ವಿವಿಧ ಕ್ರೀಡೆಗಳಲ್ಲಿ ಮಿಂದೆದ್ದ ಕೊಡಗು ಪೊಲೀಸರು: ಐಜಿಪಿ ಡಾ.ಬೋರಲಿಂಗಯ್ಯ ಹೇಳಿದ್ದೇನು?

By Govindaraj SFirst Published Dec 2, 2023, 5:54 PM IST
Highlights

ಕರ್ತವ್ಯ, ಕಾನೂನು ಪಾಲನೆ ಎಂದೇ ಸದಾ ಬ್ಯುಸಿಯಾಗಿರುತ್ತಿದ್ದ ಇಡೀ ಜಿಲ್ಲೆಯ ಪೊಲೀಸರು ಎಲ್ಲವನ್ನೂ ಮರೆತು ಆಟೋಟಗಳಲ್ಲೇ ಮುಳುಗಿದ್ದರು. ವಿವಿಧ ಕ್ರೀಡೆಗಳಲ್ಲಿ ಮಿಂದೆದ್ದ ಆ ಪರಿ ಹೇಗಿತ್ತು ನೀವೆ ನೋಡಿ. ಗುರಿಮುಟ್ಟಲೇ ಬೇಕೆಂದು ಶರವೇಗದಲ್ಲಿ ಓಡುತ್ತಿರುವ ಪುರುಷರು, ಮಹಿಳೆಯರು. 
 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.02): ಕರ್ತವ್ಯ, ಕಾನೂನು ಪಾಲನೆ ಎಂದೇ ಸದಾ ಬ್ಯುಸಿಯಾಗಿರುತ್ತಿದ್ದ ಇಡೀ ಜಿಲ್ಲೆಯ ಪೊಲೀಸರು ಎಲ್ಲವನ್ನೂ ಮರೆತು ಆಟೋಟಗಳಲ್ಲೇ ಮುಳುಗಿದ್ದರು. ವಿವಿಧ ಕ್ರೀಡೆಗಳಲ್ಲಿ ಮಿಂದೆದ್ದ ಆ ಪರಿ ಹೇಗಿತ್ತು ನೀವೆ ನೋಡಿ. ಗುರಿಮುಟ್ಟಲೇ ಬೇಕೆಂದು ಶರವೇಗದಲ್ಲಿ ಓಡುತ್ತಿರುವ ಪುರುಷರು, ಮಹಿಳೆಯರು. ಉಸಿರು ಬಿಗಿಹಿಡಿದು ತಮ್ಮತ್ತ ಹಗ್ಗಜಗ್ಗುತ್ತಿರುವ ಸ್ಪರ್ಧಿಗಳು. ಗುಂಡು ಎಸೆದು ತೋಳಬಲ ಪ್ರದರ್ಶಿಸುತ್ತಿರುವ ಪುರಷರು. ಹೀಗೆ ಒಂದೆರಡಲ್ಲ, ಹತ್ತಾರು ಕ್ರೀಡೆಗಳಲ್ಲಿ ಭಾಗವಹಿಸಿ ಪೊಲೀಸರು ಎಂಜಾಯ್ ಮಾಡುತ್ತಿರುವುದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ. 

ಹೌದು ಪೊಲೀಸ್ ಇಲಾಖೆಯಿಂದ ಜಿಲ್ಲಾಮಟ್ಟದ 2023 ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಕಂಡುಬಂದ ದೃಶ್ಯಗಳಿವು. ಮಡಿಕೇರಿಯ ಜಿಲ್ಲಾ ಪೊಲೀಸ್ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಕೊಡಗು ಎಸ್ಪಿ ಕೆ. ರಾಮರಾಜನ್ ಸೇರಿದಂತೆ ಪ್ರಮುಖರು ಚಾಲನೆ ನೀಡಿದರು. ಹಗ್ಗಜಗ್ಗಾಟಕ್ಕೆ ಚಾಲನೆ ನೀಡುತ್ತಿದ್ದಂತೆ ಉತ್ಸಾಹದಲ್ಲಿ ಇದ್ದ ಪುರಷ ಮತ್ತು ಮಹಿಳಾ ಅಭ್ಯರ್ಥಿಗಳು ತಮ್ಮ ಇರುವ ಶಕ್ತಿಯನ್ನೆಲ್ಲಾ ಬಳಸಿ ತಮ್ಮತ್ತ ಹಗ್ಗ ಸೆಳೆದು ಗೆಲುವಿಗಾಗಿ ಸೆಣಸಿದರು. ಅಷ್ಟೇ ಅಲ್ಲ, ಕಬ್ಬಡ್ಡಿ, ರೀಲೆ, ನೂರು ಮೀಟರ್, ನಾಲ್ಕು ನೂರು ಮೀಟರ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. 

