Panchamasali Reservation: 2ಎ ಮೀಸಲು ಸೌಲಭ್ಯ ಸಿಗೋವರೆಗೂ ಹೋರಾಟ: ಕೂಡಲ ಶ್ರೀ

By Kannadaprabha NewsFirst Published Dec 31, 2021, 12:45 PM IST
Highlights

*   ಕಣಿವೆಮನೆಯಲ್ಲಿ 4ನೇ ಹಂತದ ಪ್ರತಿಜ್ಞಾ ಪಂಚಾಯತ್‌, ಗುರುವಂದನಾ ಕಾರ್ಯಕ್ರಮ
*   ನಂಬಿಕೆ ಮೇರೆಗೆ ಹೋರಾಟಕ್ಕೆ ತೀವ್ರ ಸ್ವರೂಪವನ್ನು ನೀಡಿಲ್ಲ
*   ಪಂಚಮಸಾಲಿ ಸಮುದಾಯ ನಿರ್ಲಕ್ಷಿಸಿದ ರಾಜಕೀಯ ಪಕ್ಷಗಳಿಗೆ ಹೊಡೆತ ನಿಶ್ಚಿತ

ಶಿಕಾರಿಪುರ(ಡಿ.31):  ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ಉದ್ಯೋಗ ಗಳಿಸಲು ಮೀಸಲಾತಿ ಅನಿವಾರ್ಯವಾಗಿದೆ. ಸಮುದಾಯಕ್ಕೆ ಸರ್ಕಾರದಿಂದ 2ಎ ಮೀಸಲಾತಿ(2A Reservation)  ದೊರೆಯುವವರೆಗೂ ಹೋರಾಟ ಪ್ರತಿಭಟನೆ ಅಂತ್ಯಗೊಳ್ಳದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು(Jayamrutunjaya Swamiji) ಘೋಷಿಸಿದರು.

ತಾಲೂಕಿನ ಕಣಿವೆಮನೆ ಗ್ರಾಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಬುಧವಾರ ನಡೆದ 4ನೇ ಹಂತದ ಪ್ರತಿಜ್ಞಾ ಪಂಚಾಯತ್‌, ಪಂಚಮಸಾಲಿ ದೀಕ್ಷ ಗೌಡ ಮತ್ತು ಮಲ್ಲವ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗೆ ಜಾಗೃತಿ ಕಾರ್ಯಕ್ರಮ ಮತ್ತು ನಿವೃತ್ತ ಸೈನಿಕರು, ಗಣ್ಯವ್ಯಕ್ತಿಗಳಿಗೆ ಸನ್ಮಾನ ಹಾಗೂ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವದಿಸಿದರು.

Panchamasali: ಸಿಎಂ ಆಗಿರುವವರೆಗೂ ಬೊಮ್ಮಾಯಿಗೆ ಬೆಂಬಲ: ಕೂಡಲ ಶ್ರೀ

ಯಡಿಯೂರಪ್ಪ(BS Yediyurappa) ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪಂಚಮಸಾಲಿ ಸಮಾಜಕ್ಕೆ(Panchamasali Community) ಮೀಸಲಾತಿ ದೊರೆಯುವ ಬಹುದೊಡ್ಡ ವಿಶ್ವಾಸ ಈಡೇರಿಲ್ಲ. ಮೀಸಲಾತಿ ಕಲ್ಪಿಸಲು ಅಡ್ಡವಾದ ತೊಂದರೆ, ಒತ್ತಡಗಳು ಗೊತ್ತಿಲ್ಲ ಎಂದ ಅವರು, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮೀಸಲಾತಿ ಕಲ್ಪಿಸಿಕೊಡುವ ಬಗ್ಗೆ ಎಲ್ಲ ರೀತಿಯ ಭರವಸೆ ನೀಡಿದ್ದಾರೆ. ಈ ನಂಬಿಕೆ ಮೇರೆಗೆ ಹೋರಾಟಕ್ಕೆ ತೀವ್ರ ಸ್ವರೂಪವನ್ನು ನೀಡಿಲ್ಲ. ಶಾಂತ ರೀತಿಯಲ್ಲಿ ಸರ್ಕಾರಕ್ಕೆ ಬೇಡಿಕೆಯನ್ನು ಈಡೇರಿಸುವಂತೆ ಒತ್ತಡ ತರುತ್ತಿದ್ದೇವೆ. ಮೀಸಲಾತಿ ಕಲ್ಪಿಸುವ ಮುಖ್ಯಮಂತ್ರಿ ಭರವಸೆ ಹುಸಿಯಾದಲ್ಲಿ ಹೋರಾಟಕ್ಕೆ ತೀವ್ರ ಸ್ಪರೂಪ ನೀಡಲಾಗುವುದು ಎಂದು ಎಚ್ಚರಿಸಿದರು.

ಹರಿಹರದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ಪಂಚಮಸಾಲಿ ಸಮುದಾಯ ನಿರ್ಲಕ್ಷಿಸಿದ ರಾಜಕೀಯ ಪಕ್ಷಗಳಿಗೆ(Political Parties) ಹೊಡೆತ ನಿಶ್ಚಿತವಾಗಿದೆ. ಸಮುದಾಯದ ಒಳಿತಿನ ಪ್ರಶ್ನೆ ಉದ್ಭವಿಸಿದಾಗ ರಾಜಕೀಯ(Politics) ಪಕ್ಕಕ್ಕಿಟ್ಟು ಸ್ವಾಮೀಜಿ ಹಾಗೂ ಸಮಾಜದ ಜತೆಗೆ ಇರುವುದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾರುದ್ರಪ್ಪ ಅಂಗಡಿ ವಹಿಸಿ ಮಾತನಾಡಿದರು. ನಿವೃತ್ತ ಯೋಧರು, ಹುತಾತ್ಮ ಯೋಧರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ನಿವೃತ್ತ ಕೆಎಎಸ್‌ ಅಧಿಕಾರಿ ಎಚ್‌.ಟಿ. ಬಳಿಗಾರ್‌, ಪುರಸಭಾ ಸದಸ್ಯ ನಾಗರಾಜಗೌಡ, ಸಾಗರ ತಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಪಿ. ವಿಜಯಕುಮಾರ್‌, ಮಾಜಿ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ, ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ಮಾಲತೇಶ್‌, ನಿವೃತ್ತ ಡಿವೈಎಸ್‌ಪಿ ಶಿವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪಂಚಮಸಾಲಿಗೆ 2ಎ ಮೀಸಲು ನೀಡುವವರೆಗೂ ಹೋರಾಟ

ಶಿವಮೊಗ್ಗ(Shivamogga): ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

Resarvation For Panchamasali : ಪಂಚಮಸಾಲಿ ಮೀಸಲು ಬಗ್ಗೆ ಒಳ್ಳೆ ನಿರ್ಧಾರ: ಸಿಎಂ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ‘2ಎ’ಗೆ ಸೇರಿಸುವಂತೆ ಕಳೆದೊಂದು ವರ್ಷದಿಂದ ಹೋರಾಟವನ್ನು ಮಾಡುತ್ತಲೇ ಬಂದಿದ್ದೇವೆ. ಸರ್ಕಾರ ಕೇವಲ ಭರವಸೆ ನೀಡುತ್ತದೆ. ಆದರೆ, ಕಾರ್ಯರೂಪಕ್ಕೆ ಮಾತ್ರ ತಂದಿಲ್ಲ. ಜನವರಿ 14ನೇ ತಾರೀಖಿಗೆ ನಮ್ಮ ಚಳವಳಿ ಆರಂಭವಾಗಿ ಒಂದು ವರ್ಷವಾಗುತ್ತದೆ. ಇದರ ನೆನಪಿಗಾಗಿ ಕೂಡಲ ಸಂಗಮದಲ್ಲಿ ಸಂಕ್ರಾಂತಿಯಂದು ಬೆಳಗ್ಗೆ 11ಕ್ಕೆ ಪಾದಯಾತ್ರೆಯ ವರ್ಷಾಚರಣೆ, ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಸಮಾಜದ ಎಲ್ಲ ಬಾಂಧವರು ಭಾಗವಹಿಸಬೇಕು. ಪಂಚಋುಣ ತೀರಿಸಿ ಹೊಸ ಇತಿಹಾಸ ನಿರ್ಮಿಸಬೇಕು ಎಂದರು.

ಇದು ನಮ್ಮ ನಾಲ್ಕನೇ ಹಂತದ ಚಳವಳಿಯಾಗಿದೆ. ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದೆವು. ರಾಜ್ಯಮಟ್ಟದ ಉಪವಾಸ ಸತ್ಯಾಗ್ರಹ ಮಾಡಿದೆವು. ರಾಜ್ಯಾದ್ಯಂತ ರಕ್ತ ದಾಸೋಹ, ಐತಿಹಾಸಿಕ ಪಾದಯಾತ್ರೆ ಮಾಡಿದೆವು. ಇಷ್ಟೆಲ್ಲಾ ಮಾಡಿದರೂ ಕೂಡ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪನವರು ಕೇವಲ ಭರವಸೆ ನೀಡುತ್ತ ನಮ್ಮ ಬೇಡಿಕೆಯ ಈಡೇರಿಕೆಗೆ ಸಮಯವನ್ನು ತೆಗೆದುಕೊಂಡರಷ್ಟೇ ಬೇರೆನೂ ಮಾಡಲಿಲ್ಲ ಎಂದು ದೂರಿದರು.

ಸರ್ಕಾರದಿಂದ ಈಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಮತ್ತಷ್ಟು ದಿನ ಕಾಯುತ್ತೇವೆ. ಅಲ್ಲಿವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಕರ್ನಾಟಕ ಸರ್ಕಾರ ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ(Kalyana Karnataka), ಮುಂಬೈ ಕರ್ನಾಟಕವನ್ನು(Mumbai Karnataka) ಕಿತ್ತೂರು ಕರ್ನಾಟಕ(Kittur Karnataka) ಎಂದು ಘೋಷಿಸಿದೆ. ಅದೇ ರೀತಿ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಮಲೆನಾಡಿಗೆ ಕೆಳದಿ ಕರ್ನಾಟಕ ಎಂದು ಘೋಷಿಸುವಂತೆ ಅವರು ಒತ್ತಾಯಿಸಿದರು.
 

click me!