ಪರೀಕ್ಷೆ ಕೊಠಡಿಯಲ್ಲಿ ತೀವ್ರ ತಲೆನೋವು: SSLC ವಿದ್ಯಾ​ರ್ಥಿ​ನಿಗೆ ಕೊರೋ​ನಾ

By Kannadaprabha NewsFirst Published Jul 1, 2020, 9:04 AM IST
Highlights

ಪರೀಕ್ಷೆ ಆರಂಭವಾಗಿ ಕೆಲವೇ ಹೊತ್ತಿನಲ್ಲಿ ತನಗೆ ವಿಪರೀತ ತಲೆನೋವಾಗುತ್ತಿದೆ ಎಂದು ಹೇಳಿದ್ದರಿಂದ ತಕ್ಷಣ ಆಕೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡಲಾಯಿತು. ಪರೀಕ್ಷೆಯ ನಂತರ ಆಕೆಯ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಆಕೆಗೆ ಸೋಂಕಿರುವುದು ದೃಢಪಟ್ಟಿದೆ. ಆಕೆಗೆ ಸೋಂಕು ಹೇಗೆ ತಗುಲಿತು ಎಂಬುದು ಖಚಿತವಾಗಿಲ್ಲ.

ಉಡು​ಪಿ(ಜು.01): ಉಡುಪಿ ಜಿಲ್ಲೆಯ ಇನ್ನೊಬ್ಬ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದೆ. ಈಕೆ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜು (ಬೋರ್ಡ್‌ ಹೈಸ್ಕೂಲ್‌)ನ ವಿದ್ಯಾರ್ಥಿನಿ. ಈಕೆ ಈಗಾಗಲೇ 3 ಪರೀಕ್ಷೆಗಳನ್ನು ಬರೆದಿದ್ದಾಳೆ, ಆದರೆ ಸೋಂಕು ತಗಲಿರುವುದರಿಂದ ಇನ್ನುಳಿದ 3 ಪರೀಕ್ಷೆಗಳನ್ನು ಬರೆಯುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾಳೆ.

ಸೋಮವಾರ ವಿಜ್ಞಾನ ಪರೀಕ್ಷೆಯನ್ನು ಈಕೆ ಬರೆದಿದ್ದಳು, ಪರೀಕ್ಷೆ ಮೊದಲು ಎಲ್ಲರಂತೆ ಆಕೆಗೂ ಥರ್ಮಲ್‌ ಸ್ಕ್ಯಾ‌ನಿಂಗ್‌ ಮಾಡಲಾಗಿತ್ತು, ಆಗ ಯಾವುದೇ ತೊಂದರೆ ಕಂಡು ಬಂದಿಲ್ಲ. ಆದರೆ ಪರೀಕ್ಷೆ ಆರಂಭವಾಗಿ ಕೆಲವೇ ಹೊತ್ತಿನಲ್ಲಿ ತನಗೆ ವಿಪರೀತ ತಲೆನೋವಾಗುತ್ತಿದೆ ಎಂದು ಹೇಳಿದ್ದರಿಂದ ತಕ್ಷಣ ಆಕೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡಲಾಯಿತು. ಪರೀಕ್ಷೆಯ ನಂತರ ಆಕೆಯ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಆಕೆಗೆ ಸೋಂಕಿರುವುದು ದೃಢಪಟ್ಟಿದೆ.

ಕೊರೋನಾ ಟೆಸ್ಟ್‌ನಲ್ಲಿ ರಾಜ್ಯಕ್ಕೆ 18ನೇ ಸ್ಥಾನ: ನಡೆಸುತ್ತಿರುವ ಪರೀಕ್ಷೆ ಬಹಳ ಕಡಿಮೆ!

ಆಕೆಗೆ ಸೋಂಕು ಹೇಗೆ ತಗುಲಿತು ಎಂಬುದು ಖಚಿತವಾಗಿಲ್ಲ, ಆದರೆ ಆಕೆಯ ಮನೆಗೆ ಮುಂಬೈಯಿಂದ ಬಂದು ಸೋಂಕು ಪತ್ತೆಯಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಇಬ್ಬರು ಇದ್ದರು.

ಈಗಾಗಲೇ ಕಾಪು ತಾಲೂಕಿನ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ, ಆಕೆಯೂ 2 ಪರೀಕ್ಷೆಗಳನ್ನು ಬರೆದಿದ್ದಳು. ಈ ಇಬ್ಬರಿಗೂ ಮುಂದಿನ ಪರೀಕ್ಷೆಗಳನ್ನು ಬರೆಯುವ ಅವಕಾಶ ಇಲ್ಲದಿರುವುದರಿಂದ, ಇಬ್ಬರಿಗೂ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಬರೆಯುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

'ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ'

ಕುಂದಾಪುರ ಪರೀಕ್ಷಾ ಕೇಂದ್ರದಲ್ಲಿ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆದ ಕೊಠಡಿಯನ್ನು ಮುಚ್ಚಿ ಸ್ಯಾನಿಟೈಸ್‌ ಮಾಡಲಾಗುತ್ತದೆ, ಅಲ್ಲಿನ ವಿದ್ಯಾರ್ಥಿಗಳನ್ನು ಬೇರೆ ಕೊಠಡಿಯಲ್ಲಿ ಪರೀಕ್ಷೆಗೆ ಕುಳ್ಳಿರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!