ಡಿಕೆಶಿ ಪ್ರಕರಣ ಹಿಂಪಡೆಯಲು ಸಿಎಂ ಒಪ್ಪಿದ್ದು ಒಂದು ಕರಾಳ ಅಧ್ಯಾಯ: ಸಿ.ಟಿ.ರವಿ

ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಯೊಬ್ಬರು ನಾನು ಪೊಲೀಸ್ ಇಲಾಖೆಗೂ ಬರುವ ಮುನ್ನ ಎನ್ಸಿಸಿ ಕೆಡೆಟ್ ಆಗಿದ್ದೆ. ಆಗ ಸಾಕಷ್ಟು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆವು. ಈಗ ಪೊಲೀಸ್ ಇಲಾಖೆಗೆ ಬಂದ ನಂತರವೂ ವಿವಿಧ ಕ್ರೀಡೆ, ಆಟೋಗಳಲ್ಲಿ ಭಾಗವಹಿಸುತ್ತಿದ್ದೇವೆ. ಇದು ತುಂಬಾ ಖುಷಿಕೊಟ್ಟಿದೆ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೊಲೀಸ್  ಸಿಬ್ಬಂದಿ ರೇಣುಕಾದೇವಿ ಸಂತಸವ್ಯಕ್ತಪಡಿಸಿದ್ದಾರೆ. ನಮ್ಮ ಫ್ಯಾಮಿಲಿಯವರು ಬಂದು ಸ್ಪರ್ಧೆಗಳನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಓಟದ ಸ್ಪರ್ಧೆಯಲ್ಲಿ ಒಂದು ರೀತಿ ಖುಷಿ ಅನುಭವಿಸಿದರೆ, ಕ್ರಿಕೆಟ್ ಸ್ಪರ್ಧೆಯಲ್ಲಿ ಮತ್ತೊಂದು ರೀತಿ ಎಂಜಾಯ್ ಮಾಡಿದರು. 

ಇನ್ನು ಹಗ್ಗಜಗ್ಗಾಟದಲ್ಲಿ ಸ್ಪರ್ಧಿಗಳು ಅನುಭವಿಸಿದ ಖುಷಿ ಅಷ್ಟಿಷ್ಟಲ್ಲಾ. ಎದುರು ಬದಿರು ಎರಡು ತಂಡಗಳು ಹಗ್ಗಗಳವನ್ನು ಹಿಡಿದು ಗೆಲುವಿಗಾಗಿ ನಡೆಸಿದ ಪೈಪೋಟಿ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಇನ್ನು ಕಬ್ಬಡಿ, ಥ್ರೋಬಾಲ್ ಕ್ರೀಡೆಗಳಲ್ಲಿ ಸ್ಪರ್ಧಿಗಳು ಸೆಣಸುತ್ತಿದ್ದರೆ ಸುತ್ತಲೂ ನೆರೆದಿದ್ದ ವೀಕ್ಷಕರು ಸಿಳ್ಳೆ, ಕೇಕೆ ಹಾಕಿ ಕೂಗಾಡುತ್ತಾ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು. ಲಾಂಗ್ ಜಂಪ್ ಮಾಡುತ್ತಾ ಜಿಗಿಯುವ ನಮ್ಮ ಶಕ್ತಿ ಎಂತಹದ್ದು ಎಂದು ಸಾಬೀತುಪಡಿಸುತ್ತಿದ್ದರೆ, ನಾನೆಷ್ಟು ದೂರಕ್ಕೆ ಭಾರದ ಗುಂಡನ್ನು ಎಸೆಯಬಹುದೆಂದು ಕರಸತ್ತು ನಡೆಸಿದ್ದು ಸಕತ್ತಾಗಿಯೇ ಇತ್ತು. 

ಸಚಿವ ಜೋಶಿಗೆ ಅವರಿಗೇನು ಅಂತರಾತ್ಮ ಇದೆಯಾ?: ಜಗದೀಶ್‌ ಶೆಟ್ಟರ್‌ ವ್ಯಂಗ್ಯ

ಕ್ರೀಡಾ ಕೂಟಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಅವರು ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯ ಎನ್ನುವುದು ಅತ್ಯಗತ್ಯ. ಹೀಗಾಗಿಯೇ ಪ್ರತೀ ವರ್ಷ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಇದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಸ್ಪರ್ಧೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅದು ಈ ಕ್ರೀಡಾಕೂಟದಲ್ಲಿ ಗೊತ್ತಾಗುತ್ತಿದೆ ಎಂದು ಅಭಿಪ್ರಾಯಿಸಿದರು. ಒಟ್ಟಿನಲ್ಲಿ ಯಾವಾಗಲೂ ಕರ್ತವ್ಯ, ಶಿಸ್ತು ಕಾನೂನು ಎಂದೆಲ್ಲಾ ಒತ್ತಡದಲ್ಲೇ ಬದುಕು ದೂಡುತ್ತಿದ್ದ ಕೊಡಗು ಪೊಲೀಸರು ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ ಪರಿ ಮಸ್ತಾಗಿತ್ತು ಎನ್ನುವುದು ಸತ್ಯ.

click me!