ಟಿ ಹೋಗಿದ್ದರಿಂದ ಈ ಸ್ಥಿತಿ ನಿರ್ಮಾಣವಾಯಿತು. ಭಾನುವಾರ ಬೆಳಗ್ಗೆ ಈ ಬಡಾವಣೆಯ ಮಕ್ಕಳು, ಯುವಕರು ಚರಂಡಿ ಸ್ವಚ್ಛಗೊಳಿಸಿದರು. ಚೌಡಾಪುರ ಗ್ರಾಮದ ಐಟಿಐ ಓದುತ್ತಿರುವ ವಿದ್ಯಾರ್ಥಿ ಕೊಟ್ರೇಶ್‌, 4ನೇ ತರಗತಿ ಓದುವ ಬಾಲಕ ವಿಜಯಕುಮಾರ್‌ ಸ್ವಪ್ರೇರಣೆಯಿಂದ ಚರಂಡಿ ಸ್ವಚ್ಛತೆ ಕಾರ್ಯ ಆರಂಭಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬಳ್ಳಾರಿ ಜಿಲ್ಲಾ ಅಂಬೇಡ್ಕರ್‌ ಯುವ ಸೇನೆಯ ಜಿಲ್ಲಾಧ್ಯಕ್ಷ ಪಿ. ಸಂತೋಷ್‌ಕುಮಾರ್‌ ಅವರು ಸ್ಥಳೀಯ ಆಡಳಿತ ನಿರ್ಲಕ್ಷ್ಯ ಖಂಡಿಸಿದರು. ಚೌಡಾಪುರ ಗ್ರಾಮದ ಎಸ್‌ಸಿ ಮತ್ತು ಎಸ್‌ಟಿ ಕಾಲನಿಗಳಲ್ಲಿ ಚರಂಡಿಗಳು ತುಂಬಿದೆ. ಮಳೆ ನೀರು ಮನೆ ಸೇರಿದೆ. ವಿದ್ಯಾರ್ಥಿಗಳೇ ಚರಂಡಿ ಸ್ವಚ್ಛಮಾಡುವ ದುಸ್ಥಿತಿ ಬಂದಿದೆ ಎಂದರೆ ಸ್ಥಳೀಯ ಆಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಕುರಿತು ಬಡಾವಣೆ ನಿವಾಸಿಗಳೂ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಕೂಡ್ಲಿಗಿ ತಾಪಂ ಇಒ ಬಸಣ್ಣ ಅವರು, ಚೌಡಾಪುರ ಗ್ರಾಮದಲ್ಲಿ ಚರಂಡಿ ತುಂಬಿ ನೀರು ಮನೆಗಳಿಗೆ ನುಗ್ಗಿರುವ ಬಗ್ಗೆ ಅಲ್ಲಿಯ ಗ್ರಾಮಸ್ಥರ ಮೂಲಕ ನನಗೆ ತಿಳಿದು ಬಂದಿದೆ. ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಊರ ನೀರು ಕಟ್ಟೆಯೊಂದಕ್ಕೆ ಸೇರುತ್ತದೆ, ಕಟ್ಟೆಗೆ ನೀರು ಹೋಗದಂತೆ ಅಲ್ಲಲ್ಲಿ ಕಸ ಕಟ್ಟಿದೆ. ಹೀಗಾಗಿ ನೀರು ಚರಂಡಿ ತುಂಬಿ ಮನೆಗೆ ನುಗ್ಗಿದೆ. ನೀರು ಸಲೀಸಾಗಿ ಕಟ್ಟೆಗೆ ಹೋಗಲು ವ್ಯವಸ್ಥೆ ಮಾಡಲಾಗುವುದು. ಆನಂತರ ಕಟ್ಟೆಯ ನೀರನ್ನು ಹೊರಗಡೆ ಬಿಡಲು ಸಹ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಇದೆ ವೇಳೆ ಮಾತನಾಡಿದ ಚೌಡಾಪುರ ಗ್ರಾಮದ ಹಿರಿಯ ಮಹಿಳೆ ಚೌಡಮ್ಮ ಅವರು, ನಮ್ಮೂರಲ್ಲಿ ಚರಂಡಿ ಚಿಕ್ಕದಾಗಿರುವುದರಿಂದ ನೀರು ಬಹಳ ಬಂದಾಗ ಮನೆಯೊಳಕ್ಕೆ ನುಗ್ತಾವೆ, ಚರಂಡಿ ಕ್ಲೀನ್‌ ಮಾಡಿ ಮೂರು ವರ್ಷ ಆಗಿದೆ. ಚರಂಡಿಯಲ್ಲಿ ಗಟ್ಟಿಯಾದ ತ್ಯಾಜ್ಯ ಇರುವುದರಿಂದ ನೀರು ಸರಾಗವಾಗಿ ಹೋಗುತ್ತಿಲ್ಲ. ಅಧಿಕಾರಿಗಳು ಈ ಕಡೆ ಸುಳಿದಿಲ್ಲ ಎಂದು ಹೇಳಿದ್ದಾರೆ. 
 

click me!