ರಾಜ್ಯದಲ್ಲಿ ಶೀಘ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಮತ್ತೊಂದು ಅಧಿಕಾರಕ್ಕೆ ಏರುವ ಭರವಸೆಯೂ ನಾಯಕರಲ್ಲಿ ಹೆಚ್ಚಾಗಿದೆ.
ಕೆ.ಆರ್. ಪೇಟೆ (ಜ.17): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡದೇ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಕರೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ,
ಪ್ರಸಕ್ತ ಗ್ರಾಪಂ ಚುನಾವಣೆಯಲ್ಲಿ ಪಕ್ಷದ 178 ಜನ ಬೆಂಬಲಿತರು ಚುನಾಯಿತರಾಗಿ, ಕನಿಷ್ಠ 12 ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಹಲವು ಪಂಚಾಯತಿಗಳಲ್ಲಿ ಕಾಂಗ್ರೆಸ… ಬೆಂಬಲವಿಲ್ಲದೆ ಜೆಡಿಎಸ್ ಅಥವಾ ಬಿಜೆಪಿಗೆ ಅಧಿಕಾರ ಹಿಡಿಯುವುದು ಅಸಾಧ್ಯ. ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಪೂರಕವಾಗುವಂತೆ ಅಗತ್ಯವಿರುವ ಕಡೆ ಜೆಡಿಎಸ್ ಅಥವಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಏಪ್ರಿಲ್ ಬಳಿಕ ಯಡಿಯೂರಪ್ಪನ್ನು ತೆಗೆಯುತ್ತಾರೆ : ಉನ್ನತ ಮೂಲದಿಂದ ಮಾಹಿತಿ ..
ಜ.22 ರಂದು ಗ್ರಾಪಂ ಅಧ್ಯಕ್ಷ - ಉಪಾಧ್ಯಕ್ಷ ಮೀಸಲು ನಿಗದಿ ಮಾಡಲಾಗುತ್ತದೆ. ಆ ವೇಳೆ ಪಕ್ಷದ ಎಲ್ಲಾ ಮುಖಂಡರೂ ಹಾಜರಿದ್ದು ಮೀಸಲು ನಿಗದಿಯಲ್ಲಿ ವ್ಯತ್ಯಾಸವಾದರೆ ಸ್ಥಳದಲ್ಲಿಯೇ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಅನಂತರ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ಹೋಬಳಿಗೂ 11 ಜನರ ಸಮಿತಿ ರಚಿಸಲಾಗುವುದು. ಪ್ರತೀ ಗ್ರಾಪಂ ವ್ಯಾಪ್ತಿಯಲ್ಲೂ 11 ಜನರ ಉಪ ಸಮಿತಿ ರಚಿಸುವ ಅಧಿಕಾರವನ್ನು ಹೋಬಳಿ ಸಮಿತಿಗೆ ನೀಡಲಾಗುವುದು. ಗ್ರಾಪಂ ವ್ಯಾಪ್ತಿಯ ಸಮಿತಿಗಳ ನೇತೃತ್ವದಲ್ಲಿ ಪ್ರತೀ ಗ್ರಾಮದಲ್ಲೂ ಕಾಂಗ್ರೆಸ್ ಬೂತ್ ಕಮಿಟಿ ರಚಿಸಿ ಪಕ್ಷಕ್ಕೆ ಬಲ ತುಂಬಲಾಗುವುದು ಎಂದು ಹೇಳಿದರು.
ಅಭಿವೃದ್ಧಿ ಹೆಸರೇಳಿ ಅಧಿಕಾರಕ್ಕೆ ಬಂದ ಸಚಿವ ಕೆ.ಸಿ. ನಾರಾಯಣಗೌಡರು ತಾಲೂಕಿನಲ್ಲಿ ಎಂಟು ಸಾವಿರಕ್ಕೂ ಅಧಿಕ ಅರ್ಜಿಗಳು ದರಕಾಸು ಸಮಿತಿಯ ಮುಂದೆ ವಿಲೇಗಾಗಿ ಕಾದಿವೆ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡು 2 ವರ್ಷ ಕಳೆದರೂ ಸಚಿವರಿಗೆ ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರ ಹೊಟ್ಟೆತುಂಬಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.
ದಶಕಗಳಿಂದ ನೆನಗುದಿಗೆ ಬಿದ್ದಿರುವ ಭೂಕನಕೆರೆ ಹೋಬಳಿಯ 3 ಸಾವಿರ ಎಕರೆ ಭೂ ಪ್ರದೇಶಕ್ಕೆ ನೀರುಣಿಸುವ ಹೊಸಹೊಳಲು ಕೆರೆ ಕೋಡಿ ಕಾಲುವೆ ಕಾಮಗಾರಿಯನ್ನು ಮೂರನೇ ಬಾರಿಗೆ ಶಾಸಕರಾಗಿ ಸಚಿವರಾದರೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸಚಿವರ ಕಾರ್ಯಲೋಪಗಳನ್ನು ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಜನರ ಮುಂದಿಡಬೇಕೆಂದು ಕರೆ ನೀಡಿದರು.